ಹಣದ ಕೊರತೆ, ನೆರವಿಗೆ ಬಾರದ ಆಸ್ಪತ್ರೆ ಸಿಬ್ಬಂದಿ: ಪತ್ನಿಯ ಮೃತದೇಹವನ್ನು 33 ಕಿ.ಮೀ ಹೊತ್ತು ಸಾಗಿದ ಪತಿ!
ಶವ ಸಾಗಾಟ ವಾಹನದ ವ್ಯವಸ್ಥೆ ಮಾಡಲು ಹಣದ ಕೊರತೆ ಹಿನ್ನೆಲೆಯಲ್ಲಿ ಒಡಿಶಾ ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೃತದೇಹವನ್ನು ಸುಮಾರು 33 ಕಿ.ಮೀ ದೂರ ಭುಜದ ಮೇಲೆ ಹೊತ್ತು ನಡೆದ ಹೃದಯ ವಿದ್ರಾವಕ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
Published: 09th February 2023 12:42 PM | Last Updated: 09th February 2023 12:42 PM | A+A A-

ಪತ್ನಿಯ ಶವ ಹೊತ್ತು ಸಾಗಿದ ಪತಿ
ಭುವನೇಶ್ವರ್: ಶವ ಸಾಗಾಟ ವಾಹನದ ವ್ಯವಸ್ಥೆ ಮಾಡಲು ಹಣದ ಕೊರತೆ ಹಿನ್ನೆಲೆಯಲ್ಲಿ ಒಡಿಶಾ ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೃತದೇಹವನ್ನು ಸುಮಾರು 33 ಕಿ.ಮೀ ದೂರ ಭುಜದ ಮೇಲೆ ಹೊತ್ತು ನಡೆದ ಹೃದಯ ವಿದ್ರಾವಕ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ವರದಿಗಳ ಪ್ರಕಾರ ಒಡಿಶಾದ ಕೊರಪಟ್ ಜಿಲ್ಲೆಯ ಪೊಟ್ಟಾಂಗಿ ಏರಿಯಾದ ನಿವಾಸಿಗಳಾದ ಗುರು ಮತ್ತು ಆತನ ಪತ್ನಿ, ಆಂಧ್ರದ ವಿಶಾಖಪಟ್ಟಣದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಪತ್ನಿಯ ಆರೋಗ್ಯ ಸ್ಥಿತಿ ತುಂಬಾ ಹದಗೆಟ್ಟಿದ್ದರಿಂದ ಕೆಲವು ದಿನಗಳ ಹಿಂದಷ್ಟೇ ಆಕೆಯನ್ನು ಸಾಗರ್ಬಾಲ್ಸಾದಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದಾಗ್ಯೂ ಚಿಕಿತ್ಸೆ ಫಲಿಸದೇ ಗುರು ಪತ್ನಿ ತೀರಿಕೊಂಡಳು.
ಚಿಕಿತ್ಸೆಗೂ ಹಣವಿಲ್ಲದ ವಿಷಮ ಸ್ಥಿತಿಯಲ್ಲಿ ಗುರು, ತನ್ನ ಪತ್ನಿಯ ಅಂತ್ಯಕ್ರಿಯೆಗಾಗಿ, ಆಕೆಯ ಮೃತದೇಹವನ್ನು ಹೇಗಾದರೂ ಊರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿಕೊಡುವಂತೆ ಆಸ್ಪತ್ರೆಯ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದ. ಆದರೆ, ಕಲ್ಲು ಹೃದಯದ ಅಧಿಕಾರಿಗಳು ಗುರುವಿನ ಮನವಿಗೆ ಸ್ಪಂದಿಸಲಿಲ್ಲ. ಯಾವುದೇ ಸಹಾಯವನ್ನು ಮಾಡದೇ ತಮ್ಮ ಪಾಡಿಗೆ ಹೊರಟು ಹೋದರು.
ಕೊನೆಗೆ ಯಾವುದೇ ಆಯ್ಕೆ ಗುರುವಿಗೆ ಉಳಿಯಲಿಲ್ಲ. ಬಳಿಕ ಮೃತದೇಹವನ್ನು ಹೊತ್ತುಕೊಂಡೇ ಸಾಗುವ ನಿರ್ಧಾರಕ್ಕೆ ಬಂದ. ವಿಶಾಖಪಟ್ಟಣದಿಂದ ತನ್ನ ತವರಿಗೆ ಪತ್ನಿಯ ಮೃತದೇಹವನ್ನು ಭುಜದಲ್ಲಿ ಹೊತ್ತು ನಡೆಯುತ್ತಾ ಸಾಗಿದ. ಮಾರ್ಗ ಮಧ್ಯೆ ಅನೇಕರು ಅದನ್ನು ಗಮನಿಸಿದರೂ ಯಾರೊಬ್ಬರು ಕೂಡ ಸಹಾಯಕ್ಕೆ ಧಾವಿಸಲಿಲ್ಲ.