ಮುಂಬೈ: ಮಹಿಳೆಯರ ಉಡುಪಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಯೋಗ ಗುರು ಬಾಬಾ ರಾಮ್ದೇವ್ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ ಎಂದು ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಅವರು ಹೇಳಿದ್ದಾರೆ.
ಕಳೆದ ವಾರ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ, ರಾಮ್ದೇವ್ ಅವರು ಮಹಿಳೆಯರು ಸೀರೆ, ಸಲ್ವಾರ್ ಕಮೀಜ್ ಸೇರಿದಂತೆ ಯಾವುದೇ ಉಡುಪು ಧರಿಸಿದರೂ ಸುಂದರವಾಗಿ ಕಾಣಿಸುತ್ತಾರೆ. "ಏನನ್ನೂ ಧರಿಸದಿದ್ದರೂ" ಇನ್ನೂ ಇನ್ನೂ ಚೆಂದ ಕಾಣಿಸ್ತಾರೆ ಎಂದು ಹೇಳಿದ್ದರು.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಅವರು ಸಹ ಈ ಕಾರ್ಯಕ್ರಮದ ವೇದಿಕೆಯಲ್ಲಿದ್ದರು.
ಇದನ್ನು ಓದಿ: 'ಅಮೃತಾ ಫಡ್ನವೀಸ್ ಬಾಬಾ ರಾಮ್ ದೇವ್ ಕಪಾಳಕ್ಕೆ ಹೊಡೆದು ಎದ್ದು ಹೋಗಬೇಕಾಗಿತ್ತು, ಅದು ಬಿಟ್ಟು ನಗುತ್ತಾ ಕೂತಿದ್ದೇಕೆ'!
ಬಾಬಾ ರಾಮ್ ದೇವ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಮಹಾರಾಷ್ಟ್ರ ಮಹಿಳಾ ಆಯೋಗ, ಅವರಿಗೆ ನೋಟಿಸ್ ನೀಡಿತ್ತು. ನೋಟಿಸ್ ಗೆ ಉತ್ತರವಾಗಿ ರಾಮ್ ದೇವ್ ಕ್ಷಮೆಯಾಚಿಸಿದ್ದಾರೆ ಎಂದು ರೂಪಾಲಿ ಚಕಂಕರ್ ತಿಳಿಸಿದ್ದಾರೆ.
ಥಾಣೆಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಬಾಬಾ ರಾಮ್ದೇವ್ ಅವರು ಮಹಿಳೆಯರ ವಿರುದ್ಧ ಕೀಳುಮಟ್ಟದ ಭಾಷೆ ಬಳಸಿದ್ದು, ಇದನ್ನು ರಾಜ್ಯ ಮಹಿಳಾ ಆಯೋಗ ಗಂಭೀರವಾಗಿ ಪರಿಗಣಿಸಿ, ಎರಡು ದಿನಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ನೋಟಿಸ್ ಕಳುಹಿಸಿತ್ತು. ಅವರ ಪ್ರತಿಕ್ರಿಯೆಯನ್ನು ಸ್ವೀಕರಿಸಿದ್ದು, ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ ಎಂದು ಚಕಂಕರ್ ಟ್ವೀಟ್ ಮಾಡಿದ್ದಾರೆ.
Advertisement