ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾದ ಸ್ಥಳವನ್ನು ಸೀಲ್ ಮಾಡಿ: ಕೋರ್ಟ್ ಆದೇಶ
ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದೊಳಗಿನ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂಬ ಹೇಳಿಕೆಯ ನಂತರ ನ್ಯಾಯಾಲಯವು ಆ ಸ್ಥಳವನ್ನ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಸೀಲ್ ಮಾಡುವಂತೆ...
Published: 16th May 2022 04:39 PM | Last Updated: 16th May 2022 04:39 PM | A+A A-

ಜ್ಞಾನವಾಪಿ ಮಸೀದಿ
ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದೊಳಗಿನ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂಬ ಹೇಳಿಕೆಯ ನಂತರ ನ್ಯಾಯಾಲಯವು ಆ ಸ್ಥಳವನ್ನ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಸೀಲ್ ಮಾಡುವಂತೆ ಆದೇಶಿಸಿದೆ.
ಮಸೀದಿಯ ಹಿಂದಿರುವ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಲು ಪ್ರವೇಶ ಕೋರಿ ಐವರು ಮಹಿಳೆಯರು ಅರ್ಜಿ ಸಲ್ಲಿಸಿದ ನಂತರ ಮಸೀದಿ ಸಂಕೀರ್ಣದ ಚಿತ್ರೀಕರಣಕ್ಕೆ ನ್ಯಾಯಾಲಯ ಆದೇಶಿಸಿದ್ದು, ಚಿತ್ರೀಕರಣದ ಕೊನೆಯ ದಿನದಂದು ಶಿವಲಿಂಗ ಅಥವಾ ಶಿವನ ಅವಶೇಷವು ಕಂಡುಬಂದಿದೆ ಎಂದು ವರದಿಯಾಗಿದೆ.
ಇದನ್ನು ಓದಿ: ಜ್ಞಾನವಾಪಿ ಮಸೀದಿ ಸಮೀಕ್ಷೆ ಪೂರ್ಣ; ಕೊಳದಲ್ಲಿ ಶಿವಲಿಂಗ ಪತ್ತೆ: ವಕೀಲರ ಹೇಳಿಕೆ
ಇಂದು ಬೆಳಗ್ಗೆ ಕೊಳದಿಂದ ನೀರನ್ನು ಹರಿಸುವಾಗ ಶಿವಲಿಂಗ ಕಂಡುಬಂದಿದೆ ಎಂದು ದೇಗುಲದಲ್ಲಿ ಪ್ರಾರ್ಥನೆ ಮಾಡಲು ವರ್ಷಪೂರ್ತಿ ಪ್ರವೇಶವನ್ನು ಕೋರಿರುವ ಹಿಂದೂ ಮಹಿಳೆಯರ ಗುಂಪನ್ನು ಪ್ರತಿನಿಧಿಸುವ ವಕೀಲ ಸುಭಾಷ್ ನಂದನ್ ಚತುರ್ವೇದಿ ಹೇಳಿದ್ದಾರೆ.
ಇಸ್ಲಾಮಿಕ್ ವುಜು ಅಥವಾ ಶುದ್ಧೀಕರಣ ಆಚರಣೆಗಳಿಗಾಗಿ ಬಳಸಲಾಗುವ ಕೊಳದಲ್ಲಿ ಶಿವ ಲಿಂಗ ಪತ್ತೆಯಾದ ನಂತರ ಅದನ್ನು ಸಂಪೂರ್ಣವಾಗಿ ಬಂದ್ ಮಾಡಬೇಕಂದು ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದರು. ನ್ಯಾಯಾಲಯವು ಮನವಿಯನ್ನು ಸ್ವೀಕರಿಸಿ, ಸದ್ಯಕ್ಕೆ ಕೊಳವನ್ನು ಬಳಸದಂತೆ ನೋಡಿಕೊಳ್ಳಲು ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಆದೇಶಿಸಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್, ಪೊಲೀಸ್ ಮುಖ್ಯಸ್ಥರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್) ಉನ್ನತ ಅಧಿಕಾರಿಗಳು ಸೀಲ್ ಮಾಡಿದ ಪ್ರದೇಶಕ್ಕೆ ಯಾರೂ ಕೂಡ ಪ್ರವೇಶಿಸದಂತೆ ನೋಡಿಕೊಳ್ಳುತ್ತಾರೆ ಎಂದು ನ್ಯಾಯಾಲಯ ಹೇಳಿದೆ.
ಜ್ಞಾನವಾಪಿ ಮಸೀದಿಯು ಕಾಶಿ ವಿಶ್ವನಾಥ ದೇವಾಲಯದ ಸಮೀಪದಲ್ಲಿದೆ. ಐದು ಮಹಿಳಾ ಅರ್ಜಿದಾರರು ಅದರ ಹೊರ ಗೋಡೆಗಳ ಮೇಲೆ ಮತ್ತು ಇತರ ಹಳೆಯ ದೇವಾಲಯದ ಸಂಕೀರ್ಣದೊಳಗೆ ಇರುವ ದೇವರ ಮೂರ್ತಿಗಳಿಗೆ ವರ್ಷ ಪೂರ್ತಿ ದೈನಂದಿನ ಪ್ರಾರ್ಥನೆಗೆ ಅವಕಾಶ ನೀಡುವಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಇಲ್ಲಿ ಪ್ರಾರ್ಥನೆ ಸಲ್ಲಿಸಲು ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯಲಾಗುತ್ತಿದೆ.
ವಾರಣಾಸಿ ಸಿವಿಲ್ ನ್ಯಾಯಾಲಯವು ಮೂರು ಗುಮ್ಮಟಗಳು, ಭೂಗತ ನೆಲಮಾಳಿಗೆಗಳು ಮತ್ತು ಕೊಳ ಸೇರಿದಂತೆ ಮಸೀದಿ ಸಂಕೀರ್ಣದ ವೀಡಿಯೊ ಮೌಲ್ಯಮಾಪನಕ್ಕೆ ಆದೇಶಿಸಿದ್ದು, ಈ ಕಾರ್ಯಕ್ಕಾಗಿ ನ್ಯಾಯಾಲಯದ ಆಯುಕ್ತರನ್ನು ನೇಮಿಸಿದೆ.
ಈ ಸಮೀಕ್ಷೆಯ ಒಂದು ಭಾಗವು ಮೇ 6 ರಂದು ನಡೆದಿತ್ತು. ಆದರೆ ಮಸೀದಿಯೊಳಗೆ ಚಿತ್ರೀಕರಣದ ವಿವಾದ ಭುಗಿಲೆದ್ದ ನಂತರ ಅದನ್ನು ನಿಲ್ಲಿಸಲಾಯಿತು. ಮಸೀದಿಯೊಳಗೆ ವೀಡಿಯೋ ತೆಗೆಯಲು ಕೋರ್ಟ್ ಆದೇಶ ನೀಡಿಲ್ಲ ಎಂದು ಮಸೀದಿ ಸಮಿತಿ ಹೇಳಿತು.
ನ್ಯಾಯಾಲಯದ ಆದೇಶದ ಚಿತ್ರೀಕರಣವನ್ನು ಅಲಹಾಬಾದ್ ಹೈಕೋರ್ಟ್ನಲ್ಲಿ ಪ್ರಶ್ನಿಸಲಾಯಿತು. ಅದು ಏಪ್ರಿಲ್ನಲ್ಲಿ ಪ್ರಕರಣವನ್ನು ವಜಾಗೊಳಿಸಿತು. ನಂತರ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು. ಚಿತ್ರೀಕರಣದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಜ್ಞಾನವಾಪಿ ಮಸೀದಿ ಟ್ರಸ್ಟ್ ಅನ್ನು ಪ್ರತಿನಿಧಿಸುವ ವಕೀಲರು, ಇದು ಪೂಜಾ ಸ್ಥಳಗಳ ಕಾಯ್ದೆ, 1991ಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು. ಚಿತ್ರೀಕರಣವನ್ನು ನಿಲ್ಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ಆದರೆ ಮಸೀದಿ ಸಂಕೀರ್ಣ ಸಮೀಕ್ಷೆಯ ವಿರುದ್ಧದ ಮನವಿಯನ್ನು ಪಟ್ಟಿ ಮಾಡಲು ಪರಿಗಣಿಸಲು ಒಪ್ಪಿಕೊಂಡಿತು.