ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ “ಸತ್ಯಾಗ್ರಹ ಹೋರಾಟ” ನಡೆಸಲು ಕಾಂಗ್ರೆಸ್ಗೆ ಅನುಮತಿ ನಿರಾಕರಿಸಿದ್ದಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಬಿಜೆಪಿ ಸರ್ಕಾರ ಅಘೋಷಿತ ತುರ್ತುಪರಿಸ್ಥಿತಿ ಹೇರಿದೆ. ಪಕ್ಷದ ಪ್ರತಿಭಟನೆಗೆ ಸರ್ಕಾರ ಅನುಮತಿ ನಿರಾಕರಿಸಿದ್ದು, ಇದೀಗ ರಾಹುಲ್ ಗಾಂಧಿ ನೇತೃತ್ವದಲ್ಲಿ ಜಾರಿ ನಿರ್ದೇಶನಾಲಯದ ಕಚೇರಿಯವರೆಗೆ ಶಾಂತಿಯುತವಾಗಿ ಪ್ರತಿಭಟನಾ ಮೆರವಣಿಗೆ ನಡೆಸುತ್ತೇವೆಂದು ಹೇಳಿದ್ದಾರೆ.
ನಾವು ಸಂವಿಧಾನದ ರಕ್ಷಕರು. ನಾವು ತಲೆಬಾಗುವುದಿಲ್ಲ. ಹೆದರುವುದೂ ಇಲ್ಲ. ನಮ್ಮ ಪ್ರತಿಭಟನೆಗೆ ಮೋದಿ ಸರ್ಕಾರ ನಡುತ್ತಿದೆ ಎಂಬುದು ಅವರ ವರ್ತನೆಯಿಂದ ಸಾಬೀತಾಗುತ್ತಿದೆ. ಜಾರಿ ನಿರ್ದೇಶನಾಲಯ ಕಚೇರಿ ಮುಂದೆ ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಪಕ್ಷದ ಮುಖ್ಯ ಕಚೇರಿ ಬಳಿ ಹಲವು ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ದೆಹಲಿ ಕೇಂದ್ರ ಪ್ರದೇಶದಲ್ಲಿ ಮೋದಿ ಸರ್ಕಾರ ಅಘೋಷಿತ ತುರ್ತು ಪರಿಸ್ಥಿತಿ ಹೇರಿದೆ. ಸಾವಿರಾರು ಬ್ಯಾರಿಕೇಡ್ ಗಳು ಸ್ಥಳದಲ್ಲಿವೆ. ನಿನ್ನ ರಾತ್ರಿಯಿಂದಲೇ ಸಾವಿರಾರು ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಜನರ ಸಮಸ್ಯೆಗಳ ಕುರಿತು ನಮ್ಮ ಪಕ್ಷ ಧ್ವನಿ ಎತ್ತಲಿದೆ. ಹಣದುಬ್ಬರ, ನಿರುದ್ಯೋಗ ಸಮಸ್ಯೆ ವಿರುದ್ಧ ನಮ್ಮ ಧ್ವನಿಯನ್ನು ಮುಂದುವರೆಸುತ್ತೇವೆ. ಸರ್ಕಾರ ಲೋಪಗಳನ್ನು ಬಹಿರಂಗಪಡಿಸುತ್ತೇವೆಂದು ತಿಳಿಸಿದ್ದಾರೆ.
ಕಾಂಗ್ರೆಸ್ ಹೋರಾಟವನ್ನು ಹತ್ತಿಕ್ಕಲು ಕೇಂದ್ರಕ್ಕೆ ಸಾಧ್ಯವಿಲ್ಲ."ರಾಹುಲ್ ಗಾಂಧಿ ನೇತೃತ್ವದಲ್ಲಿ ಸತ್ಯ ಕಾ ಸಂಗ್ರಾಮ ಮುಂದುವರಿಯುತ್ತದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರು ಕೂಡ ಕಾಂಗ್ರೆಸ್ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಾಗಲಿಲ್ಲ, ಇನ್ನು ಆಡಳಿತಾರೂಢ ಸರ್ಕಾರದಿಂದ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
Advertisement