ಇತಿಹಾಸದಲ್ಲೇ ಮೊದಲು: ಶ್ರೀನಗರದ ಲಾಲ್ ಚೌಕ್ ಪ್ರದೇಶದ ಗಡಿಯಾರ ಗೋಪುರ ಮೇಲೆ ಹಾರಿದ ತ್ರಿವರ್ಣಧ್ವಜ!
73ನೇ ಗಣರಾಜ್ಯೋತ್ಸವದ ಅಂಗವಾಗಿ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತೀಯ ತ್ರಿವರ್ಣ ಧ್ವಜವನ್ನು ಶ್ರೀನಗರದ ಪ್ರಸಿದ್ಧ ಲಾಲ್ ಚೌಕ್ ಪ್ರದೇಶದ ಗಡಿಯಾರ ಗೋಪುರದ ಮೇಲೆ ಹಾರಿಸಲಾಯಿತು.
Published: 26th January 2022 04:25 PM | Last Updated: 26th January 2022 04:25 PM | A+A A-

ಲಾಲ್ ಚೌಕ್
ಶ್ರೀನಗರ: 73ನೇ ಗಣರಾಜ್ಯೋತ್ಸವದ ಅಂಗವಾಗಿ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತೀಯ ತ್ರಿವರ್ಣ ಧ್ವಜವನ್ನು ಶ್ರೀನಗರದ ಪ್ರಸಿದ್ಧ ಲಾಲ್ ಚೌಕ್ ಪ್ರದೇಶದ ಗಡಿಯಾರ ಗೋಪುರದ ಮೇಲೆ ಹಾರಿಸಲಾಯಿತು. ಭಾರತದ ಸ್ವಾತಂತ್ರ್ಯದ ನಂತರ ಗಡಿಯಾರ ಗೋಪುರದ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿರುವುದು ಇದೇ ಮೊದಲು.
ಭಾರತದ 73 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಇಬ್ಬರು ಸ್ಥಳೀಯ ಕಾರ್ಯಕರ್ತರಾದ ಸಾಜಿದ್ ಯೂಸುಫ್ ಶಾ ಮತ್ತು ಸಾಹಿಲ್ ಬಶೀರ್ ಅವರು ಸ್ಥಳೀಯರು ಎನ್ಜಿಒ ಮತ್ತು ಆಡಳಿತದೊಂದಿಗೆ ಲಾಲ್ ಚೌಕ್ ಪ್ರದೇಶದಲ್ಲಿ ಗಡಿಯಾರ ಗೋಪುರದ ಮೇಲೆ ಕ್ರೇನ್ ಮೂಲಕ ಧ್ವಜಾರೋಹಣ ನೆರವೇರಿಸಿದರು.
‘ಸ್ವಾತಂತ್ರ್ಯದ ನಂತರ, ಗಡಿಯಾರ ಗೋಪುರದ ಮೇಲೆ ಕಣಿವೆಯಲ್ಲಿ ಶಾಂತಿಯನ್ನು ಕದಡಲು ಬಯಸಿದ ಪಾಕಿಸ್ತಾನಿ ಪ್ರಾಯೋಜಿತ ಘಟಕಗಳು ಪಾಕಿಸ್ತಾನದ ಧ್ವಜ ಹಾರಿಸುವುದನ್ನು ಮಾತ್ರ ನೋಡಿದ್ದೇವೆ. ಆರ್ಟಿಕಲ್ 370 ರದ್ದಾದ ನಂತರ ನಮ್ಮ ರಾಷ್ಟ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿರುವುದನ್ನು ನಾವು ಗಮನಿಸಬಹುದು. ನಯಾ ಕಾಶ್ಮೀರ ಎಂದರೆ ಏನು ಎಂದು ಜನ ಕೇಳುತ್ತಿದ್ದರು. ಇಂದು ಗಡಿಯಾರ ಗೋಪುರದ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವುದೇ ನಯಾ ಕಾಶ್ಮೀರವಾಗಿದೆ ಎಂದು ನಾನು ಹೇಳುತ್ತೇನೆ. ಜಮ್ಮು ಮತ್ತು ಕಾಶ್ಮೀರದ ಜನತೆ ಬಯಸಿದ್ದು ಇದನ್ನೇ. ನಮಗೆ ಯಾವುದೇ ಪಾಕಿಸ್ತಾನಿ ಧ್ವಜಗಳು ಬೇಡ, ನಮಗೆ ಶಾಂತಿ ಮತ್ತು ಅಭಿವೃದ್ಧಿ ಬೇಕು ಎಂದು ಧ್ವಜಾರೋಹಣ ನೆರವೇರಿಸಿದ ಸಾಮಾಜಿಕ ಕಾರ್ಯಕರ್ತ ಸಾಹಿಲ್ ಬಶೀರ್ ಹೇಳಿದರು.
ಲಾಲ್ ಚೌಕ್ ನಲ್ಲಿರುವ ಗಡಿಯಾರ ಗೋಪುರವು ಯಾವಾಗಲೂ ಕಾಶ್ಮೀರದ ರಾಜಕೀಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ದೇಶದ ಮತ್ತು ಜಮ್ಮು ಮತ್ತು ಕಾಶ್ಮೀರದ ಎಲ್ಲಾ ದೊಡ್ಡ ನಾಯಕರು ಗಡಿಯಾರ ಗೋಪುರದ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ.
“ಭಾರತದ ಸ್ವಾತಂತ್ರ್ಯದ ನಂತರ, ಇದು ರಾಷ್ಟ್ರಧ್ವಜವನ್ನು ಹೊಂದಿರದ ಏಕೈಕ ಸ್ಥಳವಾಗಿತ್ತು. ಆದರೆ ಇಂದು ಧ್ವಜ ಹಾರಿಸುವ ಮೂಲಕ ಈ ಅಪವಾದವನ್ನು ಕಿತ್ತೊಗೆದಿದ್ದೇವೆ. ಬಹಳಷ್ಟು ಜನರು ಈ ಮೊದಲು ಧ್ವಜ ಹಾರಿಸಲು ಪ್ರಯತ್ನಿಸಿದರು, ಆದರೆ ನಾವು ಮಾತ್ರ ಯಶಸ್ವಿಯಾಗಿದ್ದೇವೆ. ಒಬ್ಬ ಭಾರತೀಯನಾಗಿ ನಾವು ಇಲ್ಲಿ ಧ್ವಜಾರೋಹಣ ಮಾಡಿದ್ದೇವೆ. ಅದು ನಮಗೆ ಸಂತೋಷ ತಂದಿದೆ ಎಂದು ಮತ್ತೊಬ್ಬ ಕಾರ್ಯಕರ್ತ ಸಾಜಿದ್ ಯೂಸುಫ್ ಹೇಳಿದರು.
ಈ ಸಂದರ್ಭಕ್ಕೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಮರ ಕಲಾ ಪ್ರದರ್ಶಕರು ಹಾಗೂ ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದರು. ಕಾಶ್ಮೀರ ಕಣಿವೆಯಾದ್ಯಂತ ವಿಶೇಷವಾಗಿ ಶ್ರೀನಗರ ನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ನಗರಾದ್ಯಂತ ಬ್ಯಾರಿಕೇಡ್ ಗಳನ್ನು ಹಾಕಲಾಗಿತ್ತು. ತಪಾಸಣೆ ನಡೆಸಿದ ಬಳಿಕವೇ ವಾಹನಗಳಿಗೆ ಅನುಮತಿ ನೀಡಲಾಯಿತು. ಇಂದು ಬೆಳಗ್ಗೆ ಮೊಬೈಲ್ ಇಂಟರ್ ನೆಟ್ ಕೂಡ ಸ್ಥಗಿತಗೊಳಿಸಲಾಗಿತ್ತು.