ಪಯ್ಯನ್ನೂರು(ಕೇರಳ): ಕೇರಳ ರಾಜ್ಯದ ಕಣ್ಣೂರು (Kannur) ಜಿಲ್ಲೆಯ ಪಯ್ಯನ್ನೂರಿನಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕಚೇರಿ ಮೇಲೆ ಮಂಗಳವಾರ ಬೆಳಗ್ಗೆ ಬಾಂಬ್ ದಾಳಿ ನಡೆದಿದೆ. ಘಟನೆಯಲ್ಲಿ ಕಟ್ಟಡದ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಸ್ಥಳೀಯ ಪೊಲೀಸ್ ಠಾಣೆ ಸಮೀಪದಲ್ಲಿಯೇ ಈ ದಾಳಿ (Bomb Hurled At RSS Office) ನಡೆದಿದೆ.
ಬಾಂಬ್ ದಾಳಿಯ ಯಾರಿಗೂ ಗಾಯಗಳಾಗಿಲ್ಲ, ದಾಳಿಯಲ್ಲಿ ಕಟ್ಟಡದ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ ಎಂದು ಪಯ್ಯನ್ನೂರು ಪೊಲೀಸರು ತಿಳಿಸಿದ್ದಾರೆ. ಬಾಂಬ್ ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ಆರ್ಎಸ್ಎಸ್ ಕಚೇರಿ ಮೇಲಿನ ದಾಳಿಯ ಕುರಿತು ಪ್ರತಿಕ್ರಿಯೆ ನೀಡಿದ ಬಿಜೆಪಿ ನಾಯಕ ಟಾಮ್ ವಡಕ್ಕನ್, ಪೊಲೀಸರ ಕುಮ್ಮಕ್ಕು ತುಂಬಾ ಅಪಾಯಕಾರಿ. ಪೊಲೀಸ್ ಠಾಣೆ 100 ಮೀಟರ್ ದೂರದಲ್ಲಿದ್ದರೂ ಆಗಿಲ್ಲವೆಂದರೆ ಪೊಲೀಸರಿದ್ದೂ ಕಣ್ಣುಮುಚ್ಚಿ ಕುಳಿತಿದ್ದಾರೆಯೇ, ಕಣ್ಣೂರಿನಂತಹ ಸೂಕ್ಷ್ಮ ಜಿಲ್ಲೆಯಲ್ಲಿ ಕಚೇರಿಗಳಿಗೆ ವಿಶೇಷವಾಗಿ ರಕ್ಷಣೆ ನೀಡಬೇಕು. ಅಂತಹ ರಕ್ಷಣೆ ನೀಡಿಲ್ಲ. ರಾಜ್ಯದಲ್ಲಿ ಯಾವುದೇ ರಾಜಕೀಯ ಕಚೇರಿಗೆ ಹಾನಿಯಾದರೆ ರಾಜ್ಯ ಸರ್ಕಾರವೇ ಹೊಣೆಯಾಗಲಿದೆ ಎಂದು ಸರ್ಕಾರವನ್ನು ಆರೋಪಿಸಿದ್ದಾರೆ.
ಮಧ್ಯರಾತ್ರಿ 1.30 ರ ಸುಮಾರಿಗೆ ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಪಯ್ಯನ್ನೂರಿನಲ್ಲಿರುವ ರಾಷ್ಟ್ರ ಭವನ ಎಂಬ ಆರ್ಎಸ್ಎಸ್ ಕಚೇರಿಯ ಮೇಲೆ ಸ್ಥಳೀಯವಾಗಿ ತಯಾರಿಸಿದ ಬಾಂಬ್ ಅನ್ನು ಎಸೆದಿದ್ದಾರೆ ಎಂದು ತಿಳಿದುಬಂದಿದೆ.ಈ ಪ್ರದೇಶವು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಸಿಪಿಎಂ ಕಾರ್ಯಕರ್ತರ ನಡುವೆ ಹಿಂಸಾತ್ಮಕ ಘರ್ಷಣೆಯ ಇತಿಹಾಸವನ್ನು ಹೊಂದಿದೆ. 2010-2016ರ ನಡುವೆ ಈ ಪ್ರದೇಶದಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಮೇಲೆ ಹಲವಾರು ದಾಳಿಗಳು ನಡೆದಿವೆ.
ಸಿಪಿಎಂ ಕೈವಾಡ?: ಈ ದಾಳಿಯ ಹಿಂದೆ ಸಿಪಿಎಂ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ. ಘಟನೆಯ ವೇಳೆ ಆರ್ಎಸ್ಎಸ್ ಕಚೇರಿಯಲ್ಲಿ ಬೆರಳೆಣಿಕೆಯಷ್ಟು ಜನರಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪೊಲೀಸರು ಬೆಳಗ್ಗೆ 6 ಗಂಟೆಗೆ ಸ್ಥಳಕ್ಕೆ ಆಗಮಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಲಭ್ಯತೆಯ ಕೊರತೆಯಿಂದಾಗಿ ಕೃತ್ಯದ ಹಿಂದಿರುವ ವ್ಯಕ್ತಿಗಳ ಗುರುತು ಪತ್ತೆ ಹಚ್ಚುವುದು ಕಷ್ಟಕರವಾಗಿದೆ.
Advertisement