ವಡೋದರಾ: ಪಂಜಾಬ್ ಬಳಿಕ ಗುಜರಾತ್ ಮೇಲೆ ಕಣ್ಣಿಟ್ಟಿರುವ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಗುಜರಾತ್ನ ವಡೋದರಾ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಮೋದಿ-ಮೋದಿ ಘೋಷಣೆಗಳನ್ನು ಎದುರಿಸಬೇಕಾಯಿತು. ಆನಂತರ ಕೇಜ್ರಿವಾಲ್-ಕೇಜ್ರಿವಾಲ್ ಎಂಬ ಘೋಷಣೆಗಳೂ ಕೇಳಿಬಂದವು.
ಕೇಜ್ರಿವಾಲ್ ಅವರು ಗುಜರಾತ್ ರಾಜ್ಯಕ್ಕೆ ಒಂದು ದಿನದ ಭೇಟಿಯಲ್ಲಿದ್ದಾರೆ. ಅಲ್ಲಿ ಅವರು ವಡೋದರಾದಲ್ಲಿ ಟೌನ್ ಹಾಲ್ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೇಜ್ರಿವಾಲ್ ತಮ್ಮ ರಾಜಕೀಯ ಎದುರಾಳಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನ ಘೋಷಣೆಗಳನ್ನು ಎದುರಿಸುತ್ತಿದ್ದಾಗ ನಕ್ಕವರಂತೆ ಕಂಡರು. ಏರ್ ಪೋರ್ಟ್ ನಲ್ಲಿ ಮಾತನಾಡದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುವುದಾಗಿ ತಿಳಿಸಿದರು.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿಯ ಪ್ರೀತಿ ಗಾಂಧಿ, ಅರವಿಂದ್ ಕೇಜ್ರಿವಾಲ್ ಅವರಿಗೆ ಮೋದಿಯವರ ಗುಜರಾತ್ನಲ್ಲಿ ಆತ್ಮೀಯ ಸ್ವಾಗತ!! ಎಂದು ಟ್ವೀಟ್ ಮಾಡಿದ್ದಾರೆ.
ಹಿಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷ ತನ್ನ ಖಾತೆ ತೆರೆಯಲು ಸಾಧ್ಯವಾಗದ ಗುಜರಾತ್ಗೆ ಎಎಪಿ ಅಡಿ ಇಡಲು ಮುಂದಾಗಿದೆ. ಪಂಜಾಬ್ನಲ್ಲಿ ಭಾರಿ ಗೆಲುವಿನ ನಂತರ ಪಕ್ಷವು ದೇಶದ ಇತರ ಭಾಗಗಳಿಗೆ ವಿಸ್ತರಿಸಲು ನೋಡುತ್ತಿದೆ.
Advertisement