ಜಾರ್ಖಂಡ್: ಅಪಾರ್ಟ್ ಮೆಂಟಿನ ಮೇಲ್ಛಾವಣಿಯಿಂದ ಬಾಲಕಿಯನ್ನು ತಳ್ಳಿ ಹತ್ಯೆಗೈದ ನಾಲ್ವರು ಯುವಕರು
ಜಾರ್ಖಂಡ್ ರಾಜ್ಯದ ಧನ್ಬಾದ್ ಜಿಲ್ಲೆಯಲ್ಲಿ ನಾಲ್ವರು ಯುವಕರು 16 ವರ್ಷದ ಬಾಲಕಿಯನ್ನು ನಾಲ್ಕು ಅಂತಸ್ತಿನ ಅಪಾರ್ಟ್ಮೆಂಟ್ನ ಮೇಲ್ಛಾವಣಿಯಿಂದ ಕೆಳಗೆ ತಳ್ಳಿ ಹತ್ಯೆ ಮಾಡಿರುವ ಭಯಾನಕ ಘಟನೆ ನಡೆದಿದೆ.
Published: 16th February 2023 02:36 PM | Last Updated: 16th February 2023 02:53 PM | A+A A-

ಸಾಂದರ್ಭಿಕ ಚಿತ್ರ
ಧನ್ಬಾದ್: ಜಾರ್ಖಂಡ್ ರಾಜ್ಯದ ಧನ್ಬಾದ್ ಜಿಲ್ಲೆಯಲ್ಲಿ ನಾಲ್ವರು ಯುವಕರು 16 ವರ್ಷದ ಬಾಲಕಿಯನ್ನು ನಾಲ್ಕು ಅಂತಸ್ತಿನ ಅಪಾರ್ಟ್ಮೆಂಟ್ನ ಮೇಲ್ಛಾವಣಿಯಿಂದ ಕೆಳಗೆ ತಳ್ಳಿ ಹತ್ಯೆ ಮಾಡಿರುವ ಭಯಾನಕ ಘಟನೆ ನಡೆದಿದೆ.
ರಾಜ್ಯ ರಾಜಧಾನಿ ರಾಂಚಿಯಿಂದ ಸುಮಾರು 170 ಕಿಮೀ ದೂರದಲ್ಲಿರುವ ಬರ್ವಡ್ಡಾ ಪೊಲೀಸ್ ಠಾಣಾ ವ್ಯಾಪ್ತಿಯ ಭೇಲತಾಂಡ್ ಪ್ರದೇಶದಲ್ಲಿ ನಿನ್ನೆ ಸಂಜೆ 5.30 ರಿಂದ 6 ಗಂಟೆಯ ನಡುವೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆ ಬಾಲಕಿಯ ತಾಯಿ, ಅದೇ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿರುವ ಇಬ್ಬರು ಆರೋಪಿಗಳು ಸೇರಿದಂತೆ ನಾಲ್ವರು ಶಂಕಿತ ಯುವಕರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಎಫ್ಐಆರ್ ಆಧಾರದ ಮೇಲೆ ಬುಧವಾರ ರಾತ್ರಿ ಇಬ್ಬರು ಯುವಕರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿರುವ ಉಪ ಪೊಲೀಸ್ ವರಿಷ್ಠಾಧಿಕಾರಿ ಅಮರ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಬಾಲಕಿ ಧನ್ಬಾದ್ ಮೂಲದ ಕಾನ್ವೆಂಟ್ ಶಾಲೆಯಲ್ಲಿ 12 ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು, ತನ್ನ ಮಗಳಿಗಿಂತ ಹಿರಿಯನಾದ ಅಪಾರ್ಟ್ಮೆಂಟ್ನ ಒಬ್ಬ ಹುಡುಗ ಆಗಾಗ್ಗೆ ಮಗಳೊಂದಿಗೆ ಮಾತನಾಡುತ್ತಿದ್ದನು ಎಂದು ಸಂತ್ರಸ್ತೆಯ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.
ಈ ವಿಚಾರದ ಬಗ್ಗೆ ನಾನು ಮಗಳಿಗೆ ಗದರಿಸಿ ಎಚ್ಚರಿಸಿದ್ದೆ, ಆತನಿಂದ ದೂರವಿರುವಂತೆ ಹೇಳಿದ್ದೆ. ನಿನ್ನೆ ಸಂಜೆ, ಹುಡುಗ ತನ್ನ ಸ್ನೇಹಿತರೊಬ್ಬರೊಂದಿಗೆ ಅಪಾರ್ಟ್ ಮೆಂಟಿನ ಮೊದಲ ಮಹಡಿಗೆ ಬಂದಿದ್ದ ಎಂದು ಸಂತ್ರಸ್ತೆಯ ತಾಯಿ ಪೊಲೀಸರಿಗೆ ವಿವರಿಸಿದ್ದಾರೆ.ಸಂತ್ರಸ್ತೆಯ ಕುಟುಂಬವು ಅಪಾರ್ಟ್ ಮೆಂಟಿನ ಮೊದಲ ಮಹಡಿಯಲ್ಲಿ ವಾಸಿಸುತ್ತಿದೆ. ಬಾಲಕಿಯನ್ನು ನಾಲ್ಕು ಅಂತಸ್ತಿನ ಅಪಾರ್ಟ್ ಮೆಂಟಿನ ಮೇಲ್ಛಾವಣಿಯಿಂದ ತಳ್ಳಿ ಕೊಂದುಹಾಕಲಾಗಿದೆ ಎಂದು ಹೇಳಿದರು.
ಮೇಲ್ಛಾವಣಿಯ ಮೇಲೆ ಒಂದು ಕುರ್ಚಿ ಪತ್ತೆಯಾಗಿದೆ. ಅಲ್ಲಿಗೆ ಕುರ್ಚಿ ತಂದವರು ಯಾರು ಮತ್ತು ಮೇಲ್ಛಾವಣಿಯಲ್ಲಿ ಎಷ್ಟು ಜನರು ಇದ್ದರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಬಾಲಕಿ ಹೋಗಿದ್ದ ಅಪಾರ್ಟ್ಮೆಂಟ್ನ ಲಿಫ್ಟ್ ಸೇರಿದಂತೆ ವಿವಿಧ ಸ್ಥಳಗಳಿಂದ ಬೆರಳಚ್ಚುಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಡಿಎಸ್ಪಿ ಹೇಳಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಉತ್ತಮ್ ಮುಖರ್ಜಿ, ಸಮಿತಿಯು ಘಟನೆಯ ಬಗ್ಗೆ ಗಮನಹರಿಸಿದ್ದು, ಸ್ಥಳ ಪರಿಶೀಲನೆ ನಂತರ ಪ್ರತಿಕ್ರಿಯೆ ನೀಡಲಿದೆ ಎಂದಿದ್ದಾರೆ.