ಇತ್ತ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರೆ ಅತ್ತ ಪಾರ್ಟಿ ಮಾಡುತ್ತಿದ್ದ ವೈದ್ಯರು: ಮಗು ಗರ್ಭದಲ್ಲಿಯೇ ಸಾವು!

ಹೈದರಾಬಾದ್ ನಗರದ ಚಾದರ್‌ಘಾಟ್‌ನಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡ ಮಧ್ಯೆ ಆಸ್ಪತ್ರೆಯ ಸಿಬ್ಬಂದಿಯೆಲ್ಲಾ ಕುಟುಂಬಸ್ಥರ ಶುಭ ಕಾರ್ಯಕ್ರಮಕ್ಕೆ ಎದ್ದು ಹೋದ ಅಮಾನುಷ ಪ್ರಸಂಗ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್: ಹೈದರಾಬಾದ್ ನಗರದ ಚಾದರ್‌ಘಾಟ್‌ನಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡ ಮಧ್ಯೆ ಆಸ್ಪತ್ರೆಯ ಸಿಬ್ಬಂದಿಯೆಲ್ಲಾ ಕುಟುಂಬಸ್ಥರ ಶುಭ ಕಾರ್ಯಕ್ರಮಕ್ಕೆ ಎದ್ದು ಹೋದ ಅಮಾನುಷ ಪ್ರಸಂಗ ನಡೆದಿದೆ. ಇದರಿಂದ ಮಹಿಳೆಯ ಗರ್ಭದಲ್ಲಿಯೇ ಶಿಶು ಮೃತಪಟ್ಟಿದೆ. ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಚಾದರಘಟ್ಟ ಇನ್ಸ್ ಪೆಕ್ಟರ್ ಪಿ.ಸತೀಶ್ ತಿಳಿಸಿದ್ದಾರೆ.

ನಡೆದ ಘಟನೆಯೇನು?: ಹೈದರಾಬಾದ್ ನ ಚಡೇರ್ ಗಾಟ್ ನ ಮಲಕಪೇಟೆಯ ಇಮ್ತಿ.ಯಾಜ್ ಖಾಸಗಿ ಆಸ್ಪತ್ರೆಗೆ ತಪಾಸಣೆಗೆಂದು ಗೋಲ್ನಾಕ ಪ್ರದೇಶದ ಗುತ್ತಿಗೆದಾರ ಸೈಯದ್ ಆರಿಫ್ ಎಂಬಾತನ ಪತ್ನಿ ಸುರಯ್ಯ ಫಾತಿಮಾ (24) ಬಂದಿದ್ದಳು. ಮೊನ್ನೆ ಶುಕ್ರವಾರ, ಆಕೆಗೆ ಅಸ್ವಸ್ಥಗೊಂಡಿದ್ದರಿಂದ, ಆರೀಫ್ ಅವಳನ್ನು ಹೆತ್ತವರ ಬಳಿ ಕರೆದೊಯ್ದಿದ್ದರು. ಅಲ್ಲಿಂದ ಚಿಕಿತ್ಸೆಗಾಗಿ ಇಮ್ತಿಯಾಜ್ ಆಸ್ಪತ್ರೆಗೆ ಕರೆತಂದರು. ಫಾತಿಮಾ ಅವರ ಬಿಪಿ ಅಸಹಜವಾಗಿದ್ದರಿಂದ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. ಶನಿವಾರ ಮತ್ತೆ ಆಕೆಗೆ ಅಸ್ವಸ್ಥತೆ ಮತ್ತು ತೀವ್ರ ಬೆನ್ನುನೋವು ಕಾಣಿಸಿಕೊಂಡಾಗ ವೈದ್ಯರ ಸಲಹೆ ಮೇರೆಗೆ ಅದೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಗಿತ್ತು. ಮೊನ್ನೆ ಭಾನುವಾರ ಹೊತ್ತಿಗೆ ಸಾಮಾನ್ಯವಾಗಿದ್ದರು. 

ಆರೋಗ್ಯ ಸುಧಾರಿಸುತ್ತಿದ್ದಂತೆ ಆಸ್ಪತ್ರೆ ವೈದ್ಯರು ಹೆರಿಗೆಗೆ ಕರೆದುಕೊಂಡು ಹೋದರು, ಅಲ್ಲಿ ನಿಗಾ ವಹಿಸುತ್ತಿದ್ದರು. ಭಾನುವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿತು. ಆಗ ಸುರೈಯಾಳ ಕುಟುಂಬಸ್ಥರು ವೈದ್ಯರಿಗೆ ಹೋಗಿ ಹೆರಿಗೆ ನೋವು ಕಾಣಿಸುತ್ತಿದೆ ಎಂದು ಮಾಹಿತಿ ನೀಡಿದರು. ಆದರೆ ಆ ಹೊತ್ತಿನಲ್ಲಿ ಆಸ್ಪತ್ರೆಯಲ್ಲಿ ಯಾರೂ ಇರಲಿಲ್ಲ.

ಆಸ್ಪತ್ರೆಯ ವೈದ್ಯರು, ಸಿಬ್ಬಂದಿಯೆಲ್ಲಾ ಆಸ್ಪತ್ರೆಯ ಮಾಲಿಕರ ಮೊಮ್ಮಗಳ ಕಾರ್ಯಕ್ರಮದಲ್ಲಿ ಕಟ್ಟಡದ ಮೇಲ್ಬಾಗದಲ್ಲಿ ಭಾಗಿಯಾಗಿದ್ದರು. ಇತ್ತ ಮಹಿಳೆ ಹೆರಿಗೆ ನೋವಿನಲ್ಲಿ ನರಳಾಡುತ್ತಿದ್ದರೆ ಅತ್ತ ವೈದ್ಯರು, ಸಿಬ್ಬಂದಿಯೆಲ್ಲಾ ಪಾರ್ಟಿಯ ಖುಷಿಯಲ್ಲಿ ಮಿಂದೇಳುತ್ತಿದ್ದರು. ಸಮಯಕ್ಕೆ ಸರಿಯಾಗಿ ಬಂದು ರೋಗಿಯನ್ನು ನೋಡಿ ಚಿಕಿತ್ಸೆ ನೀಡದಿದ್ದುದರಿಂದ ಮಗು ತಾಯಿಯ ಗರ್ಭದಲ್ಲಿಯೇ ಮೃತಪಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಆದರೆ ತಾವು ಸಮಯಕ್ಕೆ ಸರಿಯಾಗಿ ನೀಡಬೇಕಾದ ಚಿಕಿತ್ಸೆ ನೀಡಿದ್ದೇವೆ. ಮಹಿಳೆಯ ದೇಹದಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ದೇಹಸ್ಥಿತಿ ಸರಿಯಾಗಿಲ್ಲದಿದ್ದುದರಿಂದ ಮಗು ಗರ್ಭದಲ್ಲಿಯೇ ಮೃತಪಟ್ಟಿದೆ ಎಂದು ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರು ಹೇಳುತ್ತಾರೆ. 

ಮಹಿಳೆಯ ಕುಟುಂಬಸ್ಥರು ಆಸ್ಪತ್ರೆ ಮುಂದೆ ಪ್ರತಿಭಟನೆ ಮಾಡಿ ಸಿಬ್ಬಂದಿಗೆ ಹೊಡೆಯಲು ಕೂಡ ಹೋಗಿದ್ದಾರೆ. ಕೊನೆಗೆ ಪೊಲೀಸರು ಮಧ್ಯೆ ಪ್ರವೇಶಿಸಿ ಮಹಿಳೆಯ ಗರ್ಭದಿಂದ ಸರ್ಜರಿ ಮಾಡಿ ಶಿಶುವನ್ನು ಹೊರತೆಗೆಯಲಾಯಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com