ನಾಗಪಟ್ಟಣಂ: ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಆರು ಮೀನುಗಾರರ ಮೇಲೆ ಅಪರಿಚಿತ ವ್ಯಕ್ತಿಗಳು ಸಮುದ್ರದ ಮಧ್ಯದಲ್ಲಿ ಪಾಯಿಂಟ್ ಕ್ಯಾಲಿಮೆರೆ ಬಳಿ ದಾಳಿ ನಡೆಸಿ, ದರೋಡೆ ಮಾಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಈ ಘಟನೆ ಸ್ಥಳೀಯ ಮೀನುಗಾರರಲ್ಲಿ ಆತಂಕದ ಅಲೆಯನ್ನುಂಟುಮಾಡಿದೆ.
ಗಾಯಗೊಂಡವರಲ್ಲಿ ಮುರುಗನ್ ಎಂಬಾತನ ಮೂರು ಬೆರಳುಗಳನ್ನು ದಾಳಿಕೋರರು ತುಂಡರಿಸಿದ್ದಾರೆ. ಅವರು ಶ್ರೀಲಂಕಾದಿಂದ ಬಂದವರು ಎಂದು ಗಾಯಗೊಂಡ ಮೀನುಗಾರರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ನಂಬಿಯಾರ್ ನಗರದ ಮೀನುಗಾರರು ಸಮುದ್ರ ಮಧ್ಯದಲ್ಲಿ ಪಾಯಿಂಟ್ ಕ್ಯಾಲಿಮೆರ್ ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ, ನಾಲ್ಕು ದೋಣಿಗಳಲ್ಲಿ ಬಂದ ಕೆಲವು ಅಪರಿಚಿತ ವ್ಯಕ್ತಿಗಳು ಅವರ ಹಡಗನ್ನು ಸುತ್ತುವರೆದು ಅವರ ಮೇಲೆ ದಾಳಿ ನಡೆಸಿದ್ದಾರೆ. ಬುಧವಾರ ರಾತ್ರಿ ದಾಳಿಯಿಂದ ರಕ್ಷಿಸಿಕೊಳ್ಳಲು ಯತ್ನಿಸಿದ ಮುರುಗನ್ ಅವರ ಮೂರು ಬೆರಳುಗಳನ್ನು ದಾಳಿಕೋರರು ಕತ್ತರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದಾಳಿಕೋರರು ಮೀನುಗಾರರ ಬಳಿಯಿಂದ ಜಿಪಿಎಸ್, ಮೊಬೈಲ್ ಫೋನ್, ಮೀನುಗಾರಿಕೆ ಬಲೆಗಳನ್ನು ದೋಚಿದ್ದಾರೆ. ಗಾಯಾಳುಗಳಿಗೆ ಆರಂಭದಲ್ಲಿ ಪುಷ್ಪವನಂ ಬೀಚ್ನಲ್ಲಿ ಚಿಕಿತ್ಸೆ ನೀಡಲಾಯಿತು ಮತ್ತು ನಂತರ ನಾಗಪಟ್ಟಣಂ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ ಶ್ರೀಲಂಕಾದ ಬೋಟ್ ಗಳಿಂದ ಬರುವ ಸಂಚುಕೋರರಿಂದ ಈ ದಾಳಿ ನಡೆದಿರುವುದಾಗಿ ಆರೋಪಿಸಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ, ಈ ವಿಚಾರದಲ್ಲಿ ಮಧ್ಯ ಪ್ರವೇಶಿಸುವಂತೆ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.
Advertisement