ಕಳೆದ ವರ್ಷ ಡಿಸೆಂಬರ್ನಲ್ಲಿ ಸಿಂಗಾಪುರದಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರು ಶನಿವಾರ ಭಾರತಕ್ಕೆ ಮರಳಲಿದ್ದಾರೆ.
ತನ್ನ ತಂದೆಗೆ ಕಿಡ್ನಿ ದಾನ ಮಾಡಿದ ಲಾಲು ಪುತ್ರಿ ರೋಹಿಣಿ ಆಚಾರ್ಯ ಟ್ವಿಟರ್ನಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಆರ್ಜೆಡಿ ಮುಖ್ಯಸ್ಥರು ಶನಿವಾರ ಭಾರತಕ್ಕೆ ತೆರಳಲಿದ್ದಾರೆ ಎಂದು ಹೇಳಿದ್ದಾರೆ.
"ನಮ್ಮ ಗೌರವಾನ್ವಿತ ನಾಯಕ ಲಾಲು ಜಿ ಅವರ ಆರೋಗ್ಯದ ಬಗ್ಗೆ ನಾನು ಮಹತ್ವದ ಘೋಷಣೆ ಮಾಡುತ್ತಿದ್ದೇನೆ. ನಮ್ಮ ತಂದೆ ಫೆಬ್ರವರಿ 11 ರಂದು ಸಿಂಗಾಪುರದಿಂದ ಭಾರತಕ್ಕೆ ಹೋಗುತ್ತಿದ್ದಾರೆ. ಅವರ ಆರೋಗ್ಯವನ್ನು ಸರಿಪಡಿಸಿದ ನಂತರ ನಾನು ಅವರನ್ನು ನಿಮ್ಮ ಬಳಿಗೆ ಕಳುಹಿಸುತ್ತಿದ್ದೇನೆ. ದಯವಿಟ್ಟು ನನ್ನ ತಂದೆಯನ್ನು ನೋಡಿಕೊಳ್ಳಿ" ಎಂದು ರೋಹಿಣಿ ಟ್ವೀಟ್ ಮಾಡಿದ್ದಾರೆ. ಅಪ್ಪನೊಂದಿಗೆ ಇರುವ ಫೋಟೋವನ್ನೂ ಹಂಚಿಕೊಂಡಿದ್ದಾರೆ.
ಪಾಪಾ ಅವರನ್ನು ನೋಡಿಕೊಳ್ಳಿ ಎಂದು ಲಾಲು ಪ್ರಸಾದ್ ಯಾದವ್ ಅವರ ಅಭಿಮಾನಿಗಳ ಬಳಿ ಮನವಿ ಮಾಡಿರುವ ರೋಹಿಣಿ ಆಚಾರ್ಯ, ಅಪ್ಪನನ್ನು ಭೇಟಿಯಾಗುವಾಗ ಜಾಗರೂಕರಾಗಿರಿ ಎಂದು ಒತ್ತಾಯಿಸಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, “ಪಾಪಾ ಮೇಲಿನ ನಿಮ್ಮ ಪ್ರೀತಿ ಅಪಾರವಾಗಿದೆ. ನನ್ನ ಕಡೆಯಿಂದ ನಾನು ನಿಮ್ಮೆಲ್ಲರಿಗೂ ಹೇಳಲು ಬಯಸುವುದೇನೆಂದರೆ, ನೀವು ಅವರನ್ನು ಭೇಟಿಯಾದಾಗ ದಯವಿಟ್ಟು ಎಚ್ಚರಿಕೆಯಿಂದಿರಿ.
ನೀವು ಭೇಟಿಯಾದಾಗ ಮಾಸ್ಕ್ ಧರಿಸಿ ಮತ್ತು ಅವರ ಆರೋಗ್ಯವನ್ನು ನೋಡಿಕೊಳ್ಳಲು ನಮಗೆ ಸಹಾಯ ಮಾಡಿ. ನನ್ನ ತಂದೆ ಯಾವುದೇ ಸೋಂಕುಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹೆಚ್ಚು ಜನರನ್ನು ಭೇಟಿಯಾಗದಂತೆ ಅವರು ನನ್ನ ತಂದೆಗೆ ಹೇಳಿದ್ದಾರೆ ” ಎಂದು ಹೇಳಿದ್ದಾರೆ.
Advertisement