ಹುದ್ದೆ ಸಿಗದಿದ್ದಕ್ಕೆ ಅಸಮಾಧಾನವಿಲ್ಲ, 2024ರ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ಆರಂಭಿಸುತ್ತೇನೆ: ಪಂಕಜಾ ಮುಂಡೆ

ತಮಗೆ ಯಾವುದೇ ಹುದ್ದೆ ಸಿಗದಿರುವ ಬಗ್ಗೆ ಅಸಮಾಧಾನ ಹೊಂದಿಲ್ಲ ಎಂದು ಹೇಳಿರುವ ಬಿಜೆಪಿ ನಾಯಕಿ ಪಂಕಜಾ ಮುಂಡೆ ತಾವು 2024 ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಪರ್ಲಿಯಿಂದ ಸ್ಪರ್ಧಿಸಲು ಸಿದ್ಧತೆಗಳನ್ನು ಪ್ರಾರಂಭಿಸುವುದಾಗಿ ಹೇಳಿದ್ದಾರೆ.  
ಪಂಕಜಾ ಮುಂಡೆ
ಪಂಕಜಾ ಮುಂಡೆ

ಔರಂಗಾಬಾದ್: ತಮಗೆ ಯಾವುದೇ ಹುದ್ದೆ ಸಿಗದಿರುವ ಬಗ್ಗೆ ಅಸಮಾಧಾನ ಹೊಂದಿಲ್ಲ ಎಂದು ಹೇಳಿರುವ ಬಿಜೆಪಿ ನಾಯಕಿ ಪಂಕಜಾ ಮುಂಡೆ ತಾವು 2024 ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಪರ್ಲಿಯಿಂದ ಸ್ಪರ್ಧಿಸಲು ಸಿದ್ಧತೆಗಳನ್ನು ಪ್ರಾರಂಭಿಸುವುದಾಗಿ ಹೇಳಿದ್ದಾರೆ.  

ಬಿಜೆಪಿ ನಾಯಕ ದಿವಂಗತ ಗೋಪಿನಾಥ್ ಮುಂಡೆ ಅವರ ಪುತ್ರಿ ಪಂಕಜಾ ಮುಂಡೆ ಬೀಡ್ ಜಿಲ್ಲೆಯ ಸಾವರ್ಗಾಂವ್ ಘಾಟ್‌ನಲ್ಲಿ ತಮ್ಮ ಸಾಂಪ್ರದಾಯಿಕ ದಸರಾ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದರು. 'ಹೋರಾಟವು ಪ್ರತಿಯೊಬ್ಬರ ಜೀವನದ ಭಾಗವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರು ಸಹ ಹೋರಾಡಬೇಕಾಯಿತು. ದಿವಂಗತ ಗೋಪಿನಾಥ್ ಮುಂಡೆ ಅವರು ತಮ್ಮ ಇಡೀ ರಾಜಕೀಯ ಜೀವನದುದ್ದಕ್ಕೂ ಹೋರಾಡಬೇಕಾಯಿತು. ಅವರು ಕೇವಲ ನಾಲ್ಕೂವರೆ ವರ್ಷಗಳ ಕಾಲ ಸರ್ಕಾರದಲ್ಲಿದ್ದರು ಎಂದು ಅವರು ಹೇಳಿದರು.

ತಾವು ಜನಸಂಘದ ವಿಚಾರವಾದಿ ದೀನದಯಾಳ್ ಉಪಾಧ್ಯಾಯ ಅವರ ಪರಂಪರೆಯನ್ನು ಮುನ್ನಡೆಸುತ್ತಿರುವುದಾಗಿ ಪಂಕಜಾ ಹೇಳಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ತಮ್ಮ ಹಿಂದಿನ ದಸರಾ ರ್ಯಾಲಿಗಳಲ್ಲಿ ಜನಸಂದಣಿಯನ್ನು ನೋಡಿದ್ದರು . ಈ ಜನರಿಗಾಗಿ ಕೆಲಸ ಮಾಡಲು ಅವರು ಕೇಳಿಕೊಂಡರು. ತಮ್ಮ ನಾಯಕನಿಗೆ ಏನಾದರೂ ಸಿಗಬೇಕು ಎಂದು ಜನರು ಭಾವಿಸುತ್ತಾರೆ ಮತ್ತು ಅದರಲ್ಲಿ ಯಾವುದೇ ತಪ್ಪಿಲ್ಲ. ನಾನು 2019 ರ ವಿಧಾನಸಭಾ ಚುನಾವಣೆಯಿಂದ ಯಾವುದೇ ಹುದ್ದೆಯನ್ನು ಹೊಂದಿಲ್ಲ ಆದರೆ ನಾನು ಅಸಮಾಧಾನಗೊಂಡಿಲ್ಲ” ಎಂದು ಮಾಜಿ ರಾಜ್ಯ ಸಚಿವೆ ಪಂಕಜಾ ಮುಂಡೆ ಹೇಳಿದರು.

ಆದಾಗ್ಯೂ, ತನ್ನ ಸೋದರ ಸಂಬಂಧಿ ಮತ್ತು ಎನ್‌ಸಿಪಿ ನಾಯಕ ಧನಂಜಯ್ ಮುಂಡೆ ಅವರಿಂದ ಕಳೆದ ಬಾರಿ ಸೋತಿದ್ದ ಪರ್ಲಿಯಿಂದ ಮತ್ತೆ ಸ್ಪರ್ಧಿಸಲು ಬಯಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ಪಕ್ಷದ ಸಂಘಟನೆಯು ಯಾವುದೇ ವ್ಯಕ್ತಿಗಿಂತ ಮೇಲಿದೆ, ನಾನು ಯಾರೊಂದಿಗೂ ಅಸಮಾಧಾನ ಹೊಂದಿಲ್ಲ. ಪಕ್ಷವು ನನಗೆ ಟಿಕೆಟ್ ನೀಡಿದರೆ ನಾನು 2024 ರ ಚುನಾವಣೆಗೆ ತಯಾರಿ ಪ್ರಾರಂಭಿಸುತ್ತೇನೆ ಎಂದು ಅವರು ಹೇಳಿದರು.

2014 ಮತ್ತು 2019 ರ ನಡುವೆ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರದಲ್ಲಿ ಪಂಕಜಾ ಮುಂಡೆ ಕ್ಯಾಬಿನೆಟ್ ಸಚಿವರಾಗಿದ್ದರು. ಆದರೆ ಈ ಜೂನ್‌ನಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣದ ಮೈತ್ರಿಯೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಾಗ ಅವರು ಸಂಪುಟಕ್ಕೆ ಬರಲಿಲ್ಲ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com