ನವದೆಹಲಿ: ಇಂದು ಗುರುಪೂರ್ಣಿಮೆ ದಿನ. ಜೀವನದಲ್ಲಿ ನಿರ್ದಿಷ್ಟ ಗುರಿ, ಸಾರ್ಥಕ ಜೀವನಕ್ಕೆ ದಾರಿ ತೋರಿದ ಸಮಸ್ತ ಗುರುಗಳಿಗೆ ವಂದನೆ ಸಲ್ಲಿಸುವ ಮೂಲಕ ದೇಶಾದ್ಯಂತ ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಗುರುಪೂರ್ಣಿಮೆಯ ಶುಭಾಶಯ ತಿಳಿಸಿದ್ದಾರೆ.
ಗುರು ಪೂರ್ಣಿಮೆ ದಿನವಾದ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಜೀವನದ ಬಗ್ಗೆ ಜನರಿಗೆ ತುಂಬಾ ಸ್ಫೂರ್ತಿ, ಮಾರ್ಗದರ್ಶನ ಮತ್ತು ಕಲಿಸಿದ ಎಲ್ಲಾ ಆದರ್ಶಪ್ರಾಯ ಗುರುಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನ ಇದಾಗಿದೆ. ಭಾರತೀಯ ಸಮಾಜವು ಕಲಿಕೆ ಬುದ್ಧಿವಂತಿಕೆಗೆ ಅಪಾರ ಪ್ರಾಮುಖ್ಯತೆ ನೀಡುತ್ತದೆ ಎಂದು ಹೇಳಿದ್ದಾರೆ.
ಶಿಷ್ಯರ ಬದುಕಿನಲ್ಲಿ ಪ್ರೀತಿ-ಅಭಿಮಾನ, ವಿಶ್ವಾಸಗಳ ಮಹಾಪೂರ ಹರಿಸಿ, ಶಿಷ್ಯಕೋಟಿಯ ಅಂತಃಕರಣವನ್ನು ತೊಳೆದು, ಶುದ್ಧಾತ್ಮರನ್ನಾಗಿಸುವ ವ್ಯಕ್ತಿಯೇ ಶ್ರೇಷ್ಠ ಗುರು ಎನಿಸಿಕೊಳ್ಳುತ್ತಾರೆ. ಸಮಾಜದ ಆರೋಗ್ಯಕ್ಕೆ ಸಂಜೀವಿನಿ ಶಕ್ತಿಯೇ ಗುರುಗಳು.
ಗುರು ಎಂದರೆ ಔಪಚಾರಿಕವಾಗಿ ಶಾಲೆ-ಕಾಲೇಜಿಗೆ ಹೋಗಿ ಕಲಿಸುವ ಅಧ್ಯಾಪಕ, ಶಿಕ್ಷಕರೇ ಆಗಬೇಕೆಂದಿಲ್ಲ, ಜೀವನದಲ್ಲಿ ಉತ್ತಮ ಮಾರ್ಗದರ್ಶನ ಮಾಡಿದ ವ್ಯಕ್ತಿಯೂ ಗುರು ಅನಿಸಿಕೊಳ್ಳುತ್ತಾರೆ.
Advertisement