ನಮ್ಮ ಸರ್ಕಾರ ಯಾವಾಗಲೂ ಯುದ್ಧವನ್ನು ಕೊನೆಯ ಆಯ್ಕೆ ಎಂದು ಪರಿಗಣಿಸುತ್ತದೆ, ನಾವು ವಿಶ್ವ ಶಾಂತಿ ಪರವಾಗಿದ್ದೇವೆ: ಕಾರ್ಗಿಲ್​ನಲ್ಲಿ ಪ್ರಧಾನಿ ಮೋದಿ

ಭಾರತ ಯಾವಾಗಲೂ ಯುದ್ಧವನ್ನು ಕೊನೆಯ ಆಯ್ಕೆ ಎಂದು ಪರಿಗಣಿಸುತ್ತದೆ, ಆದರೆ ರಾಷ್ಟ್ರದ ಮೇಲೆ ಯಾರೇ ಕೆಟ್ಟ ದೃಷ್ಟಿ ಬೀರಿದರೂ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುವ ಶಕ್ತಿ ಮತ್ತು ತಂತ್ರಗಳನ್ನು ನಮ್ಮ ಸಶಸ್ತ್ರ ಪಡೆ ಹೊಂದಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಕಾರ್ಗಿಲ್: ಭಾರತ ಯಾವಾಗಲೂ ಯುದ್ಧವನ್ನು ಕೊನೆಯ ಆಯ್ಕೆ ಎಂದು ಪರಿಗಣಿಸುತ್ತದೆ, ಆದರೆ ರಾಷ್ಟ್ರದ ಮೇಲೆ ಯಾರೇ ಕೆಟ್ಟ ದೃಷ್ಟಿ ಬೀರಿದರೂ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುವ ಶಕ್ತಿ ಮತ್ತು ತಂತ್ರಗಳನ್ನು ನಮ್ಮ ಸಶಸ್ತ್ರ ಪಡೆ ಹೊಂದಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ.

ದೀಪಾವಳಿ ಹಿನ್ನೆಲೆಯಲ್ಲಿ ಲಡಾಖ್​ನ​ ಕಾರ್ಗಿಲ್​ಗೆ ಭೇಟಿ ನೀಡಿರುವ ಪ್ರಧಾನಿ ಮೋದಿಯವರು, ಈ ವೇಳೆ ಯೋಧರಿಗೆ ಸಿಹಿ ಹಂಚಿ ಮಾತನಾಡಿದರು.

ನಿಮ್ಮೊಂದಿಗೆ ಇರದೇ ನಾನು ಉತ್ತಮ ದೀಪಾವಳಿಯನ್ನು ಆಚರಿಸಲು ಸಾಧ್ಯವಿಲ್ಲ. ನನ್ನ ಪಾಲಿಗೆ ನೀವೆಲ್ಲರೂ ನನ್ನ ಕುಟುಂಬವಾಗಿದ್ದೀರಿ. ನಿಮ್ಮೆಲ್ಲರ ನಡುವೆ ದೀಪಾವಳಿಯನ್ನು ಆಚರಿಸುವುದು ಒಂದು ಭಾಗ್ಯವೇ ಸರಿ. ಕಾರ್ಗಿಲ್​ನ ಈ ವಿಜಯದ ಭೂಮಿಯಲ್ಲಿ ನಿಂತು ದೇಶದ ಹಾಗೂ ವಿಶ್ವದ ಜನರಿಗೆ ದೀಪಾವಳಿ ಶುಭ ಕೋರುತ್ತೇನೆ. ಕಾರ್ಗಿಲ್ ವಿಜಯ ಪತಾಕೆ ಹಾರಿಸದ ಪಾಕಿಸ್ತಾನದೊಂದಿಗೆ ಒಂದೇ ಒಂದು ಯುದ್ಧ ನಡೆದಿಲ್ಲ. ದೀಪಾವಳಿ ಅಂದರೆ ಭಯೋತ್ಪಾದನೆಯ ಅಂತ್ಯದ ಹಬ್ಬ ಮತ್ತು ಕಾರ್ಗಿಲ್ ಅದನ್ನು ಸಾಧ್ಯವಾಗಿಸಿತು.

ನಮ್ಮ ಸರ್ಕಾರ ಯಾವಾಗಲೂ ಯುದ್ಧವನ್ನು ಕೊನೆಯ ಆಯ್ಕೆ ಎಂದು ಪರಿಗಣಿಸುತ್ತದೆ. ನಾವು ಯಾವಾಗಲೂ ಯುದ್ಧವನ್ನು ಕೊನೆಯ ಆಯ್ಕೆ ಎಂದು ಪರಿಗಣಿಸಿದ್ದೇವೆ. ಅದು ಲಂಕಾ ಅಥವಾ ಕುರುಕ್ಷೇತ್ರದಲ್ಲಿ ಯುದ್ಧದಲ್ಲೇ ಇರಲಿ, ಕೊನೆಯವರೆಗೂ ಯುದ್ಧ ನಡೆಯದಂತೆ ತಡೆಯಲು ಎಲ್ಲ ಪ್ರಯತ್ನಗಳನ್ನು ಮಾಡಲಾಯಿತು. ನಾವು ವಿಶ್ವಶಾಂತಿಯ ಪರವಾಗಿದ್ದೇವೆ. ದೀಪಾವಳಿ ಎಂದರೆ ಭಯೋತ್ಪಾದನೆಯ ಅಂತ್ಯದ ಹಬ್ಬ. ಕಾರ್ಗಿಲ್ ಅದನ್ನು ಸಾಬೀತುಪಡಿಸಿದೆ.

ಕಾರ್ಗಿಲ್‌ನಲ್ಲಿ ನಮ್ಮ ಸೇನೆಯು ಭಯೋತ್ಪಾದನೆಯ ಚಿಲುಮೆಯನ್ನು ಹತ್ತಿಕ್ಕಿದೆ. ಇಲ್ಲಿಯವರೆಗೆ, ದೇಶವು ಆಚರಿಸಿದ ವಿಜಯದ ದೀಪಾವಳಿಯನ್ನು ನೆನಪಿಸಿಕೊಳ್ಳಿ. ಏಕೆಂದರೆ, ನಮ್ಮ ಸೇನಾ ಪಡೆಗಳು ಗಡಿಯಲ್ಲಿ ನಿಂತು ನಮ್ಮನ್ನು ರಕ್ಷಣೆ ಮಾಡುತ್ತಿವೆ. ದೇಶದ ಪ್ರತಿ ನಾಗರಿಕನು ನೆಮ್ಮದಿಯಿಂದ ಮಲಗಲು ನಮ್ಮ ಯೋಧರು ಕಾರಣ. ನಿಮ್ಮ ತ್ಯಾಗ ಯಾವಾಗಲೂ ನಮ್ಮ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದೆ ಎಂದು ಹೇಳಿದರು. 

ಉಕ್ರೇನ್​ ಮತ್ತು ರಷ್ಯಾ ಯುದ್ಧದ ಸಂದರ್ಭದಲ್ಲಿ ನಮ್ಮ ರಾಷ್ಟ್ರ ಧ್ವಜ ನಮ್ಮ ನಾಗರಿಕರಿಗೆ ರಕ್ಷಾ ಕವಚ ಆಗಿದ್ದನ್ನು ನಾವು ನೋಡಿದ್ದೇವೆ. ವಿಶ್ವದಾದ್ಯಂತ ಭಾರತದ ಮೇಲಿನ ಗೌರವ ಹೆಚ್ಚಾಗಿದೆ. ದೇಶದ ಒಳಗೆ ಮತ್ತು ಹೊರಗಿರುವ ಶತ್ರುಗಳ ವಿರುದ್ಧ ಭಾರತ ಯಶಸ್ವಿಯಾಗಿ ನಿಂತಿದ್ದಕ್ಕೆ ಇದೆಲ್ಲ ಸಾಧ್ಯವಾಯಿತು. 

ನೀವೆಲ್ಲರೂ ಗಡಿಯಲ್ಲಿ ನಮ್ಮನ್ನು ರಕ್ಷಿಸುತ್ತಿರುವಂತೆಯೇ ನಾವು ದೇಶದೊಳಗೆ ಭಯೋತ್ಪಾದನೆ, ನಕ್ಸಲ್​, ಭ್ರಷ್ಟಾಚಾರದಂತಹ ದುಷ್ಟರ ವಿರುದ್ಧ ಹೋರಾಡಲು ಕೆಲಸ ಮಾಡುತ್ತಿದ್ದೇವೆ. ನಕ್ಸಲರು ರಾಷ್ಟ್ರದ ಬಹುದೊಡ್ಡ ಭಾಗವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು. ಆದರೆ, ಇಂದು ಅದು ವೇಗವಾಗಿ ಕಡಿಮೆಯಾಗುತ್ತಿದೆ ಎಂದು ತಿಳಿಸಿದರು.

ಈ ದೇಶದ ಸೈನಿಕರು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಲು ಅನುಕೂಲವಾಗುವಂತೆ ಗಡಿ ಪ್ರದೇಶಗಳಲ್ಲಿ ತಡೆರಹಿತ ಸಂಪರ್ಕದೊಂದಿಗೆ ಹೈಟೆಕ್ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಮಹಿಳಾ ಅಧಿಕಾರಿಗಳ ಸೇರ್ಪಡೆ ನಮ್ಮ ಶಕ್ತಿಯ ಬೆಳವಣಿಗೆಗೆ ಕಾರಣವಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com