ಮುಂಬೈ: ಮಹಾರಾಷ್ಟ್ರದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ 19 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ 14 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಇನ್ನು ಮತ್ತೊಂದು ಘಟನೆಯಲ್ಲಿ ಶಿವಸೇನೆಯ ಎರಡು ಬಣಗಳು ಕೈ-ಕೈ ಮಿಲಾಯಿಸುವ ಹಂತದ ಸಂಘರ್ಷಕ್ಕೆ ಇಳಿದಿದ್ದವು. ಆ.31 ರಂದು ಪ್ರಾರಂಭವಾದ ಗಣೇಶ ಹಬ್ಬದ ಉತ್ಸವ ಸೆ.09 ರಂದು ಅಂತ್ಯಗೊಂಡಿತು. ವಾರ್ಧ ಜಿಲ್ಲೆಯಲ್ಲಿ ಮೂವರು ಸಾವಂಗಿಯಲ್ಲಿ ಮುಳುಗಿ ಸಾವನ್ನಪ್ಪಿದರೆ, ಮತ್ತೋರ್ವ ದೇವ್ಲಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಯಾವತ್ಮಲ್ ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳು ಮುಳುಗಿದರೆ, ವಿಸರ್ಜನೆ ವೇಳೆ ಆರತಿ ಮಾಡುತ್ತಿದ್ದಾಗ ಪೆಂಡಾಲ್ ಮೇಲೆ ಬೃಹತ್ ಮರ ಬಿದ್ದು, ಅವಘಡ ನಡೆದಿರುವ ಬಗ್ಗೆಯೂ ವರದಿಯಾಗಿದೆ. ಘಟನೆಯಲ್ಲಿ ರಾಜಶ್ರೀ ಎಂಬ ಮಹಿಳೆಗೆ ತೀವ್ರವಾಗಿ ಗಾಯಗೊಂಡಿದೆ.
ಇನ್ನು ಅಹ್ಮದ್ ನಗರ ಜಿಲ್ಲೆಯಲ್ಲಿ ಉದ್ಧವ್ ಠಾಕ್ರೆ ಹಾಗೂ ಏಕನಾಥ್ ಶಿಂಧೆ ಬಣದ ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿದ್ದು, ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಮೇಯರ್ಸ್ ಬಂಗಲೆಯ ಬಳಿ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿದ್ದು ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿತ್ತು.
Advertisement