ಕೆಸಿಆರ್ ಹೊಸ ಪಕ್ಷದ ಕಾರ್ಯಸೂಚಿ ತಯಾರಿ; ದೆಹಲಿಯಲ್ಲಿ ಹೆಸರು ಘೋಷಿಸುವ ಸಾಧ್ಯತೆ
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ತಮ್ಮ ರಾಷ್ಟ್ರೀಯ ಪಕ್ಷವನ್ನು ಪ್ರಾರಂಭಿಸಲು ಕಾರ್ಯಸೂಚಿಯೊಂದನ್ನು ಹೆಚ್ಚು ಕಡಿಮೆ ಸಿದ್ಧಪಡಿಸಿದ್ದು, ದೆಹಲಿಯಲ್ಲಿ ಹೊಸ ಪಕ್ಷವನ್ನು ಘೋಷಿಸಲಿದ್ದಾರೆ ಎಂಬ ಊಹಾಪೋಹವಿದೆ.
Published: 14th June 2022 09:27 AM | Last Updated: 14th June 2022 01:20 PM | A+A A-

ಕೆ. ಚಂದ್ರಶೇಖರ್ ರಾವ್
ಹೈದ್ರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ತಮ್ಮ ರಾಷ್ಟ್ರೀಯ ಪಕ್ಷವನ್ನು ಪ್ರಾರಂಭಿಸಲು ಕಾರ್ಯಸೂಚಿಯೊಂದನ್ನು ಹೆಚ್ಚು ಕಡಿಮೆ ಸಿದ್ಧಪಡಿಸಿದ್ದು, ದೆಹಲಿಯಲ್ಲಿ ಹೊಸ ಪಕ್ಷವನ್ನು ಘೋಷಿಸಲಿದ್ದಾರೆ ಎಂಬ ಊಹಾಪೋಹವಿದೆ.
ಮೂಲಗಳ ಪ್ರಕಾರ, ಅವರು ಮುಖ್ಯವಾಗಿ ನದಿ ನೀರು, ವಿದ್ಯುತ್, ಬಡತನ, ಉದ್ಯೋಗ, ಆರ್ಥಿಕತೆ ಮತ್ತು ಬಿಜೆಪಿ ಮತ್ತು ಇತರರು ರಾಜಕೀಯದಲ್ಲಿ ಧರ್ಮದ ಬಳಕೆಯಂತಹ ಪ್ರಮುಖ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ರಾವ್ ಅವರು ಈಗಾಗಲೇ ಹಲವಾರು ಸಂದರ್ಭಗಳಲ್ಲಿ ಈ ವಿಷಯಗಳ ಬಗ್ಗೆ ಸಂಕ್ಷಿಪ್ತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಚಂದ್ರಶೇಖರ್ ರಾವ್ ಅವರು ಟಿಆರ್ಎಸ್ ನ್ನು ಬೇರೆ ಹೆಸರಿನೊಂದಿಗೆ ರಾಷ್ಟ್ರೀಯ ಪಕ್ಷವನ್ನಾಗಿ ಪರಿವರ್ತಿಸುವತ್ತಲೂ ಗಮನ ಹರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ, ರಾವ್ ಅವರು ಸಂವಿಧಾನ ಮತ್ತು ಉಪ-ಕಾನೂನುಗಳನ್ನು ಬದಲಾಯಿಸುವ ಬಗ್ಗೆಯೂ ಚರ್ಚೆ ನಡೆಸುತ್ತಿದ್ದಾರೆ. ಆದರೆ ಕೆಲವು ರಾಜಕಾರಣಿಗಳು ಮತ್ತೆ ಟಿಆರ್ಎಸ್ ನೋಂದಣಿಗೆ ಅರ್ಜಿ ಸಲ್ಲಿಸುವ ಅಪಾಯವಿದೆ. ತೆಲಂಗಾಣದಲ್ಲಿ ಮನೆಮಾತಾಗಿರುವ ಟಿಆರ್ಎಸ್ ಬೇರೆ ಯಾವುದೇ ರಾಜಕಾರಣಿಯ ಕೈಗೆ ಜಾರಿದರೆ, ಅದು ರಾವ್ ಅವರ ಹೊಸ ಪಕ್ಷಕ್ಕೆ ಸಮಸ್ಯೆಯಾಗಲಿದೆ.
ಇದನ್ನೂ ಓದಿ: ಜುಲೈನಲ್ಲಿ ರಾಷ್ಟ್ರಪತಿ ಚುನಾವಣೆ: ಪ್ರತಿಪಕ್ಷ ಮುಖಂಡರೊಂದಿಗೆ ಕೆಸಿಆರ್ ಸಭೆ
ಅಂತಹ ಮುಜುಗರದ ಪರಿಸ್ಥಿತಿಯನ್ನು ತಪ್ಪಿಸಲು ಪಕ್ಷದ ನಾಯಕತ್ವವು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತದೆ. ಭವಿಷ್ಯದಲ್ಲಿ ಟಿಆರ್ಎಸ್ ಅನ್ನು ಚುನಾವಣಾ ಆಯೋಗದಲ್ಲಿ ಬೇರೆ ಯಾವುದೇ ವ್ಯಕ್ತಿ ನೋಂದಾಯಿಸದಂತೆ ನೋಡಿಕೊಳ್ಳಲು ನಾವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಟಿಆರ್ ಎಸ್ ನ ಹಿರಿಯ ಪದಾಧಿಕಾರಿಯೊಬ್ಬರು ಸೋಮವಾರ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ಜೂನ್ 19 ರಂದು ಹೊಸ ಪಕ್ಷದ ಅಧಿಕೃತ ಘೋಷಣೆ ಬರಲಿದೆ ಎಂದು ತಿಳಿಸಲಾಗಿದ್ದರೂ, ಇನ್ನೂ ಯಾವುದೇ ದಿನಾಂಕವನ್ನು ನಿಗದಿಪಡಿಸಲಾಗಿಲ್ಲ ಎಂದು ಮೂಲಗಳು ಹೇಳುತ್ತವೆ. ಪಕ್ಷ ಘೋಷಣೆಗೂ ಮುನ್ನ ರಾವ್ ಕಾರ್ಯಾಗಾರ ನಡೆಸುವ ನಿರೀಕ್ಷೆ ಇದೆ.