ವಡೋದರಾ: ಗುಜರಾತ್ ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತ ಗಳಿಸಲು ಬಿಜೆಪಿ ಇದೀಗ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ವಿಚಾರವನ್ನು ಪ್ರಸ್ತಾಪ ಮಾಡಿದೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದಿನ್ ಓವೈಸಿ ಹೇಳಿದ್ದಾರೆ.
ಗುಜರಾತ್ ನ ಬಸಸ್ಕಾಂತ ಜಿಲ್ಲೆಯಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, “ಏಕರೂಪ ನಾಗರಿಕ ಸಂಹಿತೆ ಸ್ವಯಂ ಪ್ರೇರಿತವಾಗಿರಬೇಕು, ಕಡ್ಡಾಯವಲ್ಲ ಎಂದು ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ್ದು ನಿಜವಲ್ಲವೇ? ಆದರೆ ಬಿಜೆಪಿಯು ತನ್ನ ಹಿಂದುತ್ವದ ಅಜೆಂಡಾದೊಂದಿಗೆ ಮುಂದುವರಿಯಲು ಬಯಸುತ್ತದೆ. ಹೀಗಾಗಿ ಮತ ಪಡೆಯಲು ಚುನಾವಣೆಗೆ ಮುನ್ನ ಇಂತಹ ವಿಷಯಗಳನ್ನು ಕೆದಕುತ್ತಿದೆ ಎಂದು ಹೇಳಿದ್ದಾರೆ.
ಏಕರೂಪ ನಾಗರಿಕ ಸಂಹಿತೆಯು ಅಗತ್ಯವೂ ಅಲ್ಲ, ಅಪೇಕ್ಷಿತವೂ ಅಲ್ಲ ಎಂದು 2018ರಲ್ಲಿ ಕಾನೂನು ಆಯೋಗ ಹೇಳಿದೆ. “ಮುಸ್ಲಿಮನಿಗೆ ಮದುವೆಯು ಒಂದು ಒಪ್ಪಂದ, ಹಿಂದೂಗಳಿಗೆ ಅದು ಶಾಶ್ವತವಾಗಿ ಬದುಕುವುದು, ಇದು ಭಾರತದ ಬಹುತ್ವವಾಗಿದೆ. ಯುಸಿಸಿಯನ್ನು ಜಾರಿಗೊಳಿಸುವ ಮೂಲಕ ಯಾರಾದರೂ ಆರ್ಟಿಕಲ್ 29 (ಅಲ್ಪಸಂಖ್ಯಾತ ಗುಂಪುಗಳ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ) ವಿರುದ್ಧ ಕಾನೂನನ್ನು ಮಾಡಬಹುದೇ?” ಎಂದು ಪ್ರಶ್ನಿಸಿದ್ದಾರೆ.
ಹಿಂದೂ ಅವಿಭಜಿತ ಕುಟುಂಬದ ಅಡಿಯಲ್ಲಿ ಆದಾಯ ತೆರಿಗೆ ರಿಯಾಯಿತಿಯ ಪ್ರಯೋಜನದಿಂದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಏಕೆ ಹೊರಗಿಡಲಾಗಿದೆ ಎಂದು ನಾನು ಪ್ರಧಾನಿಯನ್ನು ಕೇಳಲು ಬಯಸುತ್ತೇನೆ? ಇದು ಸಮಾನತೆಯ ಹಕ್ಕಿಗೆ ವಿರುದ್ಧವಾಗಿಲ್ಲವೇ?” ಎಂದು ಹೇಳಿದ್ದಾರೆ.
Advertisement