50 ವರ್ಷಗಳ ಅಸ್ಸಾಂ - ಮೇಘಾಲಯ ಗಡಿವಿವಾದ ಅಂತ್ಯ, ಈಶಾನ್ಯಕ್ಕೆ ಇದು ಐತಿಹಾಸಿಕ ದಿನ ಎಂದ ಅಮಿತ್ ಶಾ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಮಂಗಳವಾರ ತಮ್ಮ ರಾಜ್ಯಗಳ ನಡುವಿನ 50 ವರ್ಷಗಳ ಗಡಿ ವಿವಾದವನ್ನು ಪರಿಹರಿಸುವ ಒಪ್ಪಂದಕ್ಕೆ ಸಹಿ ಹಾಕಿದರು.
Published: 29th March 2022 05:22 PM | Last Updated: 29th March 2022 05:22 PM | A+A A-

ಒಪ್ಪಂದಕ್ಕೆ ಸಹಿ
ನವದೆಹಲಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಮಂಗಳವಾರ ತಮ್ಮ ರಾಜ್ಯಗಳ ನಡುವಿನ 50 ವರ್ಷಗಳ ಗಡಿ ವಿವಾದವನ್ನು ಪರಿಹರಿಸುವ ಒಪ್ಪಂದಕ್ಕೆ ಸಹಿ ಹಾಕಿದರು. ಇದರೊಂದಿಗೆ ಉಭಯ ರಾಜ್ಯಗಳ ನಡುವಿನ ಗಡಿ ವಿವಾದಕ್ಕೆ ಅಂತ್ಯಹಾಡಲಾಗಿದೆ.
ಕೇಂದ್ರ ಗೃಹ ಸಚಿವಾಲಯದ ಕಚೇರಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಎರಡೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಗೃಹ ಸಚಿವಾಲಯದ ಇತರ ಅಧಿಕಾರಿಗಳ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಇದನ್ನು ಓದಿ: ಅಚ್ಚರಿಯಾದ್ರೂ ಸತ್ಯ; ಅಸ್ಸಾಂ ಚಹಾಕ್ಕೆ ಉಕ್ರೇನ್ ಅಧ್ಯಕ್ಷರ ಹೆಸರು!
ದಶಕಗಳ ಕಾಲದ ವಿವಾದವನ್ನು ಅಂತ್ಯಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿರುವುದು ಈಶಾನ್ಯ ಭಾಗಕ್ಕೆ ಐತಿಹಾಸಿಕ ದಿನವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಎಂಎಚ್ ಎ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮೇಘಾಲಯ ಸರ್ಕಾರದ ಒಟ್ಟು 11 ಪ್ರತಿನಿಧಿಗಳು ಮತ್ತು ಅಸ್ಸಾಂನ ಒಂಬತ್ತು ಪ್ರತಿನಿಧಿಗಳು ಭಾಗವಹಿಸಿದ್ದರು.
ಅಸ್ಸಾಂ ಮತ್ತು ಮೇಘಾಲಯ ಎರಡೂ ಸರ್ಕಾರಗಳು ತಮ್ಮ ರಾಜ್ಯದ ಗಡಿಯುದ್ದಕ್ಕೂ ಇರುವ 12 ವಿವಾದಿತ ಪ್ರದೇಶಗಳ ಪೈಕಿ 6 ಗಡಿ ವಿವಾದಗಳನ್ನು ಪರಿಹರಿಸಲು ಕರಡು ನಿರ್ಣಯದೊಂದಿಗೆ ಬಂದಿವೆ.
ಅಸ್ಸಾಂ ಮತ್ತು ಮೇಘಾಲಯ 885-ಕಿಮೀ ಉದ್ದದ ಗಡಿಯನ್ನು ಹಂಚಿಕೊಂಡಿವೆ. 36.79 ಚದರ ಕಿಮೀ ಭೂಮಿಗೆ ಪ್ರಸ್ತಾವಿತ ಶಿಫಾರಸುಗಳ ಪ್ರಕಾರ, ಅಸ್ಸಾಂ 18.51 ಚದರ ಕಿಲೋಮೀಟರ್ ಅನ್ನು ಇಟ್ಟುಕೊಂಡು ಉಳಿದ 18.28 ಚದರ ಕಿಮೀ ಅನ್ನು ಮೇಘಾಲಯಕ್ಕೆ ನೀಡುತ್ತದೆ. ಅಸ್ಸಾಂ ಮತ್ತು ಮೇಘಾಲಯ ನಡುವಿನ ಅಂತಿಮ ಒಪ್ಪಂದವು ಮಹತ್ವದ್ದಾಗಿದೆ, ಏಕೆಂದರೆ ಎರಡು ರಾಜ್ಯಗಳ ನಡುವಿನ ಗಡಿ ವಿವಾದವು ಬಹಳ ಸಮಯದಿಂದ ಬಾಕಿ ಉಳಿದಿದ್ದವು.
ಅಸ್ಸಾಂ-ಮೇಘಾಲಯ ಗಡಿ ವಿವಾದವು ಅಪ್ಪರ್ ತಾರಾಬರಿ, ಗಜಾಂಗ್ ಮೀಸಲು ಅರಣ್ಯ, ಹಾಹಿಂ, ಲಾಂಗ್ಪಿಹ್, ಬೋರ್ಡುವಾರ್, ಬೊಕ್ಲಾಪಾರಾ, ನೋಂಗ್ವಾ, ಮಾಟಮುರ್, ಖಾನಪಾರಾ-ಪಿಲಂಕಾಟಾ, ದೇಶ್ ಡೆಮೊರಿಯಾ ಬ್ಲಾಕ್ I ಮತ್ತು ಬ್ಲಾಕ್ II, ಖಂಡುಲಿ ಮತ್ತು ರೆಟಾಚೆರಾ ಪ್ರದೇಶಗಳಾಗಿವೆ.
ಮೇಘಾಲಯವನ್ನು ಅಸ್ಸಾಂ ಮರುಸಂಘಟನೆ ಕಾಯಿದೆ, 1971 ರ ಅಡಿಯಲ್ಲಿ ಅಸ್ಸಾಂನಿಂದ ಬೇರ್ಪಡಿಸಲಾಯಿತು, ಇದು ವಿವಾದಗಳಿಗೆ ಕಾರಣವಾಯಿತು. ಅಸ್ಸಾಂ ಮತ್ತು ಮೇಘಾಲಯದ ಮುಖ್ಯಮಂತ್ರಿಗಳು ಜನವರಿ 31 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಎಂಎಚ್ಎ ಪರಿಶೀಲನೆ ಮತ್ತು ಪರಿಗಣನೆಗೆ ಕರಡು ನಿರ್ಣಯವನ್ನು ಸಲ್ಲಿಸಲಾಗಿತ್ತು.