ಭೋಪಾಲ್: ಮಧ್ಯಪ್ರದೇಶದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಬುಲ್ಡೋಜರ್ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ. ಕಟ್ನಿಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿ ಆಂಬ್ಯುಲೆನ್ಸ್ ಗಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಕಾದಿದ್ದರು. ಆದರೆ ಗಾಯಾಳುಗೆ ಹೆಚ್ಚು ರಕ್ತ ಸ್ರಾವವಾಗುತ್ತಿದ್ದರಿಂದ ಕೊನೆಗೆ ಆತನ ಜೀವ ಉಳಿಸಲು ಬುಲ್ಡೋಜರ್ ನಲ್ಲಿ ಸಾಗಿಸಲಾಯಿತು.
ಸಮೀಪದ ಗೈರ್ತಲೈ ನಿವಾಸಿ ಮಹೇಶ್ ಬರ್ಮನ್ ಅವರ ಬೈಕ್ ಮತ್ತೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ. 30 ನಿಮಿಷ ಕಳೆದರೂ ಆಂಬ್ಯುಲೆನ್ಸ್ ಬರದಿದ್ದಾಗ ಬುಲ್ಡೋಜರ್ ಓಡಿಸಿದ ಪುಷ್ಪೇಂದ್ರ ವಿಶ್ವಕರ್ಮ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು. ಪುಷ್ಪೇಂದ್ರ ವಿಶ್ವಕರ್ಮ ಅವರ ಅಂಗಡಿಯ ಹೊರಗೆ ಅಪಘಾತ ಸಂಭವಿಸಿತ್ತು. ಬುಲ್ಡೋಜರ್ನಲ್ಲಿ ವ್ಯಕ್ತಿಯನ್ನು ಹೊತ್ತೊಯ್ಯುತ್ತಿರುವ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದೆ.
ಅಪಘಾತದಲ್ಲಿ ಬರ್ಮನ್ ಅವರ ಕಾಲು ಮುರಿದಿದ್ದು, ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಇಂತಹ ಪ್ರಕರಣಗಳು ಸರ್ವೇಸಾಮಾನ್ಯವಾಗಿವೆ.
ರಾಜ್ಯದ ವಿವಿಧ ಭಾಗಗಳಿಂದ ರೋಗಿಗಳನ್ನು ತಳ್ಳುವ ಗಾಡಿಗಳು, ಸೈಕಲ್ಗಳಲ್ಲಿ ಮತ್ತು ಜನರು ದೈಹಿಕವಾಗಿ ಸಾಗಿಸುವ ಮೂಲಕ ಆಸ್ಪತ್ರೆಗೆ ಕರೆದೊಯ್ಯುವ ವಿಡಿಯೋಗಳು ಇತ್ತೀಚಿಗೆ ವೈರಲ್ ಆಗಿದ್ದವು. ಕಳೆದ ತಿಂಗಳು ದಮೋಹ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಗರ್ಭಿಣಿ ಪತ್ನಿಯನ್ನು ತಳ್ಳುವ ಗಾಡಿಯಲ್ಲಿ ಆಸ್ಪತ್ರೆಗೆ ಸಾಗಿಸುತ್ತಿರುವ ವೀಡಿಯೊ ವೈರಲ್ ಆಗಿತ್ತು.
Advertisement