ನಾಸಿಕ್: ಅಫ್ಘಾನಿಸ್ತಾನದಿಂದ ಬಂದು ಭಾರತದಲ್ಲಿ ಆಶ್ರಯ ಪಡೆದಿದ್ದ ಮೌಲ್ವಿಯೋರ್ವರನ್ನು ನಾಸಿಕ್ ನಲ್ಲಿ ಹತ್ಯೆ ಮಾಡಲಾಗಿದೆ.
ಯೆಯೋಲಾ ಟೌನ್ ನಲ್ಲಿ ಮೌಲ್ವಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ತನಿಖಾಧಿಕಾರಿಯ ಪ್ರಕಾರ ಸಂಜೆ 7.15 ಕ್ಕೆ ಈ ಘಟನೆ ನಡೆದಿದ್ದು, ಎಂಐಡಿಸಿ ಇಂಡಸ್ಟ್ರಿಯಲ್ ಝೋನ್ ನಲ್ಲಿ ಈ ಘಟನೆ ನಡೆದಿದೆ.
ನಾಲ್ವರು ಅನಾಮಿಕ ದುಷ್ಕರ್ಮಿಗಳು ಏಕಾಏಕಿ ಅಲ್ಲಿಗೆ ಬಂದು ಅಫ್ಘಾನ್ ಮೂಲದ ಮೌಲ್ವಿಯನ್ನು ಗುರಿಯಾಗಿರಿಸಿಕೊಂಡು ಹಲವು ಸುತ್ತುಗಳ ಗುಂಡಿನ ದಾಳಿ ನಡೆಸಿದ್ದು ಹತ್ಯೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಗಳ ಮೂಲಕ ತಿಳಿದುಬಂದಿದೆ.
ಸಂತ್ರಸ್ತನನ್ನು ಖ್ವಾಜಾ ಸಯೀದ್ ಚಿಸ್ತಿ ಎಂದು ಗುರುತಿಸಲಾಗಿದ್ದು, ಸೂಫಿಬಾಬಾ ಎಂದೇ ಹೆಸರು ಪಡೆದಿದ್ದ ಈತ ಅಫ್ಘಾನಿಂದ ಬಂದಿದ್ದ ನಿರಾಶ್ರಿತನಾಗಿದ್ದ ಹಾಗೂ ಹಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪ್ರವಚನ ನೀಡುತ್ತಿದ್ದರು.
ಈ ದುಷ್ಕೃತ್ಯ ಎಸಗಿದ ಬಳಿಕ ಘಟನಾ ಸ್ಥಳದ ಹತ್ತಿರದಲ್ಲೇ ನಿಲ್ಲಿಸಿದ್ದ ಎಸ್ ಯುವಿಯಲ್ಲಿ ಹಂತಕರು ಪರಾರಿಯಾಗಿದ್ದಾರೆ. ಆಸ್ತಿಯ ವಿಷಯವಾಗಿ ಈ ಹತ್ಯೆ ನಡೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದ್ದು, ಹಂತಕರಿಗಾಗಿ ಶೋಧಕಾರ್ಯ ಮುಂದುವರೆದಿದೆ. ತನಿಖೆಗಾಗಿ ವಿಶೇಷ ತಂಡವನ್ನು ಪೊಲೀಸರು ರಚಿಸಿದ್ದಾರೆ.
Advertisement