ಪಣಜಿ: ಅಸ್ಸಾಂನಿಂದ ವಾಪಸ್ಸಾದ ಬಳಿಕ ಗೋವಾದಲ್ಲಿ ತಂಗಿದ್ದ ಶಿವಸೇನಾ ಬಂಡಾಯ ಶಾಸಕರು ಇಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೊಂದಿಗೆ ಮುಂಬೈ ತಲುಪಿದರು. ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ ಶನಿವಾರ ಪಕ್ಷ ವಿರೋಧಿ ಚಟುವಟಿಕೆಗಾಗಿ ಏಕನಾಥ್ ಶಿಂಧೆ ಅವರನ್ನು ಪಕ್ಷದಿಂದ ಅಮಾನತುಗೊಳಿಸದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಶಿವಸೇನೆ ಪಕ್ಷದ ಅಧ್ಯಕ್ಷನಾಗಿ ನನಗೆ ನೀಡಲಾದ ಅಧಿಕಾರವನ್ನು ಚಲಾಯಿಸಿ, ನಿಮ್ಮನ್ನು ಪಕ್ಷ ಸಂಘಟನೆಯಲ್ಲಿನ ಮುಖ್ಯಸ್ಥನ ಸ್ಥಾನದಿಂದ ತೆಗೆದುಹಾಕುತ್ತೇನೆ ಎಂದು ಉದ್ಧವ್ ಠಾಕ್ರೆ, ಬಂಡಾಯ ಶಿವಸೇನಾ ಶಾಸಕರ ಬಣದ ನೇತೃತ್ವ ವಹಿಸಿದ್ದ ಮಹಾರಾಷ್ಟ್ರ ಸಿಎಂಗೆ ಪತ್ರ ಬರೆದಿದ್ದಾರೆ.
ಈ ಮಧ್ಯೆ ಸೋಮವಾರ ಏಕನಾಥ್ ಶಿಂಧೆ ವಿಶ್ವಾಸಮತ ಯಾಚಿಸಲಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ವಿಧಾನಸಭಾಧ್ಯಕ್ಷರ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದ್ದು, ಶಾಸಕ ರಾಹುಲ್ ನರ್ವೆಕರ್ ಅವರನ್ನು ಬಿಜೆಪಿ ಆಯ್ಕೆ ಮಾಡಿದ್ದು, ಶಿವಸೇನೆ ಶಾಸಕ ರಂಜನ್ ಸಾಲ್ವಿ ಅವರನ್ನು ಕಣಕ್ಕಿಳಿಸಿದೆ.
ಗುರುವಾರ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಏಕನಾಥ್ ಶಿಂಧೆ, ಸೋಮವಾರ ಅಸೆಂಬ್ಲಿಯಲ್ಲಿ ಬಹುಮತವನ್ನು ಸಾಬೀತುಪಡಿಸಲಿದ್ದಾರೆ. ಭಾನುವಾರ ಮತ್ತು ಸೋಮವಾರ ಮಹಾರಾಷ್ಟ್ರ ಅಸೆಂಬ್ಲಿಯ ವಿಶೇಷ ಅಧಿವೇಶನ ನಡೆಯಲಿದೆ.
Advertisement