'ಮಹಾ' ಸರ್ಕಾರ ರಚನೆಯಲ್ಲಿ ಸ್ಫೋಟಕ ತಿರುವು: ಶಿವಸೇನೆಗೆ ಬಿಜೆಪಿ ಬೆಂಬಲ; ಸಿಎಂ ಆಗಿ ಶಿಂಧೆ ಪ್ರಮಾಣವಚನ!
ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಆಘಾಡಿ ಸರ್ಕಾರ ಪತನದ ಬೆನ್ನಲ್ಲೇ ಶಿವಸೇನೆ ಬಂಡಾಯ ಶಾಸಕರು ಹಾಗೂ ಬಿಜೆಪಿ ಸೇರಿ ಮೈತ್ರಿ ಸರ್ಕಾರ ರಚನೆಗೆ ಮುಂದಾಗಿತ್ತು. ಆದರೆ ಇದೀಗ ಸರ್ಕಾರ ರಚನೆಯಲ್ಲಿ ಸ್ಫೋಟಕ ತಿರುವು ಪಡೆದುಕೊಂಡಿದ್ದು ಏಕನಾಥ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿಯ ದೇವೇಂದ್ರ ಫಡ್ನವಿಸ್ ಘೋಷಿಸಿದ್ದಾರೆ.
Published: 30th June 2022 04:27 PM | Last Updated: 30th June 2022 05:31 PM | A+A A-

ರಾಜ್ಯಪಾಲರನ್ನು ಭೇಟಿಯದ ಫಡ್ನವಿಸ್-ಶಿಂಧೆ
ಮುಂಬೈ: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಆಘಾಡಿ ಸರ್ಕಾರ ಪತನದ ಬೆನ್ನಲ್ಲೇ ಶಿವಸೇನೆ ಬಂಡಾಯ ಶಾಸಕರು ಹಾಗೂ ಬಿಜೆಪಿ ಸೇರಿ ಮೈತ್ರಿ ಸರ್ಕಾರ ರಚನೆಗೆ ಮುಂದಾಗಿತ್ತು. ಆದರೆ ಇದೀಗ ಸರ್ಕಾರ ರಚನೆಯಲ್ಲಿ ಸ್ಫೋಟಕ ತಿರುವು ಪಡೆದುಕೊಂಡಿದ್ದು ಏಕನಾಥ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿಯ ದೇವೇಂದ್ರ ಫಡ್ನವಿಸ್ ಘೋಷಿಸಿದ್ದಾರೆ.
ಏಕನಾಥ ಶಿಂಧೆ ಹಾಗೂ ದೇವೇಂದ್ರ ಫಡ್ನವಿಸ್ ಅವರು ಇಂದು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿ ಮಾಡಿ ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಬಳಿಕ ಉಭಯ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದು ಈ ವೇಳೆ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಶಿವಸೇನೆಯ ಬಂಡಾಯ ಶಾಸಕರಿಗೆ ಬಿಜೆಪಿ ಬೆಂಬಲ ನೀಡುತ್ತಿದ್ದು ಬಂಡಾಯ ಶಾಸಕರ ತಂಡದ ನಾಯಕ ಏಕನಾಥ ಶಿಂಧೆ ಅವರು ಸಿಎಂ ಆಗಲಿದ್ದಾರೆ ಎಂದು ಹೇಳಿದರು.
ಇಂದು ಸಂಜೆ 7.30ಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಶಿಂಧೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಫಡ್ನವಿಸ್ ಅಚ್ಚರಿ ಮೂಡಿಸಿದ್ದಾರೆ. 2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಜನರು ಬಿಜೆಪಿ-ಶಿವಸೇನೆ ಮೈತ್ರಿಗೆ ಮತ ಹಾಕಿದರು ಆದರೆ ಜನಾದೇಶವನ್ನು ದಿಕ್ಕರಿಸಿ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ರಚಿಸಲಾಯಿತು. ಏಕನಾಥ್ ಶಿಂಧೆ ಅವರು ಶಿವಸೇನೆಯ ಗುಂಪಿನ ನಾಯಕರಾಗಿದ್ದು, ಅವರು ಕಾಂಗ್ರೆಸ್ ಮತ್ತು ಎನ್ಸಿಪಿ ಜೊತೆಗಿನ ಮೈತ್ರಿಯನ್ನು ಕೊನೆಗೊಳಿಸಲು ಬಯಸಿದ್ದರು ಆದರೆ ಉದ್ಧವ್ ಠಾಕ್ರೆ ಅದಕ್ಕೆ ಬಾಧ್ಯತೆ ನೀಡಲಿಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ: 'ಮಹಾ' ಅಘಾಡಿ ಸರ್ಕಾರ ಪತನ ಬಳಿಕ ಮುಂದೇನು? ಮುಂದಿನ ಸರ್ಕಾರ ರಚನೆಯತ್ತ ಎಲ್ಲರ ಚಿತ್ತ ರಾಜಭವನದತ್ತ!
ಮಹಾರಾಷ್ಟ್ರದ ಹೊಸ ಸರ್ಕಾರದಲ್ಲಿ ನಾನು ಭಾಗಿಯಾಗುವುದಿಲ್ಲ. ಇದು ನಾವು ಬಾಳಸಾಹೇಬ್ ಠಾಕ್ರೆಗೆ ನೀಡುವ ಗೌರವ. ಶಿವಸೇನೆ ಗುಂಪಿಗೆ ನಾವು ಸಂಪೂರ್ಣ ಬೆಂಬಲವನ್ನು ನೀಡುವಂತೆ. ಏಕನಾಥ ಶಿಂಧೆಗೆ ಶುಭವಾಗಲಿ ಎಂದು ಫಡ್ನವಿಸ್ ಹೇಳಿದ್ದಾರೆ.
ಶಿಂಧೆ ಬಂಡಾಯ ಬಣದವರೂ ಸೇರಿದಂತೆ ಒಟ್ಟು 170 ಶಾಸಕರ ಬೆಂಬಲವಿದೆ ಎಂದು ಬಿಜೆಪಿ ಹೇಳಿದೆ. ಮುಂಬೈ ನಗರಕ್ಕೆ ಶಿಂಧೆ ಆಗಮನದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದರು.
ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜಿನಾಮೆ ನೀಡಿದ ಬೆನ್ನಲ್ಲೇ ವಿಶ್ವಾಸ ಮತ ಯಾಚನೆಗಾಗಿ ನಿಗದಿ ಪಡಿಸಲಾಗಿದ್ದ ವಿಶೇಷ ಅಧಿವೇಶನವನ್ನು ಮುಂದೂಡಲಾಗಿದೆ. ರಾಜ್ಯಪಾಲರ ಆದೇಶದಂತೆ ಗುರುವಾರ ನಿಗದಿಯಾಗಿದ್ದ ವಿಶೇಷ ಅಧಿವೇಶನವನ್ನು ಈಗ ಕರೆಯಲಾಗುವುದಿಲ್ಲ ಎಂದು ಮಹಾರಾಷ್ಟ್ರ ವಿಧಾನಸಭೆ ಕಾರ್ಯದರ್ಶಿ ರಾಜೇಂದ್ರ ಭಾಗವತ್ ಅವರು ಎಲ್ಲಾ ರಾಜ್ಯದ ಶಾಸಕರಿಗೆ ತಿಳಿಸಿದ್ದರು.