
ಸಾಂದರ್ಭಿಕ ಚಿತ್ರ
ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಯುವತಿಯ ಅತ್ಯಾಚಾರ, ಹತ್ಯೆ ಪ್ರಕರಣದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಪಶ್ಚಿಮ ಬಂಗಾಳದ ದಿನಾಜ್ಪುರ ಜಿಲ್ಲೆಯಲ್ಲಿ ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 20 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.
17 ವರ್ಷದ ಯುವತಿಯ ದೇಹ ಕಾಲಿಯಗಂಜ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಪತ್ತೆಯಾಗಿತ್ತು, ಆರೋಪಿ ಯುವತಿಗೆ ಪರಿಚಯವಿದ್ದ ವ್ಯಕ್ತಿಯಾಗಿದ್ದಾನೆ, ಆತನ ಗುರುತು ಪತ್ತೆಯಾಗಿದೆ ಎಂದು ಎಸ್ ಪಿ ಮೊಹಮ್ಮದ್ ಸನಾ ಅಖ್ತರ್ ಹೇಳಿದ್ದಾರೆ. ಸಂತ್ರಸ್ತೆಯ ತಾಯಿಯ ದೂರಿನ ಅನ್ವಯ ಐಪಿಸಿ ಸೆಕ್ಷನ್ 302 (ಹತ್ಯೆ), ಪೋಸ್ಕೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ದೇಹಕ್ಕೆ ಯಾವುದೇ ಗಾಯವಾಗಿಲ್ಲ ಎಂದು ಬಹಿರಂಗಪಡಿಸಿದ ಅಖ್ತರ್, ದೇಹದ ಬಳಿ ವಿಷದ ಬಾಟಲಿ ಕಂಡುಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಬಾಂಗ್ಲಾದೇಶದ ಗಡಿಯಿಂದ ಸುಮಾರು 18 ಕಿಮೀ ಮತ್ತು ಕೋಲ್ಕತ್ತಾದ ಉತ್ತರಕ್ಕೆ 430 ಕಿಮೀ ದೂರದಲ್ಲಿರುವ ಕಲಿಯಗಂಜ್ನಲ್ಲಿ ಈ ಹಿಂಸಾಚಾರ ಸಂಭವಿಸಿದೆ, ಘಟನೆಯ ವಿರುದ್ಧ ಸ್ಥಳೀಯರು ಪ್ರತಿಭಟಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಅಶ್ರುವಾಯು ಶೆಲ್ಗಳನ್ನು ಮತ್ತು ಲಾಠಿ ಚಾರ್ಜ್ ಮಾಡಿದ್ದಾರೆ.
ಘಟನೆಯ ಹಿಂದಿರುವವರನ್ನು ಬಂಧಿಸುವಂತೆ ಒತ್ತಾಯಿಸಿದ ಗುಂಪು ಹಲವಾರು ಅಂಗಡಿಗಳು ಮತ್ತು ಇ-ರಿಕ್ಷಾಗಳಿಗೆ ಬೆಂಕಿ ಹಚ್ಚಿದೆ. ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ. ಪ್ರತಿಭಟನೆಯನ್ನು ನಿಯಂತ್ರಿಸಲು ರಸ್ತೆಗಳನ್ನು ನಿರ್ಬಂಧಿಸಲಾಗಿದೆ.
ಆರ್ಎಸ್ಎಸ್ ಬೆಂಬಲಿತ ಎಬಿವಿಪಿ ಕಾಲಿಯಾಗಂಜ್ ಪೊಲೀಸ್ ಠಾಣೆಯನ್ನು ಘೇರಾವ್ ಮಾಡಿದರೆ, ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ರಾಯಗಂಜ್ನಲ್ಲಿರುವ ಎಸ್ಪಿ ಕಚೇರಿಯ ಹೊರಗೆ ಸಂತ್ರಸ್ತ ಕುಟುಂಬಕ್ಕೆ ನ್ಯಾಯಕ್ಕಾಗಿ ಒತ್ತಾಯಿಸಿ ಧರಣಿ ಕುಳಿತರು.
ಪರಿಸ್ಥಿತಿಯನ್ನು ಹತೋಟಿಗೆ ತರಲು ರಾಪಿಡ್ ಆಕ್ಷನ್ ಫೋರ್ಸ್ (ಆರ್ಎಎಫ್) ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ಕೆಲವು ಪ್ರತಿಭಟನಾಕಾರರನ್ನು ಸಹ ಬಂಧಿಸಲಾಗಿದೆ.