ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆ ರಂಗೇರುತ್ತಿರುವಂತೆಯೇ, ಕಾಂಗ್ರೆಸ್ ನ ಮತ್ತೊಂದು ವಿಕೆಟ್ ಬಿದ್ದಿದೆ.
ಸಾಗರೋತ್ತರ ಕಾಂಗ್ರೆಸ್ ಉಸ್ತುವಾರಿ ಸ್ಥಾನಕ್ಕೆ ಹಿಮಾನ್ಶು ವ್ಯಾಸ್ ಶನಿವಾರ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಿಮಾನ್ಶು ವ್ಯಾಸ್ ಸಲ್ಲಿಸಿದ್ದಾರೆ.
ಕಾಂಗ್ರೆಸ್ ನಲ್ಲಿ ನಮ್ಮ ಮಾತಿಗೆ ಬೆಲೆ ಇಲ್ಲದಂತಾಗಿದೆ. ರಾಹುಲ್ ಗಾಂಧಿ ಭೇಟಿ ಕಷ್ಟವಾಗಿದೆ. ನಾಯಕತ್ವ ಹಾಗೂ ಸಂಘಟನೆಯಲ್ಲಿ ಸಂವಹನದ ಕೊರತೆಯಿದೆ. ಪಕ್ಷಕ್ಕಾಗಿ ದುಡಿಯುವವರ ಬಗ್ಗೆ ಪಕ್ಷದಲ್ಲಿ ಗೌರವ ಕಡಿಮೆಯಾಗಿದೆ ಎಂದು ಅವರು ದೂರಿದ್ದಾರೆ. ಹಿಮಾನ್ಶು ವ್ಯಾಸ್ ಸುರೇಂದ್ರನಗರದ ವಡ್ವಾನ್ ಕ್ಷೇತ್ರದಿಂದ ಈ ಹಿಂದೆ ಎರಡು ಬಾರಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಎದುರು ಸೋತಿದ್ದರು.
Advertisement