ತಿರುವನಂತಪುರ: ಚರ್ಚ್ ನಡೆಸುತ್ತಿರುವ ವೈದ್ಯಕೀಯ ಕಾಲೇಜಿನಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಯುತ್ತಿರುವುದರಿಂದ ಕೇರಳದ ಚರ್ಚ್ನ ಬಿಷಪ್ರನ್ನು ಮಂಗಳವಾರ ಬ್ರಿಟನ್ಗೆ ತೆರಳದಂತೆ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರಕೋಣಂ ಮೆಡಿಕಲ್ ಕಾಲೇಜ್ ಹಗರಣ ಎಂದು ಹೆಸರಾದ ಡಾ ಸೋಮರ್ವೆಲ್ ಸ್ಮಾರಕ ಸಿಎಸ್ಐ ವೈದ್ಯಕೀಯ ಕಾಲೇಜಿನಲ್ಲಿ ಆರ್ಥಿಕ ಅವ್ಯವಹಾರಗಳ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಮನವಿಯ ನಂತರ ಇಮಿಗ್ರೇಷನ್ ಅಧಿಕಾರಿಗಳು ಬಿಷಪ್ ಎ ಧರ್ಮರಾಜ್ ರಸಾಲಂ ಅವರನ್ನು ಕೇರಳದ ರಾಜಧಾನಿ ನಗರದ ವಿಮಾನ ನಿಲ್ದಾಣದಲ್ಲಿ ತಡೆದರು. ನಂತರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಾಸಾಲಂ ಅವರನ್ನು ಭೇಟಿ ಮಾಡಿ ನಾಳೆ ವಿಚಾರಣೆಗೆ ಬರುವಂತೆ ತಿಳಿಸಿದ್ದಾರೆ.
ಆಸ್ಪತ್ರೆ, ವೈದ್ಯಕೀಯ ಕಾಲೇಜು ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಇತರ ಸಂಸ್ಥೆಗಳನ್ನು ಚರ್ಚ್ ಆಫ್ ಸೌತ್ ಇಂಡಿಯಾ ಅಥವಾ ಸಿಎಸ್ಐ ನಡೆಸುತ್ತದೆ.
ಚರ್ಚ್ ನಡೆಸುತ್ತಿರುವ ಆಸ್ಪತ್ರೆಯಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ವಿದ್ಯಾರ್ಥಿಗಳಿಂದ ಭಾರಿ ಮೊತ್ತದ ಹಣವನ್ನು ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆಯ ತಂಡವು ನಿನ್ನೆ ಸಿಎಸ್ಐ ದಕ್ಷಿಣ ಕೇರಳ ಡಯಾಸಿಸ್ ಪ್ರಧಾನ ಕಚೇರಿ ಮೇಲೆ ದಾಳಿ ನಡೆಸಿದೆ.
ಈ ಬಗ್ಗೆ ಈಗಾಗಲೇ ಅಪರಾಧ ವಿಭಾಗದ ಪೊಲೀಸರು ವಿಚಾರಣೆ ನಡೆಸಿರುವುದಾಗಿ ಕ್ರೈಸ್ತ ಶಿಕ್ಷಣ ಮಂಡಳಿಯ ನಿರ್ದೇಶಕ ಫಾದರ್ ಸಿಆರ್ ಗಾಡ್ವಿನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
Advertisement