ಡೆಹ್ರಾಡೂನ್: ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎನ್ನುತ್ತಾರೆ ದೊಡ್ಡವರು. ಇದು ನಿಜವೋ ಸುಳ್ಳೋ ತಿಳಿಯದು. ಆದರೆ, ಎಷ್ಟೋ ಮದುವೆಗಳು ಕಲ್ಯಾಣ ಮಂಟಪದವರೆಗೂ ಬಂದು ನಿಲ್ಲುತ್ತವೆ. ಕೆಲವೊಮ್ಮೆ ಮದುವೆ ನಿಲ್ಲಲು ಕಾರಣಗಳು ತುಂಬಾ ಸಿಲ್ಲಿ ಎನಿಸುತ್ತವೆ. ಉತ್ತರಾಖಂಡದಲ್ಲಿ ಇಂತದ್ದೊಂದು ಘಟನೆ ನಡೆದಿದೆ.
ಉತ್ತರಾಖಂಡದ ಹಲ್ದ್ವಾನಿಯ ವಧುವೊಬ್ಬಳು ದುಬಾರಿ ಲೆಹೆಂಗಾ ನೀಡಿಲ್ಲವೆಂಬ ಕಾರಣಕ್ಕೆ ನಿಶ್ಚಯವಾಗಿದ್ದ ಮದುವೆಯನ್ನು ನಿರಾಕರಿಸಿದ್ದಾಳೆ.
ಸ್ಥಳೀಯ ವರದಿಗಳ ಪ್ರಕಾರ, ಹಲ್ದ್ವಾನಿಯ ರಾಜಪುರ ಪ್ರದೇಶದ ಹುಡುಗಿಯೊಬ್ಬಳು ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಆದರೆ, ವರನ ಕಡೆಯವರು ತಂದಿದ್ದ ಲೆಹೆಂಗಾದ ಬೆಲೆ 'ಕೇವಲ 10,000' ಎಂದು ತಿಳಿದಾಗ ಆಕೆ ಕೋಪಗೊಂಡಿದ್ದಾಳೆ. ಈ ವೇಳೆ ಲಖನೌನಿಂದ ಬೇರೆಯ ಲೆಹೆಂಗಾವನ್ನು ಆರ್ಡರ್ ಮಾಡಿರುವುದಾಗಿ ವರನ ಕಡೆಯವರು ಹೇಳಿದ್ದಾರೆ.
ಈ ವಿಚಾರವು ಕೊತ್ವಾಲಿ ಪೊಲೀಸರಿಗೆ ತಿಳಿದಿದ್ದು, ಕೆಲ ಗಂಟೆಗಳ ಬಿಸಿಯಾದ ವಾದವಿವಾದದ ನಂತರ ಎರಡೂ ಕಡೆಯವರು ರಾಜಿ ಮಾಡಿಕೊಂಡಿದ್ದಾರೆ. ಇದರರ್ಥ 'ಎಲ್ಲವೂ ಮುಗಿದಿದೆ' ಎಂದಾಗಿದ್ದು, ಮದುವೆಯನ್ನು ರದ್ದುಗೊಳಿಸಲಾಗಿದೆ. ಹಲ್ದ್ವಾನಿಯಲ್ಲಿ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ವಾದ-ವಿವಾದಗಳ ನಂತರವೂ, ಇಬ್ಬರು ತಾವು ಬಂದ ಮಾರ್ಗಗಳಲ್ಲೇ ಹೋಗುವುದು ಉತ್ತಮ ಎನ್ನುವ ಒಪ್ಪಂದಕ್ಕೆ ಬರಲಾಯಿತು.
ರಾಣಿಖೇತ್ನ ವೈದ್ಯಕೀಯ ವೃತ್ತಿಯಲ್ಲಿ ಕೆಲಸ ಮಾಡುವ ಹುಡುಗನೊಂದಿಗೆ ಯುವತಿಯ ವಿವಾಹ ನಿಶ್ಚಯಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ. ಜೂನ್ನಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು. ನವೆಂಬರ್ 5 ರಂದು ಮದುವೆ ನಡೆಯಬೇಕಿದ್ದು, ಇದಕ್ಕಾಗಿ ಕಾರ್ಡ್ಗಳನ್ನು ಸಹ ಮುದ್ರಿಸಿ ವಿತರಿಸಲಾಗಿತ್ತು.
ಮದುವೆಗೆ ಸಕಲ ಸಿದ್ಧತೆಗಳು ನಡೆದಿದ್ದವು. ಆದರೆ, ವರ ತಂದಿದ್ದ ಲೆಹೆಂಗಾವನ್ನು ನೋಡಿದ ಹುಡುಗಿ ಕೋಪಗೊಂಡು ಆ ಹುಡುಗನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಈವೇಳೆ ವರನ ತಂದೆ ಹುಡುಗಿಗೆ ತನ್ನ ಎಟಿಎಂ ಕಾರ್ಡ್ ನೀಡಿ ಆಕೆಯ ಇಷ್ಟದ ಲೆಹೆಂಗಾ ಖರೀದಿಸುವಂತೆ ಹೇಳಿದ್ದಾಗಿ ವರದಿಯಾಗಿದೆ. ಆದರೆ, ಅದೂ ವ್ಯರ್ಥವಾಗಿತು. ಕೊನೆಗೆ ಈ ವಿಚಾರ ಪೊಲೀಸರಿಗೆ ತಿಳಿದು ಸಂಧಾನ ಮಾಡಲು ಮುಂದಾದರೂ ಪ್ರಯೋಜನವಾಗಲಿಲ್ಲ.
Advertisement