ನವದೆಹಲಿ: ಮಹಾರಾಷ್ಟ್ರ ಸರ್ಕಾರ ರಾಜಕೀಯ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಬಂಡಾಯ ನಾಯಕ ಏಕನಾಥ್ ಶಿಂಧೆ ಸೇರಿದಂತೆ 16 ಮಂದಿಗೆ ಉಪ ಸ್ಪೀಕರ್ ನೀಡಿರುವ ಅನರ್ಹತೆ ನೋಟಿಸ್ ವಿರುದ್ಧ ಶಿವಸೇನೆಯ ಬಂಡಾಯ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದರೊಂದಿಗೆ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಅಧಿಕಾರದ ಹೋರಾಟ ಸುಪ್ರೀಂ ಕೋರ್ಟ್ ಅಂಗಳಕ್ಕೆ ಬಂದು ತಲುಪಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆಬಿ ಪರ್ದಿವಾಲಾ ಅವರ ರಜಾಕಾಲದ ಪೀಠ ಇಂದು ಸೋಮವಾರ ಶಿಂಧೆ ಅವರ ಅರ್ಜಿಯ ವಿಚಾರಣೆ ನಡೆಸಲಿದೆ. ಡೆಪ್ಯೂಟಿ ಸ್ಪೀಕರ್ ನೀಡಿರುವ ನೋಟಿಸ್ ವಿರುದ್ಧ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ. ಏಕನಾಥ್ ಶಿಂಧೆ ಟೀಂ ಎರಡು ಅರ್ಜಿ ಸಲ್ಲಿಕೆ ಮಾಡಿದ್ದು, ಇನ್ನು ಸ್ವಲ್ಪ ಹೊತ್ತಿನಲ್ಲಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ವಿಚಾರಣೆ ಆರಂಭವಾಗಲಿದೆ.
ವಕೀಲ ಹರೀಶ್ ಸಾಳ್ವೆ ಶಿಂಧೆ ಪರ ವಾದ ಮಾಡಲಿದ್ದು, ಇಂದು ಸಂಜೆಯೊಳಗೆ ಉತ್ತರಿಸಲು ಡೆಪ್ಯೂಟಿ ಸ್ಪೀಕರ್ ನೋಟಿಸ್. ಉಪ ಸಭಾಧ್ಯಕ್ಷ ನರಹರಿ ಝಿರ್ವಾಲ್ ಶನಿವಾರ ನೋಟಿಸ್ ನೀಡಿದ್ದು, ಶಿಂಧೆ ನೇತೃತ್ವದ್ದೇ ನಿಜವಾದ ಶಿವಸೇನೆ ಎಂದು 2ನೇ ಅರ್ಜಿ ಸಲ್ಲಿಸಲಾಗಿದೆ. ಉದಯ್ ಸಾಮಂತ್ ಎರಡನೇ ಅರ್ಜಿ ಸಲ್ಲಿಕೆ ಮಾಡಿದ್ದು, ಸುಪ್ರೀಂ ಕೋರ್ಟ್ನತ್ತ ಮಹಾರಾಷ್ಟ್ರ ಸರ್ಕಾರದ ಭವಿಷ್ಯದ ಚಿತ್ತ ನೆಟ್ಟಿದೆ.
ಈ ಮಧ್ಯೆ ಇಂದು ಮಧ್ಯಾಹ್ನ 2 ಗಂಟೆಗೆ ಬಂಡಾಯ ನಾಯಕ ಏಕನಾಥ್ ಶಿಂಧೆ ಗುವಾಹಟಿಯ ಹೊಟೇಲ್ ನಲ್ಲಿ ಸಭೆ ಕರೆದಿದ್ದು ಅಲ್ಲಿ ತಮ್ಮ ಬೆಂಬಲಿಗರೊಂದಿಗೆ ಮುಂದಿನ ಕ್ರಮ ಹಾಗೂ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಲಿದ್ದಾರೆ.
ಇನ್ನೊಂದೆಡೆ ಬಂಡಾಯ ಶಾಸಕರ ಮೇಲೆ ಹರಿಹಾಯ್ದಿರುವ ಶಿವಸೇನೆ, ಒಬ್ಬ ಶಾಸಕರಿಗೆ 50 ಕೋಟಿ ಆಫರ್ ನೀಡಲಾಗಿದೆಂದು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ವರದಿ ಮಾಡಿದೆ. ಶಿವಸೇನೆ 50 ಕೋಟಿ ನೀಡಿ ಶಾಸಕರ ಖರೀದಿ ಮಾಡಿದ್ದು, ಬಂಡಾಯದ ಹಿಂದೆ ಬಿಜೆಪಿ ಇದೆ ಎಂದು ನೇರ ಆರೋಪ ಮಾಡಿದೆ. ಬಂಡಾಯ ಶಾಸಕರಿಗೆ ವೈ ಕೆಟಗರಿ ಭದ್ರತೆ ನೀಡಿದ್ದಕ್ಕೂ ಆಕ್ರೋಶ ಹೊರಹಾಕುತ್ತಿದ್ದಾರೆ. ರಾಜ್ಯಪಾಲರೇ ಭದ್ರತೆ ಕೊಡುವಂತೆ ಪತ್ರ ಬರೆದಿದ್ದಾರೆ. ಇದರ ಹಿಂದೆ ಕೇಂದ್ರ ಸರ್ಕಾರದ ಕೈವಾಡ ಇದೆ ಎಂದು ಶಿವಸೇನೆ ಗಂಭೀರ ಆರೋಪ ಮಾಡಿದೆ.
ಇನ್ನು ಬಂಡಾಯ ನಾಯಕ ಏಕನಾಥ್ ಶಿಂಧೆ ಟೀಂ ಕ್ಷಣ-ಕ್ಷಣಕ್ಕೂ ಹೆಚ್ಚುತ್ತಿದೆ. ಉದ್ಧವ್ ಸಂಪುಟದ 8ನೇ ಸಚಿವ ಶಿಂಧೆ ಟೀಂ ಸೇರಿಕೊಂಡಿದ್ಧಾರೆ. ಸಿಎಂ ಉದ್ಧವ್ ಠಾಕ್ರೆ ಬಳಿ 3 ಸಚಿವರು ಮಾತ್ರ ಉಳಿದಿದ್ದಾರೆ.
Advertisement