ಗುವಾಹಟಿ: ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಮನೆಗೆ ಊಟ ಹಾಗೂ ಚಹಾ ಸೇವನೆಗೆ ಆಹ್ವಾನಿಸಿದ್ದಾರೆ. ಶರ್ಮಾ ಅವರ ಹೇಳಿಕೆ ಮುಖ್ಯಮಂತ್ರಿ ಸ್ಥಾನಕ್ಕೆ ಶೋಭೆ ತರವಂತಹದ್ದಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ತಮ್ಮ ಭ್ರಷ್ಟಾಚಾರ ಪ್ರಕರಣಗಳನ್ನು ಆಮ್ ಆದ್ಮಿ ಪಕ್ಷದ ನಾಯಕರು ವಿಧಾನಸಭೆಯ ಹೊರಗೆ ಆರೋಪಿಸಿದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಶರ್ಮಾ ಶುಕ್ರವಾರ ಬೆದರಿಕೆ ಹಾಕಿದ್ದರು. ಕೇಜ್ರಿವಾಲ್ ಇಲ್ಲಿಗೆ ಬಂದು ನಾನು ಭ್ರಷ್ಟಾಚಾರಿ ಎಂದು ಆರೋಪಿಸಿದರೆ, ಮಾರನೇ ದಿನವೇ ಮನೀಶ್ ಸಿಸೋಡಿಯಾ ವಿರುದ್ಧ ಮಾಡಿರುವಂತೆಯೇ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಅವರು ಹೇಳಿದ್ದರು. ಶರ್ಮಾ ಅವರ ವಿರುದ್ಧ ಅನೇಕ ಕೇಸ್ ಗಳಿರುವುದಾಗಿ ದೆಹಲಿ ವಿಧಾನಸಭೆಯಲ್ಲಿ ಕೇಜ್ರಿವಾಲ್ ಹೇಳಿರುವ ಬಗ್ಗ ವರದಿಯಾಗಿತ್ತು.
ಶರ್ಮಾ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, ಅಸ್ಸಾಂ ಜನರು ತುಂಬಾ ಒಳ್ಳೆಯವರು. ಅತಿಥಿಗಳನ್ನು ಅವರು ಸ್ವಾಗತಿಸುತ್ತಾರೆ. ಅವರಿಂದ ಹಿಮಾಂತ ಬಿಸ್ವಾ ಶರ್ಮಾ ಕಲಿಯಬೇಕು ಎಂದರು. ಶರ್ಮಾರನ್ನು ದೆಹಲಿಗೆ ಆಹ್ನಾನಿಸುತ್ತೇನೆ.ಅವರೊಂದಿಗೆ ನನ್ನ ಮನೆಯಲ್ಲಿ ಚಹಾ, ಊಟ ಮಾಡುತ್ತೇನೆ. ಅವರೊಂದಿಗೆ ದೆಹಲಿಯಾದ್ಯಂತ ಸುತ್ತಾಡುತ್ತೇನೆ ಎಂದು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ನಂತರ ವೇದಿಕೆಯಲ್ಲಿ ಮಾತನಾಡಿದ ಕೇಜ್ರಿವಾಲ್, ಎಎಪಿ ಗೆದ್ದರೆ ಅಸ್ಸಾಂನ ಪ್ರತಿ ಮಕ್ಕಳಿಗೆ ಉದ್ಯೋಗ ಸಿಗಲಿದೆ. ಸಿಎಂ ಪತ್ನಿ ಖಾಸಗಿ ಶಾಲೆ ನಡೆಸುವ ರಾಜ್ಯದಲ್ಲಿ ಬಡವರಿಗೆ ಎಂದಿಗೂ ಶಿಕ್ಷಣ ಸಿಗುವುದಿಲ್ಲ. ನನ್ನನ್ನು ಜೈಲಿಗೆ ಹಾಕುವುದಾಗಿ ಹಿಮಂತ ಬಿಸ್ವಾ ಶರ್ಮಾ ಬೆದರಿಕೆ ಹಾಕುತ್ತಿದ್ದಾರೆ. ಅವರು ಸಿಎಂ ಆದರೂ ಅಸ್ಸಾಂ ಸಂಸ್ಕೃತಿ ಕಲಿತಿಲ್ಲ. ಅಸ್ಸಾಂನ ಜನರು ಹಾಗಲ್ಲ, ಅವರು ತಮ್ಮ ಅತಿಥಿಗೆ ಚಹಾ ನೀಡುತ್ತಾರೆ, ಜೈಲಿಗೆ ಕಳುಹಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
Advertisement