ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿದ್ದ ನಳಿನಿ ಶ್ರೀಹರನ್ ವೆಲ್ಲೂರು ಜೈಲಿನಿಂದ ಬಿಡುಗಡೆಯಾದ ಬಳಿಕ ಚೆನ್ನೈ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಇಂಗ್ಲೆಂಡ್ ನಲ್ಲಿರುವ ತನ್ನ ಪತಿ ಹಾಗೂ ಮಗಳು ಡಾ. ಹರ್ಷಿತಾ ಶ್ರೀಹರನ್ ಜೊತೆಗೆ ಇರಲು ಇಷ್ಟವಾಗುತ್ತಿದೆ. ನನ್ನ ಮಗಳು ಹೇಗೆ ಬೆಳೆದಿದ್ದಾಳೆ ಎಂಬುದನ್ನು ನೋಡಿಲ್ಲ. ಯುಕೆಯಲ್ಲಿ ಶಿಕ್ಷಕಿಯಾಗಿರುವ ನನ್ನ ಅತ್ತೆ, ಆಕೆಯನ್ನು ಬೆಳೆಸಿದ್ದಾಳೆ. ಅತ್ತೆ ಕೂಡಾ ಅಲ್ಲಿಯೇ ಇರುವುದಾಗಿ ನಳಿನಿ ಹೇಳಿದರು. ಆಕೆಯ ಜೊತೆಗಿನ ಸಂದರ್ಶನದ ಆಯ್ದಭಾಗ ಇಲ್ಲಿದೆ.
* ನಿಮ್ಮೊಂದಿಗೆ ಜೈಲಿನಿಂದ ಬಿಡುಗಡೆಯಾಗಿರುವ ಪತಿ ವಿ. ಶ್ರೀಹರನ್ ಅವರನ್ನು ತಿರುಚಿ ನಿರಾಶ್ರಿತರ ಶಿಬಿರಕ್ಕೆ ಕಳುಹಿಸಲಾಗಿದೆ. ಅದರ ಬಗ್ಗೆ ಏನು ಅನಿಸುತ್ತಿದೆ?
ಸೋಮವಾರ ಅವರೊಂದಿಗೆ ಮಾತನಾಡಿ, ಮುಂದೆ ಏನು ಮಾಡಬೇಕು ಎಂಬುದನ್ನು ನಿರ್ಧರಿಸುತ್ತೇವೆ. ನಮ್ಮ ವಕೀಲರಿಂದ ಸಲಹೆ ಪಡೆಯುತ್ತೇವೆ. ಅವರು ನಮ್ಮೊಂದಿಗೆ ಇರುವ ಅನುಮತಿ ಕೋರುತ್ತೇವೆ. ನಮ್ಮ ವಿವಾಹ ಪ್ರಮಾಣ ಪತ್ರ, ಮಗಳ ಜನನ ಪ್ರಮಾಣ ಪತ್ರವನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸುತ್ತೇವೆ. ಶ್ರೀಹರನ್ 32 ವರ್ಷಗಳಿಂದ ಭಾರತದಲ್ಲಿಯೇ ಇದ್ದಾರೆ. ಆದಾಗ್ಯೂ, ಅವರನ್ನು ನಿರಾಶ್ರಿತರ ಶಿಬಿರಕ್ಕೆ ಕಳುಹಿಸಲಾಗಿದೆ. ನನ್ನ ಮಗಳೊಂದಿಗೆ ಯುಕೆಯಲ್ಲಿ ಶ್ರೀಹರನ್ ಕೂಡಾ ನೆಲೆಸಲು ಅನುವಾಗುವಂತೆ ಶಿಬಿರದಿಂದ ಬಿಡುಗಡೆ ಮಾಡಲು ನೆರವಾಗುವಂತೆ ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡುತ್ತೇನೆ.
* 32 ವರ್ಷ ಜೈಲಿನಲ್ಲಿ ಕಳೆದ ನಂತರ ಕುಟುಂಬ ಭೇಟಿಯಾದಾಗ ಏನು ಅನಿಸಿತು?
ನಾನು ಜೈಲಿನಲ್ಲಿದ್ದರೂ ನನ್ನ ಹೃದಯ ಮಾತ್ರ ಯಾವಾಗಲೂ ಪತಿ ಮತ್ತು ಮಗಳ ಜೊತೆ ಇತ್ತು. ಇದೀಗ ಅದು ನಿಜವಾಗಿದೆ. ನನ್ನ ಮಗಳು ಭಾರತಕ್ಕೆ ಬರುವ ಯಾವುದೇ ಯೋಚನೆ ಇಲ್ಲ. ನಾವೇ ಅಲ್ಲಿಗೆ ಹೋಗುತ್ತೇವೆ.
* ನೀವು ಜೈಲಿನಿಂದ ಬಿಡುಗಡೆಯಾಗಲು ನೆರವು ನೀಡಿದ ರಾಜಕೀಯ ಮುಖಂಡರನ್ನು ಭೇಟಿಯಾಗುವ ಯೋಜನೆ ಇದೆಯಾ?
ಖಂಡಿತವಾಗಿಯೂ ಅವರನ್ನು ಭೇಟಿಯಾಗುತ್ತೇನೆ. ಆದಾಗ್ಯೂ, ಅದು ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ನನ್ನ ಬಿಡುಗಡೆಯಾಗಿ ತನ್ನ ಜೀವವನ್ನು ಪಣಕ್ಕಿಟ್ಟವರಿಗೆ ಗೌರವ ಸಲ್ಲಿಸುತ್ತೇನೆ. ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಮತ್ತು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಸ್ನಾರಕ್ಕೆ ಭೇಟಿ ನೀಡುತ್ತೇನೆ.
* ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ಭೇಟಿಯಾಗುತ್ತೀರಾ?
ಅದರ ಬಗ್ಗೆ ನಾವು ಈಗ ಯೋಚಿಸುತ್ತಿದ್ದೇವೆ. ಪೇರಾರಿವಳ್ಳನ್ ಬಿಡುಗಡೆಯಾದ ನಂತರ ಸಿಎಂ ಭೇಟಿಯಾದಾಗ ಸಮಸ್ಯೆಯಾಗಿತ್ತು. ನಾನು ಕೂಡಾ ಅವರಿಗೆ ಧನ್ಯವಾದ ಹೇಳಬೇಕು. ಆದರೆ ಅವರಿಗೆ ತೊಂದರೆ ಕೊಡಲು ನಾವು ಬಯಸಲ್ಲ.
* ರಾಜೀವ್ ಗಾಂಧಿ ಕುಟುಂಬದವರನ್ನು ಭೇಟಿಯಾಗುತ್ತೀರಾ? ಪ್ರಿಯಾಂಕಾ ಗಾಂಧಿ ಜೊತೆಗಿನ ಭೇಟಿ ಬಗ್ಗೆ ಹೇಳಿ
ತಂದೆಯನ್ನು ಕಳೆದುಕೊಂಡು ಅವರು ನೋವಿನಲ್ಲಿದ್ದಾರೆ. ಅದರಿಂದ ನನಗೆ ಮುಜುಗರವಾಗುತ್ತಿದೆ. ಒಂದು ವೇಳೆ ಅವರು ಒಪ್ಪಿದರೆ, ಅವರನ್ನು ಭೇಟಿಯಾಗುತ್ತೇನೆ. ರಾಜೀವ್ ಗಾಂಧಿ ಹತ್ಯೆ ಮಾಡಿದರ ಬಗ್ಗೆ ಪ್ರಿಯಾಂಕಾ ಗಾಂಧಿ ಕೇಳಿದರು. ನನಗೆ ಏನು ಗೊತ್ತೋ ಅದನ್ನು ಹೇಳಿದ್ದೇನೆ. ಉಳಿದದ್ದು ಅದು ವೈಯಕ್ತಿಕ. ಅದನ್ನು ನಾನು ಚರ್ಚಿಸಲು ಹೋಗಲ್ಲ. ಆಕೆಯನ್ನು ಭೇಟಿಯಾಗಲು ಹೋದಾಗಲು ತುಂಬಾ ಭಯವಾಗಿತ್ತು. ಆಕೆಯ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದ್ದೆ. ಘಟನೆ ನಡೆದು ಅನೇಕ ವರ್ಷ ಕಳೆದರೂ ಆಕೆ ಅತ್ಯಂತ ಭಾವನಾತ್ಮಕ ಹಾಗೂ ನೋವಿನಲ್ಲಿದ್ದಾರೆ.
Advertisement