ಗಣರಾಜ್ಯೋತ್ಸವ 2022: ಸ್ತಬ್ಧ ಚಿತ್ರ ತಿರಸ್ಕಾರ ವಿವಾದ; ರಾಜ್ಯಗಳ ಟೀಕೆ ತಪ್ಪು ನಿದರ್ಶನ ಎಂದ ಕೇಂದ್ರ ಸರ್ಕಾರ
ಗಣರಾಜ್ಯೋತ್ಸವದ ಪರೇಡ್ನಿಂದ ತಮ್ಮ ಸ್ತಬ್ಧ ಚಿತ್ರಗಳನ್ನು ಹೊರಗಿಟ್ಟಿರುವುದು ಅವಮಾನ ಎಂದು ಆರೋಪಿಸಿದ್ದಕ್ಕಾಗಿ ರಾಜ್ಯಗಳನ್ನು ತರಾಟೆಗೆ ತೆಗೆದುಕೊಂಡಿರುವ ಕೇಂದ್ರ ಸರ್ಕಾರ, ಇದು ತಪ್ಪು ನಿದರ್ಶನ ಎಂದು ಹೇಳಿದೆ ಮತ್ತು ಇದನ್ನು ನಿರ್ಧರಿಸುವುದು ಕೇಂದ್ರವಲ್ಲ, ತಜ್ಞರ ಸಮಿತಿ ಶಾರ್ಟ್ ಲಿಸ್ಟ್ ತಯಾರು ಮಾಡುತ್ತದೆ ಎಂದು ಹೇಳಿದೆ.
Published: 17th January 2022 08:43 PM | Last Updated: 18th January 2022 12:57 PM | A+A A-

ಗಣರಾಜ್ಯೋತ್ಸವಕ್ಕಾಗಿ ತಯಾರಿ ನಡೆಸುತ್ತಿರುವ ಭಾರತೀಯ ಸೇನಾ ಕಮಾಂಡರ್ ಗಳು
ನವದೆಹಲಿ: ಗಣರಾಜ್ಯೋತ್ಸವದ ಪರೇಡ್ನಿಂದ ತಮ್ಮ ಸ್ತಬ್ಧ ಚಿತ್ರಗಳನ್ನು ಹೊರಗಿಟ್ಟಿರುವುದು ಅವಮಾನ ಎಂದು ಆರೋಪಿಸಿದ್ದಕ್ಕಾಗಿ ರಾಜ್ಯಗಳನ್ನು ತರಾಟೆಗೆ ತೆಗೆದುಕೊಂಡಿರುವ ಕೇಂದ್ರ ಸರ್ಕಾರ, ಇದು ತಪ್ಪು ನಿದರ್ಶನ ಎಂದು ಹೇಳಿದೆ ಮತ್ತು ಇದನ್ನು ನಿರ್ಧರಿಸುವುದು ಕೇಂದ್ರವಲ್ಲ, ತಜ್ಞರ ಸಮಿತಿ ಶಾರ್ಟ್ ಲಿಸ್ಟ್ ತಯಾರು ಮಾಡುತ್ತದೆ ಎಂದು ಹೇಳಿದೆ.
ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಸ್ತಬ್ಧ ಚಿತ್ರಗಳ ಪ್ರಸ್ತಾವಗಳನ್ನು ಚರ್ಚೆಗಳ ಬಳಿಕ ತಜ್ಞರ ಸಮಿತಿ ತಿರಸ್ಕರಿಸುವುದಾಗಿ ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ. ಈ ವಿಚಾರವನ್ನು ಕೇಂದ್ರ ಮತ್ತು ರಾಜ್ಯಗಳ ನಡುವಿನ ಘರ್ಷಣೆಯಾಗಿ ಬಿಂಬಿಸಲು ರಾಜ್ಯಗಳು ಮುಖ್ಯಮಂತ್ರಿಗಳು ಅಳವಡಿಸಿಕೊಂಡದ್ದು ತಪ್ಪು ನಿದರ್ಶನವಾಗಿದೆ. ಇದು ದೇಶದ ಒಕ್ಕೂಟ ವ್ಯವಸ್ಥೆಗೆ ಹಾಳಾಗಲು ಕಾರಣವಾಗುತ್ತದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಾಜ್ಯಗಳು ಹಾಗೂ ಕೇಂದ್ರ ಸಚಿವಾಲಯಗಳಿಂದ 56 ಸ್ತಬ್ಧಚಿತ್ರಗಳ ಪ್ರಸ್ತಾವ ಬಂದಿದ್ದು, ಇದರಲ್ಲಿ 21 ಶಾರ್ಟ್ ಲಿಸ್ಟ್ ಮಾಡಲಾಗಿದೆ. ಸಮಯಾವಕಾಶದ ಕೊರತೆಯಿಂದ ಸ್ವೀಕರಿಸಿದ ಪ್ರಸ್ತಾವನೆಗಳಿಗಿಂತ ಹೆಚ್ಚಿನ ಪ್ರಸ್ತಾವನೆಗಳು ತಿರಸ್ಕೃತಗೊಳ್ಳುವುದು ಸಹಜ ಎಂದು ಮೂಲಗಳು ತಿಳಿಸಿವೆ. ಪ್ರತಿ ವರ್ಷ ಇದೇ ರೀತಿಯ ಆಯ್ಕೆ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲಾಗುತ್ತದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ತಮ್ಮ ರಾಜ್ಯಗಳ ಸ್ತಬ್ಧ ಚಿತ್ರಗಳನ್ನು ಕೈಬಿಟ್ಟಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಅವರ ಮಧ್ಯಸ್ಥಿಕೆಗಾಗಿ ಒತ್ತಾಯಿಸಿದ್ದಾರೆ. ತಮ್ಮ ಸ್ತಬ್ಧ ಚಿತ್ರಗಳ ಮನವಿಯನ್ನು ತಿರಸ್ಕರಿಸುವ ಮೂಲಕ ತಮಿಳುನಾಡು ಜನರ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಥಬ್ಧ ಚಿತ್ರ ಮನವಿಯನ್ನು ಕೈಬಿಟ್ಟಿರುವುದು ರಾಜ್ಯದ ಜನರಿಗೆ ಮಾಡಿರುವ ಅಪಮಾನವಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಕೇರಳ ನಾರಾಯಣ ಗುರು ಸ್ತಬ್ಧ ಚಿತ್ರ ತಿರಸ್ಕರಿಸಿದ ಕೇಂದ್ರದ ನಡೆಯನ್ನು ಕೇರಳದ ರಾಜಕಾರಣಿಗಳು ಮಾತ್ರವಲ್ಲದೇ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಮತ್ತಿತರರು ಟೀಕಿಸಿದ್ದರು.
2018 ಮತ್ತು 2021ರಲ್ಲಿ ಕೇರಳ ಸರ್ಕಾರ ಸಲ್ಲಿಸಿದ್ದ ಸ್ತಬ್ಧ ಚಿತ್ರಗಳ ಮನವಿಯನ್ನು ಪುರಸ್ಕರಿಸಲಾಗಿದೆ. ಇನ್ನು ತಮಿಳುನಾಡು ಸರ್ಕಾರದ 2016, 2017,2019,2020 ಮತ್ತು 2021ರ ಸ್ತಬ್ಧ ಚಿತ್ರಗಳಿಗೆ ಗಣರಾಜ್ಯೋತ್ಸವ ಪರೇಡ್ ನಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಪಶ್ಚಿಮ ಬಂಗಾಳ ಸರ್ಕಾರದ 2016, 2019 ಮತ್ತು 2021 ರ ಸ್ತಬ್ಧ ಚಿತ್ರಗಳು ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡಿವೆ. ಹೀಗಾಗಿ ಕೇಂದ್ರ ಸರ್ಕಾರ ಯಾವುದೇ ತಾರತಮ್ಯ ಮಾಡುತ್ತಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆಯಲ್ಲಿ ತಿಳಿಸಿದೆ.