ಬಿಕಾನೇರ್-ಗುವಾಹಟಿ ಎಕ್ಸ್ ಪ್ರೆಸ್ ರೈಲು ದುರಂತ: ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆ: ರೈಲ್ವೆ ಸಚಿವ ಭೇಟಿ, ತನಿಖೆಗೆ ಆದೇಶ, ಪರಿಹಾರ ಪ್ರಕಟ
ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ಬಿಕಾನೇರ್-ಗುವಾಹಟಿ ಎಕ್ಸ್ ಪ್ರೆಸ್ ರೈಲು ಅಪಘಾತದಲ್ಲಿ (Bikaner-Guwahati Express train accident )ಮೃತಪಟ್ಟ ಪ್ರಯಾಣಿಕರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ ಎಂದು ಈಶಾನ್ಯ ಫ್ರಾಂಟಿಯರ್ ರೈಲ್ವೆ (NFR) ವಕ್ತಾರ ತಿಳಿಸಿದ್ದಾರೆ.
Published: 14th January 2022 11:09 AM | Last Updated: 14th January 2022 02:01 PM | A+A A-

ರೈಲು ಅಪಘಾತದ ನಂತರದ ದೃಶ್ಯ ಮತ್ತು ಸ್ಥಳಕ್ಕೆ ರೈಲ್ವೆ ಸಚಿವರ ಭೇಟಿ
ಗುವಾಹಟಿ: ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಡೊಮೊಹನಿ ಎಂಬಲ್ಲಿ ಕಳೆದ ರಾತ್ರಿ ಬಿಕಾನೇರ್-ಗುವಾಹಟಿ ಎಕ್ಸ್ ಪ್ರೆಸ್ ರೈಲು ಅಪಘಾತದಲ್ಲಿ (Bikaner-Guwahati Express train accident )ಮೃತಪಟ್ಟ ಪ್ರಯಾಣಿಕರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ ಎಂದು ಈಶಾನ್ಯ ಫ್ರಾಂಟಿಯರ್ ರೈಲ್ವೆ (NFR) ವಕ್ತಾರ ತಿಳಿಸಿದ್ದಾರೆ.
ಮೃತಪಟ್ಟವರಲ್ಲಿ ಮೂವರ ಗುರುತು ಇನ್ನೂ ಪತ್ತೆಯಾಗಿಲ್ಲ. ಬಿಕಾನೇರ್-ಗುವಾಹಟಿ ಎಕ್ಸ್ಪ್ರೆಸ್ ರೈಲಿನ 12 ಬೋಗಿಗಳು ನಿನ್ನೆ ಜಲ್ಪೈಗುರಿ ಜಿಲ್ಲೆಯ ದೊಮೊಹಾನಿ ಬಳಿ ಹಳಿತಪ್ಪಿ ಮಗುಚಿ ಬಿದ್ದವು. ದುರ್ಘಟನೆಯಲ್ಲಿ ಗಾಯಗೊಂಡವರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ ಎಂದು ಈಶಾನ್ಯ ವಲಯ ರೈಲ್ವೆ ಮುಖ್ಯ ಸಾರ್ವಜನಿಕ ವಲಯ ಸಂಪರ್ಕಾಧಿಕಾರಿ ಗುನೀತ್ ಕೌರ್ ಹೇಳಿದ್ದಾರೆ.
ಜಲ್ಪೈಗುರಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 23 ಪ್ರಯಾಣಿಕರು ಚಿಕಿತ್ಸೆ ಪಡೆಯುತ್ತಿದ್ದರೆ, ಆರು ಮಂದಿ ಉತ್ತರ ಬಂಗಾಳ ವೈದ್ಯಕೀಯ ಕಾಲೇಜಿಗೆ ಮತ್ತು ಏಳು ಮಂದಿ ಮೇನಗುರಿ ಗ್ರಾಮೀಣ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಸ್ಥಳಕ್ಕೆ ರೈಲ್ವೆ ಸಚಿವರ ಭೇಟಿ: ದುರ್ಘಟನೆ ನಡೆದ ಸ್ಥಳಕ್ಕೆ ಇಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈಶಾನ್ಯ ವಲಯ ಪ್ರಧಾನ ವ್ಯವಸ್ಥಾಪಕ ಅನ್ಶುಲ್ ಗುಪ್ತಾ ಇಂದು ಮಧ್ಯರಾತ್ರಿ 12.08 ಗಂಟೆಗೆ ಸ್ಥಳಕ್ಕೆ ತಲುಪಿ ರೈಲು ಸಂಚಾರವನ್ನು ಸಾಮಾನ್ಯಗೊಳಿಸಲು ಹಳಿಗಳ ಮರುಸ್ಥಾಪನೆ ಕಾರ್ಯವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸ್ಥಳದಲ್ಲಿ ಪ್ರಯಾಣಿಕರ ಪರಿಹಾರ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಗುನೀತ್ ಕೌರ್ ಹೇಳಿದ್ದಾರೆ.
West Bengal: Railway Minister @AshwiniVaishnaw reaches the train accident site near Domohani, Jalpaiguri to take stock of the situation. pic.twitter.com/Dv0vrYGMzP
— All India Radio News (@airnewsalerts) January 14, 2022
ತನಿಖೆಗೆ ಆದೇಶ: ಪ್ರಾಥಮಿಕ ತನಿಖೆ ಪ್ರಕಾರ, ಎಂಜಿನ್ ಉಪಕರಣಗಳಲ್ಲಿ ದೋಷವೇ ಅಪಘಾತಕ್ಕೆ ಕಾರಣ ಎಂದು ಕಂಡುಬಂದಿದ್ದು, ರೈಲ್ವೆ ಸುರಕ್ಷತಾ ಆಯೋಗ ಅಪಘಾತಕ್ಕೆ ನಿಖರ ಮೂಲ ಕಾರಣದ ತನಿಖೆ ನಡೆಸಲಿದೆ. ದುರ್ಘಟನೆ ಬಗ್ಗೆ ಶಾಸನಬದ್ಧ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ. ಪ್ರಧಾನಿ ಮೋದಿಯವರು ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ. ನಾನು ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಹಳಿ ತಪ್ಪಿದ ರೈಲು: ಮೂವರ ಸಾವು, 15 ಜನರಿಗೆ ಗಾಯ
ಪರಿಹಾರ ಘೋಷಣೆ: ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಮತ್ತು ಗಂಭೀರವಾಗಿ ಗಾಯಗೊಂಡಿರುವವರಿಗೆ ತಲಾ 50 ಸಾವಿರ ರೂಪಾಯಿ ಹಾಗೂ ಸಣ್ಣಪುಟ್ಟ ಗಾಯಗಳಿಂದ ಪಾರಾದವರಿಗೆ ತಲಾ 25 ಸಾವಿರ ರೂಪಾಯಿ ಪರಿಹಾರ ನೀಡಲಾಗುತ್ತಿದೆ ಎಂದು ಸಹ ರೈಲ್ವೆ ಸಚಿವರು ತಿಳಿಸಿದ್ದಾರೆ.