ಭುವನೇಶ್ವರ: ಗಂಡು ಮತ್ತು ಹೆಣ್ಣಿನ ಅನುಪಾತದಲ್ಲಿ ಸಮತೋಲನ ಸಾಧಿಸಲು ಮತ್ತು ಹೆಣ್ಣು ಭ್ರೂಣ ಹತ್ಯೆ ತಡೆಯುವ ನಿಟ್ಟಿನಲ್ಲಿ ಮಾಹಿತಿ ನೀಡುವವರಿಗೆ ನಗದು ಬಹುಮಾನ ಯೋಜನೆಯನ್ನು ವ್ಯಾಪಕವಾಗಿ ಅನುಷ್ಟಾನಗೊಳಿಸಲು ಒಡಿಶಾ ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ತಂತ್ರಜ್ಞಾನ ದುರ್ಬಳಕೆ ಮಾಡಿಕೊಂಡು ಭ್ರೂಣ ಲಿಂಗ ಪತ್ತೆ ಮಾಡಲಾಗುತ್ತಿದೆ. ಇದರಿಂದಾಗಿ ಲಿಂಗಾನುಪಾತದಲ್ಲಿ ಕುಸಿತ ಕಂಡುಬಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿ ಶಾಲಿನಿ ಪಂಡಿತ್ ಹೇಳಿದ್ದಾರೆ. ಜನರಿಂದ ಪಡೆಯುವ ಮಾಹಿತಿಯಿಂದ ಇಂತಹ ದುಷ್ಕೃತ್ಯ ತಡೆಯಲು ಸಾಧ್ಯ. ಆದ್ದರಿಂದ ರಾಜ್ಯಾದ್ಯಂತ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ ಮತ್ತು ನಗದು ಬಹುಮಾನ ಯೋಜನೆಯನ್ನು ತೀವ್ರಗತಿಯಲ್ಲಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿಗಲು ಮತ್ತು ಜಾಗೃತಿ ಅಧಿಕಾರಿಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಾರ್ಗಸೂಚಿ ಪ್ರಕಾರ, ಅಕ್ರಮವಾಗಿ ಭ್ರೂಣ ಲಿಂಗ ಪತ್ತೆ ಮಾಡುವ ಬಗ್ಗೆ ಮಾಹಿತಿ ನೀಡುವವರಿಗೆ ಮೂರು ಹಂತಗಳಲ್ಲಿ 25,000 ರೂ. ಬಹುಮಾನ ನೀಡಲಾಗುತ್ತದೆ. ಖಚಿತ ಮಾಹಿತಿಗೆ 10,000 ಆರೋಪಿ ವಿರುದ್ಧ ಆರೋಪ ಮತ್ತು ಪ್ರಾಸಿಕ್ಯೂಷನ್ ವರದಿ ಸಲ್ಲಿಸಿದಾಗ 10,000 ಮತ್ತು ಆರೋಪಿಯನ್ನು ನ್ಯಾಯಾಲಯದ ಎದುರು ಹಾಜರುಪಡಿಸುವಾಗ ರೂ.5,000 ನೀಡಲಾಗುತ್ತದೆ. ಈ ಯೋಜನೆಯಲ್ಲಿ ಹೆಚ್ಚಿನ ಜನರು ತೊಡಗಿಸಿಕೊಳ್ಳುವಂತೆ ಅರಿವು ಮೂಡಿಸುವಂತೆ ಜಿಲ್ಲೆಗಳಿಗೆ ಸೂಚಿಸಲಾಗಿದೆ ಎಂದು ಪಂಡಿತ್ ತಿಳಿಸಿದರು.
Advertisement