ಧರ್ಮ ಸಂಸದ್ ದ್ವೇಷ ಭಾಷಣ: ಹಿಂದೂಗಳು ಒಗ್ಗೂಡದ ಹೊರತು ಹೋರಾಟ ಸಾಧ್ಯವಿಲ್ಲ.. ಶುಕ್ರವಾರ ಶರಣಾಗುತ್ತೇನೆ ಎಂದ ಜಿತೇಂದ್ರ ತ್ಯಾಗಿ

ಹರಿದ್ವಾರದ ದ್ವೇಷ ಭಾಷಣ ಪ್ರಕರಣದ ಆರೋಪಿ ಜಿತೇಂದ್ರ ನಾರಾಯಣ್ ತ್ಯಾಗಿ ಶುಕ್ರವಾರ ಹರಿದ್ವಾರದ ನ್ಯಾಯಾಲಯಕ್ಕೆ ಶರಣಾಗುವುದಾಗಿ ಹೇಳಿದ್ದು, ತನ್ನ ಜೀವಕ್ಕೆ ಅಪಾಯವಿದೆ ಮತ್ತು ಆತ್ಮಾಹುತಿ ದಾಳಿಯಲ್ಲಿ ಸಾಯಬಹುದು ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಜಿತೇಂದ್ರ ತ್ಯಾಗಿ
ಜಿತೇಂದ್ರ ತ್ಯಾಗಿ

ಡೆಹ್ರಾಡೂನ್: ಹರಿದ್ವಾರದ ದ್ವೇಷ ಭಾಷಣ ಪ್ರಕರಣದ ಆರೋಪಿ ಜಿತೇಂದ್ರ ನಾರಾಯಣ್ ತ್ಯಾಗಿ ಶುಕ್ರವಾರ ಹರಿದ್ವಾರದ ನ್ಯಾಯಾಲಯಕ್ಕೆ ಶರಣಾಗುವುದಾಗಿ ಹೇಳಿದ್ದು, ತನ್ನ ಜೀವಕ್ಕೆ ಅಪಾಯವಿದೆ ಮತ್ತು ಆತ್ಮಾಹುತಿ ದಾಳಿಯಲ್ಲಿ ಸಾಯಬಹುದು ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವ ಮೊದಲು ವಸೀಮ್ ರಿಜ್ವಿ ಎಂದು ಕರೆಯಲ್ಪಡುತ್ತಿದ್ದ ತ್ಯಾಗಿ ಅವರಿಗೆ, ಮೇ 17 ರಂದು ಸುಪ್ರೀಂ ಕೋರ್ಟ್ ಧರ್ಮ ಸಂಸದ್ ಪ್ರಕರಣದಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಮೂರು ತಿಂಗಳ ಮಧ್ಯಂತರ ಜಾಮೀನು ನೀಡಿತ್ತು. ಸೋಮವಾರ ಅವರ ಜಾಮೀನು ವಿಸ್ತರಣೆಗೆ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಸೆಪ್ಟೆಂಬರ್ 2 ರಂದು ಶರಣಾಗುವಂತೆ ಸೂಚಿಸಿತು.

ಇದೀಗ ಶುಕ್ರವಾರ ಇಲ್ಲಿನ ಸಿಜೆಎಂ ನ್ಯಾಯಾಲಯಕ್ಕೆ ಶರಣಾಗುತ್ತೇನೆ ಎಂದು ತ್ಯಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೆ ತಮಗೆ ಜೀವಬೆದರಿಕೆ ಇದ್ದು, ಮುಸ್ಲಿಂ ಮೂಲಭೂತವಾದಿಗಳ ಆತ್ಮಹತ್ಯಾ ದಾಳಿಯಲ್ಲಿ ನಾನು ಸಾಯಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತ ವಿಡಿಯೋವೊಂದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ನನ್ನ ಜೀವಕ್ಕೆ ಅಪಾಯವಿದೆ ಮತ್ತು ಅವರು (ಮುಸ್ಲಿಂ ಮೂಲಭೂತವಾದಿಗಳು) ಆತ್ಮಾಹುತಿ ದಾಳಿಯಲ್ಲಿ ನನ್ನನ್ನು ಸಾಯಿಸಬಹುದು. ಹರಿದ್ವಾರದ ಜ್ವಾಲಾಪುರದ ಕೆಲವು ಕ್ರಿಮಿನಲ್‌ಗಳು ಜೈಲಿನಲ್ಲಿದ್ದಾಗಲೇ ನನ್ನ ಶಿರಚ್ಛೇದ ಮಾಡಲು ಯೋಜಿಸಿದ್ದರು. ಆದರೆ ಕಟ್ಟುನಿಟ್ಟಾದ ಜೈಲು ನಿಯಮಗಳಿಂದ ಅದು ಯಶಸ್ವಿಯಾಗಲಿಲ್ಲ ಎಂದು ಅವರು ಬುಧವಾರ ಬಿಡುಗಡೆಯಾದ ವೀಡಿಯೊದಲ್ಲಿ ತಿಳಿಸಿದ್ದಾರೆ.

ಅಂತೆಯೇ, ಸನಾತನ ಧರ್ಮದಲ್ಲಿ ನನಗೆ ನಂಬಿಕೆ ಇರುವುದರಿಂದ ಪ್ರಾಣ ಬೆದರಿಕೆಯ ಬಗ್ಗೆ ಚಿಂತಿಸುವುದಿಲ್ಲ ಮತ್ತು ಕೊನೆಯ ಉಸಿರು ಇರುವವರೆಗೂ ಅದಕ್ಕಾಗಿ ಹೋರಾಡುತ್ತೇನೆ. ಭಾರತದಲ್ಲಿ ಅಲ್ಪಸಂಖ್ಯಾತರು ಬಹುಸಂಖ್ಯಾತರಿಗಿಂತ ಹೆಚ್ಚಿನ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಆದ್ದರಿಂದ ಅವರು ಸಂವಿಧಾನದ 19 ನೇ ವಿಧಿಯನ್ನು "ಗುರಾಣಿ" ಯಾಗಿ ಬಳಸಿಕೊಂಡು ಹಿಂದೂ ದೇವರು ಮತ್ತು ದೇವತೆಗಳ ವಿರುದ್ಧ ಮಾತನಾಡುತ್ತಿದ್ದಾರೆ. ಆದರೆ ಅವರ ಧಾರ್ಮಿಕ ಪುಸ್ತಕಗಳಲ್ಲಿ ಏನು ಬರೆಯಲಾಗಿದೆ ಎಂಬುದಕ್ಕೆ ನಾವು ಪ್ರಸ್ತಾಪಿಸುವುದನ್ನು ಸಹ ದ್ವೇಷದ ಭಾಷಣವೆಂದು ಪರಿಗಣಿಸಲಾಗುತ್ತದೆ" ಎಂದು ತ್ಯಾಗಿ ಹೇಳಿದ್ದಾರೆ.

ಅಂತೆಯೇ ತಮ್ಮ ವಿರುದ್ಧ ಹೊರಿಸಲಾಗಿರುವ ಆರೋಪಗಳೆಲ್ಲವೂ ಸುಳ್ಳು ಎಂದಿರುವ ತ್ಯಾಗಿ, ನಾನು ಮಾಡದ ಅಪರಾಧಗಳ ಸುಳ್ಳು ಆರೋಪಗಳನ್ನು ನನ್ನ ವಿರುದ್ಧ ಹೊರಿಸಲಾಗಿದೆ, ಮುಲ್ಲಾಗಳು ರೂಪಿಸಿದ ಷಡ್ಯಂತ್ರಕ್ಕೆ ನಾನು ಬಲಿಪಶು ಆಗುತ್ತಿದ್ದೇನೆ ಎಂದು ಆರೋಪಿಸಿದ್ದಾರೆ. ಅಂತೆಯೇ ಹಿಂದೂ ಧರ್ಮಕ್ಕೆ ಮರಳಿದ್ದನ್ನು "ಘರ್ ವಾಪ್ಸಿ" ಎಂದು ಬಣ್ಣಿಸಿದ ತ್ಯಾಗಿ, ತಾನು ಧರ್ಮಕ್ಕೆ ಮತಾಂತರಗೊಂಡಿದ್ದಕ್ಕೆ ಎಂದಿಗೂ ವಿಷಾದಿಸಲಿಲ್ಲ. ನಾನು ಸನಾತನ ಧರ್ಮದಲ್ಲಿದ್ದೇನೆ ಮತ್ತು ನನ್ನ ಕೊನೆಯ ಉಸಿರು ಇರುವವರೆಗೂ ಅದರಲ್ಲಿಯೇ ಇರುತ್ತೇನೆ. ಆದರೆ, ಬಹುಕಾಲದಿಂದ ಕಳೆದುಹೋದ ಸಂಬಂಧಿಯೊಬ್ಬರು ಮನೆಗೆ ಮರಳಿದ ನಂತರ ಅವರನ್ನು ನಡೆಸಿಕೊಳ್ಳುವ ರೀತಿಯಲ್ಲಿ ಅವರನ್ನು ನಡೆಸಿಕೊಳ್ಳಲಾಗುತ್ತಿಲ್ಲ ಎಂದು ಅವರು ವಿಷಾದಿಸಿದ್ದಾರೆ.

ಹಿಂದೂಗಳು ಒಗ್ಗೂಡದ ಹೊರತು ಹೋರಾಟ ಸಾದ್ಯವಿಲ್ಲ
ಇದೇ ವೇಳೆ ಹಿಂದೂಗಳ ನಡುವಿನ ಜಾತಿ ವಿಭಜನೆಯನ್ನು ಅವರ ಅಕಿಲ್ಸ್ ಹೀಲ್ ಎಂದು ಉಲ್ಲೇಖಿಸಿದ ತ್ಯಾಗಿ,, ಸನಾತನ ಧರ್ಮದಲ್ಲಿ ನಂಬಿಕೆಯುಳ್ಳವರು ಒಂದಾಗದ ಹೊರತು "ಇಸ್ಲಾಮಿಕ್ ಜಿಹಾದ್" ಅಥವಾ ಭಯೋತ್ಪಾದನೆ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಸನಾತನ ಧರ್ಮದಲ್ಲಿ ನಂಬಿಕೆಯುಳ್ಳವರು ಒಗ್ಗಟ್ಟಿನಿಂದ ಇದ್ದಿದ್ದರೆ, ಅವರನ್ನು ಸಾವಿರ ವರ್ಷಗಳ ಕಾಲ ವಿದೇಶಿ ಆಕ್ರಮಣಕಾರರು ಆಳುತ್ತಿರಲಿಲ್ಲ. ಭಾರತದ ಹೆಣ್ಣು ಮಕ್ಕಳನ್ನು ಅಫ್ಘಾನಿಸ್ತಾನಕ್ಕೆ ಕರೆದೊಯ್ದು ದುಖ್ತರನ್-ಎ-ಹಿಂದ್ ಎಂಬ ಚೌಕದಲ್ಲಿ ಸರಕುಗಳಂತೆ ಮಾರಲಾಯಿತು. ಆದರೆ ಹಿಂದೂಗಳ ನಡುವಿನ ವಿಭಜನೆಯು ಈ ದೌರ್ಜನ್ಯದ ವಿರುದ್ಧ ಮಾತನಾಡಲು ಬಿಡಲಿಲ್ಲ. ಜಾತ್ಯತೀತತೆ ಎಂದರೆ ದೌರ್ಜನ್ಯಗಳನ್ನು ಮೌನವಾಗಿ ಎದುರಿಸುವುದಲ್ಲ ಎಂದು ತ್ಯಾಗಿ ಹೇಳಿದ್ದಾರೆ.

ನನ್ನ ಜೀವನ ಪುಸ್ತಕ ಬರೆದಿದ್ದೇನೆ
ಇದೇ ವೇಳೆ ನಾನು ಖಿನ್ನತೆಯಲ್ಲಿದ್ದು, ನನ್ನ ಜೀವನದ ಬಗ್ಗೆ ಯಾವುದೇ ಖಚಿತತೆ ಇಲ್ಲ. ನನ್ನ ಜೀವನದಲ್ಲಿ ಗಳಿಸಿದ ಮತ್ತು ಕಳೆದುಕೊಂಡದ್ದರ ಕುರಿತು ಸಂಕ್ಷಿಪ್ತವಾಗಿ ಪುಸ್ತಕವನ್ನು ಬರೆದಿದ್ದೇನೆ. ಬಹುಶಃ ನನ್ನ ಸಾವಿನ ನಂತರ ಅದು ಪ್ರಕಟವಾಗಬಹುದು ಎಂದು ತ್ಯಾಗಿ ಹೇಳಿದ್ದಾರೆ.

ಏನಿದು ಪ್ರಕರಣ?
ಕಳೆದ ವರ್ಷ ಡಿಸೆಂಬರ್ ನಲ್ಲಿ ಧರ್ಮ ಸಂಸದ್ ನಡೆದಿತ್ತು. ಇದೇ ಹರಿದ್ವಾರ ಧರ್ಮ ಸಂಸದ್‌ನಲ್ಲಿ ಇಸ್ಲಾಂ ಧರ್ಮ ಮತ್ತು ಅದರ ಆಚರಣೆಗಳ ವಿರುದ್ಧ ಹೆಚ್ಚು ಪ್ರಚೋದನಕಾರಿ ಭಾಷಣಗಳನ್ನು ಮಾಡಲಾಗಿದೆ ಎಂದು ಆರೋಪಿಸಿ ಈ ವರ್ಷದ ಜನವರಿಯಲ್ಲಿ ತ್ಯಾಗಿ ಅವರನ್ನು ಬಂಧಿಸಲಾಗಿತ್ತು.  ಗಾಜಿಯಾಬಾದ್ ಬಳಿಯ ದಾಸ್ನಾ ದೇವಸ್ಥಾನದ ವಿವಾದಿತ ಅರ್ಚಕ ಯತಿ ನರಸಿಂಹಾನಂದ ಸೇರಿದಂತೆ 10ಕ್ಕೂ ಹೆಚ್ಚು ಆರೋಪಿಗಳಲ್ಲಿ ತ್ಯಾಗಿ ಹೆಸರೂ ಕೂಡ ಸೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com