ಅಗ್ನಿಪಥ್ ಯೋಜನೆ: ಜಾತಿ ಪ್ರಮಾಣ ಪತ್ರ ಅಗತ್ಯ ಕುರಿತು ಕೇಂದ್ರದ ವಿರುದ್ಧ ತೇಜಸ್ವಿ ವಾಗ್ದಾಳಿ; ರಾಜನಾಥ್ ಸಿಂಗ್ ತಿರುಗೇಟು
ರಕ್ಷಣಾ ಪಡೆಗಳಲ್ಲಿ ಅಗ್ನಿವೀರ್ಗಳ ನೇಮಕಾತಿಯಲ್ಲಿ ಜಾತಿ ಪ್ರಮಾಣ ಪತ್ರ ಕೇಳಿರುವುದಕ್ಕಾಗಿ ನರೇಂದ್ರ ಮೋದಿ ಸರ್ಕಾರವನ್ನು ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ತರಾಟೆಗೆ ತೆಗೆದುಕೊಂಡಿದ್ದಾರೆ.
Published: 19th July 2022 03:15 PM | Last Updated: 19th July 2022 04:36 PM | A+A A-

ತೇಜಸ್ವಿ ಯಾದವ್, ರಾಜನಾಥ್ ಸಿಂಗ್
ಪಾಟ್ನಾ: ರಕ್ಷಣಾ ಪಡೆಗಳಲ್ಲಿ ಅಗ್ನಿವೀರ್ಗಳ ನೇಮಕಾತಿಯಲ್ಲಿ ಜಾತಿ ಪ್ರಮಾಣ ಪತ್ರ ಕೇಳಿರುವುದಕ್ಕಾಗಿ ನರೇಂದ್ರ ಮೋದಿ ಸರ್ಕಾರವನ್ನು ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಆರೋಪವನ್ನು ತಳ್ಳಿ ಹಾಕಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಇದೊಂದು ವದಂತಿ ಎಂದು ತಿರುಗೇಟು ನೀಡಿದ್ದಾರೆ.
ಆರ್ ಎಸ್ ಎಸ್ ವಿರುದ್ಧವೂ ವಾಗ್ದಾಳಿ ನಡೆಸಿರುವ ತೇಜಸ್ವಿ ಯಾದವ್, ಕೇಂದ್ರ ಸರ್ಕಾರ ಅಗ್ನಿವೀರರ ಜಾತಿಗಳನ್ನು ವರ್ಗೀಕರಿಸಲು ಕೇಳುತ್ತಿದೆ ಮತ್ತು ಅತಿದೊಡ್ಡ ಜಾತಿವಾದಿ ಸಂಘಟನೆಯಾದ ಆರ್ಎಸ್ಎಸ್ ಅವರನ್ನು ಜಾತಿಯ ಆಧಾರದ ಮೇಲೆ ವಜಾ ಮಾಡುತ್ತದೆ ಎಂದು ಹೇಳಿದ್ದಾರೆ. ಸಂತರ ಜಾತಿಯನ್ನು ಕೇಳಬೇಡಿ ಆದರೆ ಸಶಸ್ತ್ರ ಸಿಬ್ಬಂದಿಯ ಜಾತಿಯನ್ನು ಕೇಳಿ ಎಂದು ಹೇಳಿ ತೇಜಸ್ವಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಅಗ್ನಿಪಥ' ವಿವಾದ: ನೇಮಕಾತಿ ಯೋಜನೆ ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್
ಬಿಜೆಪಿ ಸರಕಾರ ಜಾತಿವಾರು ಜನಗಣತಿಯಿಂದ ದೂರ ಉಳಿಯುತ್ತಿದೆ. ಬಿಹಾರದಲ್ಲಿಯೂ ಕೇಂದ್ರ ಸರ್ಕಾರ ಜಾತಿವಾರು ಜನಗಣತಿ ನಡೆಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನ್ನ ಸ್ವಂತ ಖರ್ಚಿನಲ್ಲಿ ಜಾತಿವಾರು ಜನಗಣತಿ ನಡೆಸುತ್ತಿದೆ. ಈಗ ಅದೇ ಕೇಂದ್ರ ಸರ್ಕಾರ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧರಾಗಿರುವ ಅಗ್ನಿವೀರರ ಜಾತಿಯನ್ನು ಕೇಳುತ್ತಿದೆ. ಆರ್ ಎಸ್ಎಸ್ ಅಗ್ನಿವೀರರನ್ನು ಕೆಲಸದಿಂದ ತೆಗೆದುಹಾಕಲು ಅವರ ಜಾತಿಯನ್ನು ಕೇಳುತ್ತಿದ್ದಾರೆ ಎಂದು ತೇಜಸ್ವಿ ಹೇಳಿದ್ದಾರೆ.
ತೇಜಸ್ವಿ ಯಾದವ್ ಅವರ ಆರೋಪವನ್ನು ತಳ್ಳಿ ಹಾಕಿರುವ ರಾಜನಾಥ್ ಸಿಂಗ್, ಇದೊಂದು ವದಂತಿ ಎಂದು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಸ್ವಾತಂತ್ರ್ಯ ಪೂರ್ವದಲ್ಲಿ ಜಾರಿಯಲ್ಲಿದ್ದ ನೇಮಕಾತಿ ವ್ಯವಸ್ಥೆಯನ್ನು ಮುಂದುವರಿಸಲಾಗುತ್ತಿದೆ ಮತ್ತು ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದರು. ಸೋಮವಾರ ಜೆಡಿಯು ಸಂಸದೀಯ ಮಂಡಳಿ ಅಧ್ಯಕ್ಷ ಉಪೇಂದ್ರ ಕುಶ್ವಾ ಕೂಡಾ ಇದೇ ಪ್ರಶ್ನೆಯನ್ನು ಎತ್ತಿದ್ದರು.