ರಾಯ್ಪುರ್: 104 ಗಂಟೆಗಳ ಪರಿಶ್ರಮದ ನಂತರ ಬೋರ್ವೆಲ್ನಲ್ಲಿ ಸಿಲುಕಿದ್ದ ರಾಹುಲ್ನನ್ನು ಸೇನಾ ಸಿಬ್ಬಂದಿ ಅಂತಿಮವಾಗಿ ಹೊರತೆಗೆದಿದ್ದಾರೆ. 11 ವರ್ಷದ ರಾಹುಲ್ ಸಾಹುರನ್ನು ಸುರಂಗದ ಬಾವಿಯಿಂದ ಹೊರತೆಗೆದ ನಂತರ ಪ್ರಥಮ ಚಿಕಿತ್ಸೆ ನೀಡಿ ನಂತರ ಅವರನ್ನು ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಸುದೀರ್ಘ ರಕ್ಷಣಾ ಕಾರ್ಯಾಚರಣೆಯ ನಂತರ ರಾಹುಲ್ ಸುರಕ್ಷಿತವಾಗಿ ಹೊರತೆಗೆದ ರಕ್ಷಣಾ ತಂಡದಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳು ಮತ್ತು ನೌಕರರನ್ನು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅಭಿನಂದಿಸಿದ್ದಾರೆ.
300 ಅಧಿಕಾರಿಗಳು ಮತ್ತು ನೌಕರರ ತಂಡ ಐದು ದಿನಗಳ ಕಾಲ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿತ್ತು. ರಾಹುಲ್ರನ್ನು ಸ್ಥಳಾಂತರಿಸುವ ಮುನ್ನವೇ ವೈದ್ಯಕೀಯ ತಂಡ ಮತ್ತು ಆಂಬ್ಯುಲೆನ್ಸ್ನ್ನು ಸಿದ್ಧಪಡಿಸಲಾಗಿತ್ತು. ಘಟನಾ ಸ್ಥಳದಿಂದ ಆಸ್ಪತ್ರೆವರೆಗೆ ಹಸಿರು ಕಾರಿಡಾರ್ ಕೂಡ ಮೊದಲೇ ಮಾಡಿದ್ದರಿಂದ ತಡಮಾಡದೆ ಚಿಕಿತ್ಸೆ ಸಿಗುತ್ತಿದೆ. ರಾಹುಲ್ ಅವರ ತಾಯಿ ಆಸ್ಪತ್ರೆಗೆ ತೆರಳಿದ್ದಾರೆ.
ಶುಕ್ರವಾರ ಛತ್ತೀಸ್ಗಢದ ಜಂಜಗೀರ್ ಚಂಪಾ ಜಿಲ್ಲೆಯಲ್ಲಿ ಬೋರ್ವೆಲ್ಗಾಗಿ ತೋಡಿದ್ದ ಗುಂಡಿಯಲ್ಲಿ ರಾಹುಲ್ ಬಿದ್ದಿದ್ದರು. ಕಲ್ಲು ಬಂಡೆಯಿಂದಾಗಿ ಸುಮಾರು 60 ಅಡಿ ಆಳದ ಗುಂಡಿಯಿಂದ ಹೊರ ತೆಗೆಯಲು ಸಾಕಷ್ಟು ತೊಂದರೆಯಾಗುತ್ತಿತ್ತು. ಅದನ್ನು ತೆಗೆಯಲು ಭಾನುವಾರ ಮತ್ತು ಶನಿವಾರ ಮೊದಲ ಹಂತದ ರೊಬೊಟಿಕ್ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾದ ನಂತರ ಸುರಂಗ ಕೊರೆಯುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.
ಆಟವಾಡುತ್ತಿದ್ದಾಗ ಬೋರ್ವೆಲ್ಗೆ ಬಿದ್ದಿದ್ದ ರಾಹುಲ್
ಪಿಹ್ರಿದ್ ಗ್ರಾಮದ ರಾಹುಲ್ ಶುಕ್ರವಾರ ಮಧ್ಯಾಹ್ನ ಮನೆಯ ಹಿಂದೆ ಆಟವಾಡುತ್ತಿದ್ದಾಗ ಬೋರ್ವೆಲ್ ಹೊಂಡಕ್ಕೆ ಬಿದ್ದಿದ್ದರು. ಘಟನೆಯ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಲಭಿಸಿದ ತಕ್ಷಣ ಸಂಜೆಯಿಂದಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ಜಿಲ್ಲಾಧಿಕಾರಿ ಜಿತೇಂದ್ರ ಶುಕ್ಲಾ ನೇತೃತ್ವದ ಜಿಲ್ಲಾಡಳಿತ ತಂಡ ಪಿಹ್ರಿದ್ ಗ್ರಾಮಕ್ಕೆ ತಲುಪಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು.
Advertisement