ಡೆಹ್ರಾಡೂನ್: ಕಾರು ಅಪಘಾತದಲ್ಲಿ ಗಾಯಗೊಂಡು ಇಲ್ಲಿನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಕ್ರಿಕೆಟಿಗ ರಿಷಬ್ ಪಂತ್ ಅವರನ್ನು ಬಾಲಿವುಡ್ ನಟರಾದ ಅನಿಲ್ ಕಪೂರ್ ಮತ್ತು ಅನುಪಮ್ ಖೇರ್ ಶನಿವಾರ ಭೇಟಿಯಾದರು.
ಶುಕ್ರವಾರ ಮುಂಜಾನೆ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ತನ್ನ ಐಷಾರಾಮಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ ಭಾರತದ ಸ್ಟಾರ್ ಕ್ರಿಕೆಟಿಗ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
'ಅವರು (ಪಂತ್) ಚೆನ್ನಾಗಿಯೇ ಇದ್ದಾರೆ. ಅಭಿಮಾನಿಗಳಾಗಿ ನಾವು ಅವರನ್ನು ಭೇಟಿಯಾದೆವು. ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸೋಣ ಮತ್ತು ಅವರು ಮತ್ತೆ ಆಡುವುದನ್ನು ನಾವು ನೋಡುತ್ತೇವೆ' ಎಂದು ಆಸ್ಪತ್ರೆಯಿಂದ ಹೊರಬಂದ ನಂತರ ಕಪೂರ್ ಸುದ್ದಿಗಾರರಿಗೆ ತಿಳಿಸಿದರು. ಕಪೂರ್ ಜೊತೆಗಿದ್ದ ಖೇರ್ ಅವರು ಕ್ರಿಕೆಟಿಗನನ್ನು ತುಂಬಾ ನಗಿಸಿದರು ಎಂದು ಹೇಳಿದರು.
'ಎಲ್ಲವು ಚೆನ್ನಾಗಿದೆ. ನಾವು ಪಂತ್, ಅವರ ತಾಯಿ ಮತ್ತು ಸಂಬಂಧಿಕರನ್ನು ಭೇಟಿ ಮಾಡಿದ್ದೇವೆ. ಅವರೆಲ್ಲರೂ ಚೆನ್ನಾಗಿದ್ದಾರೆ. ನಾವು ಆತ ತುಂಬಾ ನಗುವಂತೆ ಮಾಡಿದೆವು' ಎಂದು ಅವರು ಹೇಳಿದರು.
ತನ್ನ ತಾಯಿಯನ್ನು ಅಚ್ಚರಿಗೊಳಿಸಲೆಂದು ತನ್ನ ತವರೂರಾದ ರೂರ್ಕಿಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿ, 25 ವರ್ಷದ ಪಂತ್ ಅವರ ತಲೆ, ಬೆನ್ನು ಮತ್ತು ಪಾದಗಳಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
Advertisement