ಅಗ್ನಿಪಥ್ ಬಗ್ಗೆ ಚರ್ಚೆಗೆ ನಕಾರ: ರಕ್ಷಣಾ ಸಮಿತಿಯಿಂದ ಹೊರನಡೆದ ವಿರೋಧ ಪಕ್ಷಗಳ ಸಂಸದರು

ರಕ್ಷಣಾ ಸಂಸದೀಯ ಸ್ಥಾಯಿ ಸಮಿತಿಯಲ್ಲಿ ಅಗ್ನಿಪಥ್ ಬಗ್ಗೆ ಚರ್ಚೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಮೂವರು ವಿರೋಧ ಪಕ್ಷದ ಸಂಸದರು ಶುಕ್ರವಾರ ಸಭೆಯಿಂದ ಹೊರನಡೆದಿದ್ದಾರೆ. ದೇಶಾದ್ಯಂತ ತೀವ್ರ ಪ್ರತಿಭಟನೆಗೆ ಕಾರಣವಾಗಿರುವ ಅಗ್ನಿಪಥ್...
ಜುಯಲ್ ಓರಮ್
ಜುಯಲ್ ಓರಮ್

ನವದೆಹಲಿ: ರಕ್ಷಣಾ ಸಂಸದೀಯ ಸ್ಥಾಯಿ ಸಮಿತಿಯಲ್ಲಿ ಅಗ್ನಿಪಥ್ ಬಗ್ಗೆ ಚರ್ಚೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಮೂವರು ವಿರೋಧ ಪಕ್ಷದ ಸಂಸದರು ಶುಕ್ರವಾರ ಸಭೆಯಿಂದ ಹೊರನಡೆದಿದ್ದಾರೆ. ದೇಶಾದ್ಯಂತ ತೀವ್ರ ಪ್ರತಿಭಟನೆಗೆ ಕಾರಣವಾಗಿರುವ ಅಗ್ನಿಪಥ್ ಸೇನಾ ನೇಮಕಾತಿ ಯೋಜನೆ ಕುರಿತು ಚರ್ಚಿಸಲು ಅವಕಾಶ ನೀಡುತ್ತಿಲ್ಲ ಎಂದು ಪ್ರತಿಪಕ್ಷ ಸಂಸದರು ಆರೋಪಿಸಿದ್ದಾರೆ.

ಕಾಂಗ್ರೆಸ್ ಸಂಸದರಾದ ಕೆಸಿ ವೇಣುಗೋಪಾಲ್ ಮತ್ತು ಉತ್ತಮ್ ಕುಮಾರ್ ರೆಡ್ಡಿ ಹಾಗೂ ಬಿಎಸ್ಪಿ ಸಂಸದ ಕುನ್ವರ್ ದಾನಿಶ್ ಅಲಿ ಅವರು ರಕ್ಷಣಾ ಸ್ಥಾಯಿ ಸಮಿತಿ ಸಭೆಯಿಂದ ಹೊರನಡೆದರು. ಅಗ್ನಿಪಥ್ ಯೋಜನೆಯು ಹಲವು ಪರಿಣಾಮಗಳನ್ನು ಹೊಂದಿದ್ದು, ಸಂಸತ್ತಿನ ಪರಿಶೀಲನೆಯ ಅಗತ್ಯವಿದೆ ಎಂದು ವಾದಿಸಿ ಚರ್ಚೆಗೆ ಕರೆ ನೀಡಿದ್ದಾರೆ.

ಸಭೆಯ ಕಾರ್ಯಸೂಚಿ ಹೊರತಾದ ಯಾವುದೇ ವಿಷಯವನ್ನು ಚರ್ಚಿಸಲಾಗುವುದಿಲ್ಲ ಎಂದು ಅಧ್ಯಕ್ಷ ಜುಯಲ್ ಓರಮ್ ಹೇಳಿದ್ದಾರೆ.

ಅಗ್ನಿಪಥದ ಕುರಿತು ಚರ್ಚೆಗೆ ಅವಕಾಶ ನೀಡದಿರುವುದು ಸಂಸತ್ತಿಗೆ ಅವಮಾನ ಮಾಡಿದಂತೆ ಮತ್ತು ಯೋಜನೆಯ ಬಗ್ಗೆ ಸಮಿತಿಗೆ ಮಾಹಿತಿ ನೀಡದಿರುವುದು ವಿಶೇಷಾಧಿಕಾರದ ಉಲ್ಲಂಘನೆಯಾಗಿದೆ ಎಂದು ಸದಸ್ಯರು ಅಧ್ಯಕ್ಷರೊಂದಿಗೆ ವಾದಿಸಿದರು ಎಂದು ವರದಿಯಾಗಿದೆ.

ಮುಂದಿನ ಸಭೆಯಲ್ಲಿ ಚರ್ಚೆಗೆ ವಿಷಯ ಪಟ್ಟಿ ಮಾಡುವಂತೆ ಅವರು ಒತ್ತಾಯಿಸಿದರು. ಆದರೆ ಅಧ್ಯಕ್ಷರು ಅನುಮತಿ ನಿರಾಕರಿಸಿದರು ಎಂದು ವರದಿಯಾಗಿದೆ. ಸಂಸದೀಯ ಸ್ಥಾಯಿ ಸಮಿತಿ ಸಭೆಗಳಲ್ಲಿ ಚರ್ಚಿಸಬೇಕಾದ ವಿಷಯಗಳನ್ನು ವರ್ಷದ ಆರಂಭದಲ್ಲಿ ಮುಂಚಿತವಾಗಿ ನಿರ್ಧರಿಸಲಾಗುತ್ತದೆ ಎಂದು ಜುಯಲ್ ಓರಮ್ ಹೇಳಿದ್ದಾರೆ.

ಕೇಂದ್ರ ಸರ್ಕಾರ ನಾಲ್ಕು ವರ್ಷಗಳ ಅವಧಿಗೆ ಯುವ ಸೈನಿಕರನ್ನು ನೇಮಕ ಮಾಡಿಕೊಳ್ಳುವ ಅಗ್ನಿಪಥ್ ಯೋಜನೆ ಜಾರಿ ಮಾಡಿದಾಗ ದೇಶಾದ್ಯಂತ ಉಗ್ರ ಪ್ರತಿಭಟನೆಗಳು ನಡೆದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com