ಹೈದ್ರಾಬಾದ್: ಮುನುಗೋಡು ವಿಧಾನಸಭಾ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿರುವ ತಮ್ಮ ಸಹೋದರನಿಗೆ ಬೆಂಬಲ ಕೋರಿರುವ ಧ್ವನಿ ಮುದ್ರಣ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ತೆಲಂಗಾಣದ ಪಕ್ಷದ ಸಂಸದ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಅವರಿಗೆ ಶೋಕಾಸ್ ನೋಟಿಸ್ ನೀಡಿದೆ.
ಪಕ್ಷದ ಸಂವಿಧಾನದ ನಿಬಂಧನೆಗಳ ಪ್ರಕಾರ, ತಮ್ಮ ವಿರುದ್ಧ ಏಕೆ ಶಿಸ್ತು ಕ್ರಮ ತೆಗೆದುಕೊಳ್ಳಬಾರದು ಎಂದು 10 ದಿನಗಳಲ್ಲಿ ವಿವರಿಸುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರಿಕ್ ಅನ್ವರ್ ಇಂದು ನೀಡಿರುವ ನೋಟಿಸ್ನಲ್ಲಿ ಕೇಳಿದ್ದಾರೆ.
ಮುನುಗೋಡು ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಹೇಳಿರುವ ಧ್ವನಿ ದಾಖಲಾಗಿದ್ದು, ಇದನ್ನು ತೆಲಂಗಾಣ ಉಸ್ತುವಾರಿ ಸಂಸದ ಮಾಣಿಕಂ ಠಾಗೋರ್ ಅವರು ಶಿಸ್ತು ಕ್ರಿಯಾ ಸಮಿತಿಯ ಗಮನಕ್ಕೆ ತಂದಿದ್ದಾರೆ.
ಧ್ವನಿ ಮುದ್ರಣವ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಪ್ರಮುಖ ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದು ಪಕ್ಷದ ಶಿಸ್ತಿನ ಉಲ್ಲಂಘನೆಯಾಗಿದೆ ಎಂದು ಅನ್ವರ್ ಹೇಳಿದ್ದಾರೆ.
Advertisement