ನವದೆಹಲಿ: ಉತ್ಪಾದನೆ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಮಂಗಳವಾರ ಕೇಂದ್ರ ಸರ್ಕಾರ ಪ್ರಸಕ್ತ ಬೆಳೆ ವರ್ಷದಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಯನ್ನು ಗೋಧಿ ಕ್ವಿಂಟಾಲ್ಗೆ 110 ರೂ. ಮತ್ತು ಸಾಸಿವೆಗೆ ಕ್ವಿಂಟಾಲ್ಗೆ 400 ರೂ.ಗಳನ್ನು ಮಂಗಳವಾರ ಹೆಚ್ಚಿಸಿದೆ.
ಈ ಮೂಲಕ ಗೋಧಿಯನ್ನು ಕ್ವಿಂಟಾಲ್ಗೆ 2,125 ಕೊಟ್ಟು, ಪ್ರತಿ ಕ್ವಿಂಟಾಲ್ ಸಾಸಿವೆಯನ್ನು 5,450 ರೂಪಾಯಿ ನೀಡಿ ಖರೀದಿಸಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಎಂಎಸ್ಪಿಗಳನ್ನು (ಕನಿಷ್ಠ ಬೆಂಬಲ ಬೆಲೆ) ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಎಂಎಸ್ಪಿ ಎನ್ನುವುದು ಸರ್ಕಾರವು ರೈತರಿಂದ ಧಾನ್ಯವನ್ನು ಖರೀದಿಸುವ ದರವಾಗಿದೆ. ಸದ್ಯ, ಸರ್ಕಾರವು ಖಾರಿಫ್ ಮತ್ತು ರಾಬಿ ಋತುಗಳಲ್ಲಿ ಬೆಳೆಯುವ 23 ಬೆಳೆಗಳಿಗೆ ಎಂಎಸ್ಪಿಯನ್ನು ನಿಗದಿಪಡಿಸುತ್ತದೆ.
ಖಾರಿಫ್ (ಬೇಸಿಗೆ) ಬೆಳೆಗಳ ಕೊಯ್ಲು ಮಾಡಿದ ತಕ್ಷಣ ರಾಬಿ (ಚಳಿಗಾಲ) ಬೆಳೆಗಳ ಬಿತ್ತನೆ ಅಕ್ಟೋಬರ್ನಲ್ಲಿ ಪ್ರಾರಂಭವಾಗುತ್ತದೆ. ಗೋಧಿ ಮತ್ತು ಸಾಸಿವೆ ಪ್ರಮುಖ ರಾಬಿ ಬೆಳೆಗಳಾಗಿವೆ.
ಅಧಿಕೃತ ಹೇಳಿಕೆಯ ಪ್ರಕಾರ, 2022-23ರ ಬೆಳೆ ವರ್ಷ (ಜುಲೈ-ಜೂನ್) ಮತ್ತು 2023-24 ಮಾರುಕಟ್ಟೆ ಋತುವಿಗಾಗಿ ಆರು ರಾಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳವನ್ನು ಸಿಸಿಇಎ ಅನುಮೋದನೆ ನೀಡಿದೆ. 2021-22ರ ಬೆಳೆ ವರ್ಷದಲ್ಲಿ ಕ್ವಿಂಟಾಲ್ಗೆ 2,015 ರೂ.ಗಳಿದ್ದ ಬೆಲೆ 110 ರೂ.ಗಳ ಹೆಚ್ಚಳದಿಂದ 2,125ರಷ್ಟಾಗಿದೆ.
ಗೋಧಿ ಉತ್ಪಾದನಾ ವೆಚ್ಚ ಪ್ರತಿ ಕ್ವಿಂಟಾಲ್ಗೆ 1,065 ರೂ. ಎಂದು ಅಂದಾಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Advertisement