ಪ್ರಧಾನಿ ಮೋದಿ ಭದ್ರತಾ ಉಲ್ಲಂಘನೆ: ತನಿಖೆಗೆ ಪಂಚ ಸದಸ್ಯರ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್
ಮಹತ್ವದ ಬೆಳವಣಿಗೆಯಲ್ಲಿ ಪ್ರಧಾನಿ ಮೋದಿ ಅವರ ಭದ್ರತಾ ಉಲ್ಲಂಘನೆ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ದೇಶದ ಸರ್ವೋಚ್ಛ ನ್ಯಾಯಾಲಯ (Supreme Court) ಪಂಚ ಸದಸ್ಯರ ಸಮಿತಿಯನ್ನು ರಚನೆ ಮಾಡಿದೆ.
Published: 12th January 2022 12:48 PM | Last Updated: 12th January 2022 01:43 PM | A+A A-

ಸಂಗ್ರಹ ಚಿತ್ರ
ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಪ್ರಧಾನಿ ಮೋದಿ ಅವರ ಭದ್ರತಾ ಉಲ್ಲಂಘನೆ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ದೇಶದ ಸರ್ವೋಚ್ಛ ನ್ಯಾಯಾಲಯ (Supreme Court) ಪಂಚ ಸದಸ್ಯರ ಸಮಿತಿಯನ್ನು ರಚನೆ ಮಾಡಿದೆ.
ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್ನ ಫ್ಲೈಓವರ್ನಲ್ಲಿ 20 ನಿಮಿಷಗಳ ಕಾಲ ಸಿಲುಕಿಕೊಂಡಿದ್ದ ಭದ್ರತಾ ಲೋಪ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ಈ ಪಂಚ ಸದಸ್ಯರ ಸಮಿತಿ ರಚಿಸಿದ್ದು, ನಿವೃತ್ತ ನ್ಯಾಯಾಧೀಶ ಇಂದು ಮಲ್ಹೋತ್ರಾ ನೇತೃತ್ವದ ತನಿಖಾ ತಂಡದಿಂದ ಈ ತನಿಖೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಬುಧವಾರ ತಿಳಿಸಿದೆ.
ಅಂತೆಯೇ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಮತ್ತು ಪಂಜಾಬ್ ಪೊಲೀಸರು ವಿಚಾರಣೆಯ ಭಾಗವಾಗಲಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಈ ಉನ್ನತ ಮಟ್ಟದ ಸಮಿತಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಅವರಲ್ಲದೆ, ರಾಷ್ಟ್ರೀಯ ತನಿಖಾ ಸಂಸ್ಥೆಯ ಮಹಾನಿರ್ದೇಶಕರು, ಪಂಜಾಬ್ನ ಸೆಕ್ಯುರಿಟಿ ಜನರಲ್ ಮತ್ತು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಅವರು ಕೂಡ ಇರಲಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಇಂದು ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯ, 'ಯಾವುದೇ ಒಂದು ಕಡೆಯ ವಿಚಾರಣೆಯ ಮೇಲೆ ಈ ಪ್ರಶ್ನೆಗಳನ್ನು ಬಿಡಲಾಗುವುದಿಲ್ಲ. ನಮಗೆ ಸ್ವತಂತ್ರ ತನಿಖೆಯ ಅಗತ್ಯವಿದೆ" ಎಂದು ಅಭಿಪ್ರಾಯಪಟ್ಟಿದೆ.
ಪ್ರಧಾನಿ ಭದ್ರತಾ ಉಲ್ಲಂಘನೆಗೆ ಕಾರಣವೇನು, ಯಾರು ಹೊಣೆಗಾರರು ಹಾಗೂ ಭವಿಷ್ಯದಲ್ಲಿ ಇಂತಹ ಲೋಪಗಳನ್ನು ತಡೆಗಟ್ಟಲು ಯಾವ ರಕ್ಷಣಾತ್ಮಕ ಕ್ರಮಗಳ ಅಗತ್ಯವಿದೆ ಎಂಬುದರ ಕುರಿತು ಸಮಿತಿಯು ತನಿಖೆ ನಡೆಸುತ್ತದೆ ಹಾಗೂ ಅದರ ವರದಿಯನ್ನು ಆದಷ್ಟು ಬೇಗ ಸಲ್ಲಿಸುತ್ತದೆ ಎನ್ನಲಾಗಿದೆ.