ಉತ್ತರ ಪ್ರದೇಶದ ವಿಧಾನಸಭೆ ಕಡೆಗೆ ಸಮಾಜವಾದಿ ಪಕ್ಷದ ಪಾದಯಾತ್ರೆ, ಮಧ್ಯದಲ್ಲೇ ತಡೆದ ಪೊಲೀಸರು

ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನಕ್ಕೂ ಮುನ್ನ ಉತ್ತರ ಪ್ರದೇಶದ ಸಮಸ್ಯೆಗಳನ್ನು ಎತ್ತಿ ಹಿಡಿದು ಸಮಾಜವಾದಿ ಪಕ್ಷ ನಡೆಸುತ್ತಿದ್ದ ಪ್ರತಿಭಟನಾ ಮೆರವಣಿಗೆಯನ್ನು ಪೊಲೀಸರು ಸೋಮವಾರ ತಡೆದರು.
ಉತ್ತರ ಪ್ರದೇಶದ ವಿಧಾನಸಭೆಗೆ ತೆರಳುತ್ತಿದ್ದ ಪ್ರತಿಭಟನಾ ಮೆರವಣಿಗೆಯನ್ನು ತಡೆದ ಬಳಿಕ ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಇತರರು ಧರಣಿ ನಡೆಸಿದರು.
ಉತ್ತರ ಪ್ರದೇಶದ ವಿಧಾನಸಭೆಗೆ ತೆರಳುತ್ತಿದ್ದ ಪ್ರತಿಭಟನಾ ಮೆರವಣಿಗೆಯನ್ನು ತಡೆದ ಬಳಿಕ ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಇತರರು ಧರಣಿ ನಡೆಸಿದರು.

ಲಖನೌ: ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನಕ್ಕೂ ಮುನ್ನ ಉತ್ತರ ಪ್ರದೇಶದ ಸಮಸ್ಯೆಗಳನ್ನು ಎತ್ತಿ ಹಿಡಿದು ಸಮಾಜವಾದಿ ಪಕ್ಷ ನಡೆಸುತ್ತಿದ್ದ ಪ್ರತಿಭಟನಾ ಮೆರವಣಿಗೆಯನ್ನು ಪೊಲೀಸರು ಸೋಮವಾರ ತಡೆದರು.

ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಶಾಸಕರು ಮತ್ತು ಪಕ್ಷದ ಇತರ ಕಾರ್ಯಕರ್ತರು ವಿಕ್ರಮಾದಿತ್ಯ ಮಾರ್ಗದಲ್ಲಿರುವ ಪಕ್ಷದ ಕಚೇರಿಯಿಂದ ಉತ್ತರ ಪ್ರದೇಶ ವಿಧಾನ ಭವನದತ್ತ ತೆರಳಲು ಪ್ರಾರಂಭಿಸುತ್ತಿದ್ದಂತೆ, ಪೊಲೀಸರು ವಿಕ್ರಮಾದಿತ್ಯ ಮಾರ್ಗದ ಕ್ರಾಸಿಂಗ್ ಬಳಿಯೇ ಅವರನ್ನು ತಡೆದಿದ್ದಾರೆ.

ಪೊಲೀಸರ ಈ ಕ್ರಮವನ್ನು ಖಂಡಿಸಿ ಯಾದವ್ ಮತ್ತು ಇತರ ಪಕ್ಷದ ಮುಖಂಡರು ಅಲ್ಲಿಯೇ ಧರಣಿ ಕುಳಿತರು.

ಪ್ರತಿಭಟನಾ ಮೆರವಣಿಗೆಯಲ್ಲಿ ಪಕ್ಷದ ಶಾಸಕರು ಮತ್ತು ಎಂಎಲ್‌ಸಿಗಳು ನಿರುದ್ಯೋಗ, ಬೆಲೆ ಏರಿಕೆ, ಮಹಿಳೆಯರ ಮೇಲಿನ ಅಪರಾಧ ಮತ್ತು ರಾಜ್ಯದಲ್ಲಿನ ಕಳಪೆ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳನ್ನು ಪ್ರಸ್ತಾಪಿಸಲಿದ್ದಾರೆ ಎಂದು ಎಸ್‌ಪಿಯ ಮುಖ್ಯ ವಕ್ತಾರ ರಾಜೇಂದ್ರ ಚೌಧರಿ ಭಾನುವಾರ ಇಲ್ಲಿ ತಿಳಿಸಿದ್ದರು.

ವಿಕ್ರಮಾದಿದ್ಯ ಮಾರ್ಗ್‌ನ ಕ್ರಾಸಿಂಗ್ ಬಳಿ ಎಸ್‌ಪಿ ನಾಯಕರನ್ನು ತಡೆಯಲಾಗಿದೆ. ಈ ಸಂಬಂಧ ಈವರೆಗೆ ಯಾರನ್ನೂ ಬಂಧಿಸಿಲ್ಲ. ತಮ್ಮ ಮೆರವಣಿಗೆಯನ್ನು ಕೈಗೊಳ್ಳಲು ಪಕ್ಷಕ್ಕೆ ಒಂದು ಮಾರ್ಗವನ್ನು ಸೂಚಿಸಲಾಗಿತ್ತು. ಆದರೆ, ಅವರು ಆ ಮಾರ್ಗವನ್ನು ಆರಿಸಿಕೊಳ್ಳದೆ ಬೇರೆ ಮಾರ್ಗದಲ್ಲಿ ತೆರಳಲು ಮುಂದಾದರು. ಹೀಗಾಗಿ ಅವರನ್ನು ಅಲ್ಲಿಯೇ ತಡೆಯಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆಯ ಜಂಟಿ ಪೊಲೀಸ್ ಆಯುಕ್ತ ಪಿಯೂಷ್ ಮೊರ್ಡಿಯಾ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗದಂತೆ ನೋಡಿಕೊಳ್ಳಲು ಪಕ್ಷದ ಕಾರ್ಯಕರ್ತರನ್ನು ನಿಲ್ಲಿಸಲಾಗಿದೆ ಎಂದು ಮೊರ್ಡಿಯಾ ಹೇಳಿದರು.

ಪ್ರತಿಭಟನಾ ಮೆರವಣಿಗೆ ಹಿನ್ನೆಲಯೆಲ್ಲಿ ವಿಕ್ರಮಾದಿತ್ಯ ಮಾರ್ಗದಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದು, ಸಾರ್ವಜನಿಕರಿಗೆ ರಸ್ತೆ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ.

ಬೆಳಗ್ಗೆ 10 ಗಂಟೆಗೆ ಪಕ್ಷದ ಕಚೇರಿಗೆ ಆಗಮಿಸಿದ ಎಸ್‌ಪಿ ಮುಖ್ಯಸ್ಥರು, ಇತರ ಶಾಸಕರು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ವಿಧಾನ ಭವನದತ್ತ ಪಾದಯಾತ್ರೆ ಆರಂಭಿಸಿದರು.

ಪಕ್ಷದ ಮುಖ್ಯಸ್ಥನನ್ನು ಪೊಲೀಸರು ತಡೆದ ಬಳಿಕ ಹಣದುಬ್ಬರ, ನಿರುದ್ಯೋಗ ಮತ್ತು ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆಯ ಪರಿಸ್ಥಿತಿಯ ವಿರುದ್ಧ ವಿಧಾನಸಭೆಯಲ್ಲಿ ನಡೆಸಬೇಕಿದ್ದ ಪಕ್ಷದ ಯೋಜಿತ ಪ್ರತಿಭಟನೆಯು ಸೆಪ್ಟೆಂಬರ್ 14 ರಂದು ಪ್ರಾರಂಭವಾಗಿರಲಿಲ್ಲ.

ನಿಗದಿತ ಪ್ರತಿಭಟನೆಗೆ ಗಂಟೆಗಳ ಮೊದಲು ಲಖನೌನಲ್ಲಿನ ಎಸ್‌ಪಿ ಕಚೇರಿ ಮತ್ತು ಅದರ ಮುಖಂಡರ ನಿವಾಸಗಳ ಹೊರಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಹಜರತ್‌ಗಂಜ್‌ನ ವಿಧಾನಸಭೆಯ ಬಳಿಯೂ ಭಾರಿ ಪೊಲೀಸ್ ಬಂದೋಬಸ್ತ್ ಕಂಡುಬಂದಿತ್ತು.

ವಿಧಾನಸಭೆ ಆವರಣದಲ್ಲಿರುವ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಪ್ರತಿಮೆ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com