ರಿಸಪ್ಷನಿಸ್ಟ್ ಹತ್ಯೆ: ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಬರುವವರೆಗೂ ಅಂತ್ಯಕ್ರಿಯೆ ನಡೆಸಲು ನಿರಾಕರಿಸಿದ ಕುಟುಂಬ

ರೆಸಾರ್ಟ್ ನಲ್ಲಿ  ರಿಸೆಪ್ಷನಿಸ್ಟ್ ಆಗಿದ್ದ 19 ವರ್ಷದ ಅಂಕಿತಾ ಭಂಡಾರಿ ಹತ್ಯೆ ಪ್ರಕರಣದ ಪ್ರಮುಖ ಬೆಳವಣಿಗೆಯೊಂದರಲ್ಲಿ, ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಲಭ್ಯವಾಗುವವರೆಗೂ ಅಂತ್ಯಕ್ರಿಯೆ ಮಾಡಲು ಮೃತಳ ಕುಟುಂಬ ನಿರಾಕರಿಸಿದೆ.
ಪುಲ್ಕಿತ್ ಆರ್ಯ ಒಡೆತನದ ರೆಸಾರ್ಟ್‌ಗೆ ಬೆಂಕಿ ಹಚ್ಚಿದ ಸ್ಥಳೀಯರು
ಪುಲ್ಕಿತ್ ಆರ್ಯ ಒಡೆತನದ ರೆಸಾರ್ಟ್‌ಗೆ ಬೆಂಕಿ ಹಚ್ಚಿದ ಸ್ಥಳೀಯರು

ಡೆಹ್ರಾಡೂನ್: ರೆಸಾರ್ಟ್ ನಲ್ಲಿ  ರಿಸೆಪ್ಷನಿಸ್ಟ್ ಆಗಿದ್ದ 19 ವರ್ಷದ ಅಂಕಿತಾ ಭಂಡಾರಿ ಹತ್ಯೆ ಪ್ರಕರಣದ ಪ್ರಮುಖ ಬೆಳವಣಿಗೆಯೊಂದರಲ್ಲಿ, ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಲಭ್ಯವಾಗುವವರೆಗೂ ಅಂತ್ಯಕ್ರಿಯೆ ಮಾಡಲು ಮೃತಳ ಕುಟುಂಬ ನಿರಾಕರಿಸಿದೆ. ಮತ್ತೊಂದೆಡೆ, ಅಂಕಿತಾ ಅವರ ಕುಟುಂಬವನ್ನು ಮನವೊಲಿಸಲು ಪ್ರಯತ್ನಿಸಲಾಯಿತು.

ಮರಣೋತ್ತರ ಪರೀಕ್ಷೆಯ ವರದಿ ಬರುವವರೆಗೆ ನಾವು ಆಕೆಯ ಅಂತ್ಯಕ್ರಿಯೆ ನಡೆಸುವುದಿಲ್ಲ. ತಾತ್ಕಾಲಿಕ ವರದಿಯಲ್ಲಿ ಆಕೆಯನ್ನು ಹೊಡೆದು ನದಿಗೆ ಎಸೆಯಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಅಂತಿಮ ವರದಿಗಾಗಿ ಕಾಯುತ್ತಿದ್ದೇವೆ ಎಂದು ಅಂಕಿತಾ ಭಂಡಾರಿ ಸಹೋದರ ಅಜಯ್ ಸಿಂಗ್ ಭಂಡಾರಿ ಹೇಳಿದ್ದಾರೆ.

ಹತ್ಯೆ ಪ್ರಕರಣದ ಎಸ್‌ಐಟಿ ಉಸ್ತುವಾರಿ ಡಿಐಜಿ ಪಿಆರ್ ದೇವಿ, ಅಂಕಿತಾ ಭಂಡಾರಿಯ ವಾಟ್ಸಾಪ್ ಚಾಟ್‌ಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಐಟಿ ಭಾನುವಾರ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದೆ.

ವರದಿಗಳ ಪ್ರಕಾರ, ತನಿಖೆಯಲ್ಲಿ ವಾಟ್ಸಾಪ್ ಚಾಟ್‌ ಬೆಳಕಿಗೆ ಬಂದಿದೆ. ಈ ಚಾಟ್‌ನಲ್ಲಿ, ಅತಿಥಿಗಳಿಗೆ 'ಹೆಚ್ಚುವರಿ ಸೇವೆ' ನೀಡುವಂತೆ ರೆಸಾರ್ಟ್‌ನ ಮಾಲೀಕರು ಒತ್ತಡ ಹೇರುತ್ತಿದ್ದಾರೆ ಎಂದು ಅಂಕಿತಾ ತನ್ನ ಸ್ನೇಹಿತರೊಬ್ಬರಿಗೆ ಹೇಳಿದ್ದಾರೆ. ರಿಸೆಪ್ಷನಿಸ್ಟ್ ಹತ್ಯೆಯ ನಂತರ ಜನರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಅಂಕಿತಾ ಭಂಡಾರಿ ಸೆಪ್ಟೆಂಬರ್ 17 ರಂದು ಅಳುತ್ತಾ ತನಗೆ ಕರೆ ಮಾಡಿ, ತನ್ನ ಬ್ಯಾಗ್‌ಗಳನ್ನು ರೆಸಾರ್ಟ್‌ನಿಂದ ಹೊರತೆಗೆದುಕೊಂಡು ಬರುವಂತೆ ಕೇಳಿದ್ದಳು. ಅಂಕಿತಾ ಅವರನ್ನು ಇತರ ಮೂರು ಜನರೊಂದಿಗೆ ಮಧ್ಯಾಹ್ನ 3 ಗಂಟೆಗೆ ನೋಡಿದ್ದೆ. ಆದರೆ, ಅಂಕಿತಾ ಹೊರತುಪಡಿಸಿ ಉಳಿದವರು ಮಾತ್ರ ಹಿಂತಿರುಗಿದರು ಎಂದು ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ಅವರ ಸಹೋದರ ಅಂಕಿತ್ ಆರ್ಯ ಅವರು ಸೆಪ್ಟೆಂಬರ್ 18 ರಂದು ಬೆಳಿಗ್ಗೆ 8 ಗಂಟೆಗೆ ಬಂದು ನಾಲ್ಕು ಜನರಿಗೆ ರಾತ್ರಿಯ ಊಟ ತಯಾರಿಸುವ ಬಗ್ಗೆ ಮಾತನಾಡಿದ್ದರು ಮತ್ತು ಅಂಕಿತಾ ಅವರ ಕೋಣೆಯಲ್ಲಿ ಊಟ ಮಾಡುವುದಾಗಿ ಹೇಳಿದರು. ಅಂಕಿತಾ ಹಿಂತಿರುಗದ ಕಾರಣ ಸಿಬ್ಬಂದಿಯನ್ನು ತಪ್ಪುದಾರಿಗೆ ಎಳೆಯಲು ಅಂಕಿತ್ ಬಯಸಿದ್ದರು ಎಂದು ಎಂದು ರೆಸಾರ್ಟ್ ಸಹಾಯಕ ಆರೋಪಿಸಿದ್ದಾರೆ.

ಶನಿವಾರ ಮುಂಜಾನೆ, ಅಂಕಿತಾ ಭಂಡಾರಿ ಹತ್ಯೆ ಪ್ರಕರಣದ ಆರೋಪಿಯಾಗಿರುವ ಬಿಜೆಪಿಯ ಉಚ್ಚಾಟಿತ ನಾಯಕ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯ ಒಡೆತನದ ರಿಷಿಕೇಶದಲ್ಲಿರುವ ವನತಾರಾ ರೆಸಾರ್ಟ್‌ಗೆ ಸ್ಥಳೀಯರು ಬೆಂಕಿ ಹಚ್ಚಿದ್ದರು.

19 ವರ್ಷದ ಅಂಕಿತಾ ಭಂಡಾರಿ ಅವರು ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಅದಾದ ಬಳಿಕ ಶನಿವಾರ ರಿಷಿಕೇಶದ ಚಿಲ್ಲಾ ಕಾಲುವೆಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.

ಜಗಳದ ನಂತರ ಅಂಕಿತಾಳನ್ನು ಕಾಲುವೆಗೆ ತಳ್ಳಿದ್ದಾಗಿ ತಪ್ಪೊಪ್ಪಿಕೊಂಡ ನಂತರ ಪುಲ್ಕಿತ್ ಆರ್ಯ ಸೇರಿದಂತೆ ಮೂವರನ್ನು ಶುಕ್ರವಾರ ಬಂಧಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com