'ಸರ್ಕಾರವನ್ನು ಟೀಕಿಸುವ ಕವಿತೆ ಓದಬೇಡಿ ಎಂದಿದ್ದಕ್ಕೆ ಫೆಸ್ಟ್‌ನಲ್ಲಿ ಭಾಗವಹಿಸುತ್ತಿಲ್ಲ': ಅಶೋಕ್ ವಾಜಪೇಯಿ

ಸರ್ಕಾರವನ್ನು ಟೀಕಿಸುವ ಕವಿತೆಗಳನ್ನು ಓದದಂತೆ ಸಂಘಟಕರು ಕೇಳಿಕೊಂಡಿದ್ದರಿಂದ ತಾವು ಕಲ್ಚರ್ ಫೆಸ್ಟ್‌ನಲ್ಲಿ ಭಾಗವಹಿಸುತ್ತಿಲ್ಲ ಎಂದು ಕವಿ ಅಶೋಕ್ ವಾಜಪೇಯಿ ಅವರು ಶುಕ್ರವಾರ ಹೇಳಿದ್ದಾರೆ.
ಅಶೋಕ್ ವಾಜಪೇಯಿ
ಅಶೋಕ್ ವಾಜಪೇಯಿ

ನವದೆಹಲಿ: ಸರ್ಕಾರವನ್ನು ಟೀಕಿಸುವ ಕವಿತೆಗಳನ್ನು ಓದದಂತೆ ಸಂಘಟಕರು ಕೇಳಿಕೊಂಡಿದ್ದರಿಂದ ತಾವು ಕಲ್ಚರ್ ಫೆಸ್ಟ್‌ನಲ್ಲಿ ಭಾಗವಹಿಸುತ್ತಿಲ್ಲ ಎಂದು ಕವಿ ಅಶೋಕ್ ವಾಜಪೇಯಿ ಅವರು ಶುಕ್ರವಾರ ಹೇಳಿದ್ದಾರೆ.

ತಮ್ಮನ್ನು ಸೆನ್ಸಾರ್ ಮಾಡಲಾಗುತ್ತಿದೆ ಎಂಬ ವಾಜಪೇಯಿ ಅವರ ಹೇಳಿಕೆಯನ್ನು ಉತ್ಸವದ ಸಹ-ಸಂಘಟಕರಾಗಿರುವ ರೇಖ್ತಾ ಫೌಂಡೇಶನ್‌ನ ವಕ್ತಾರರು ತಳ್ಳಿಹಾಕಿದ್ದಾರೆ.

ಸುಂದರ್ ನರ್ಸರಿಯಲ್ಲಿ ಝೀ ಆಯೋಜಿಸಿದ್ದ ಮೂರು ದಿನಗಳ ಆರ್ತ್ ಕಲ್ಚರ್ ಫೆಸ್ಟ್‌ನಲ್ಲಿ ಶುಕ್ರವಾರ ನಡೆದ ಕವಿಗೋಷ್ಠಿಯಲ್ಲಿ ಅನಾಮಿಕಾ, ಬದ್ರಿ ನಾರಾಯಣ್, ದಿನೇಶ್ ಕುಶ್ವಾಹಾ ಮತ್ತು ಮಾನವ್ ಕೌಲ್ ಸೇರಿದಂತೆ ಇತರ ಕವಿಗಳೊಂದಿಗೆ ವಾಜಪೇಯಿ ಅವರು ಪಾಲ್ಗೊಳ್ಳಬೇಕಿತ್ತು.

"ರಾಜಕೀಯ ಅಥವಾ ಸರ್ಕಾರವನ್ನು ನೇರವಾಗಿ ಟೀಕಿಸುವ ಕವಿತೆಗಳನ್ನು ಓದಬೇಡಿ ಎಂದು ನನ್ನನ್ನು ಕೇಳಿಕೊಂಡಿರುವುದರಿಂದ ಅರ್ಥ್ ಮತ್ತು ರೇಖ್ತಾ ಆಯೋಜಿಸಿರುವ ಸಂಸ್ಕೃತಿ ಉತ್ಸವದಲ್ಲಿ ನಾನು ಭಾಗವಹಿಸುವುದಿಲ್ಲ. ಈ ರೀತಿಯ ಸೆನ್ಸಾರ್ಶಿಪ್ ಅನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ" ಎಂದು 82 ವರ್ಷದ ಕವಿ ವಾಜಪೇಯಿ ಅವರು ಫೇಸ್‌ಬುಕ್‌ನಲ್ಲಿ ಹಿಂದಿಯಲ್ಲಿ ಬರೆದಿದ್ದಾರೆ.

ರೇಖ್ತಾ ಫೌಂಡೇಶನ್ ವಕ್ತಾರರು ವಾಜಪೇಯಿ ಅವರ ಹೇಳಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದು, ರೇಖ್ತಾ ಅಥವಾ ಝೀ ನ ಯಾವುದೇ ಸಂಘಟಕರು ಯಾರಿಗೂ ಇಂತಹದ್ದೆ ಕವಿತೆಗಳನ್ನು ಓದಬೇಕು ಎಂದು ಹೇಳಿಲ್ಲ ಎಂದಿದ್ದಾರೆ.

"ಅವರು ಫೆಸ್ಟ್ ನಲ್ಲಿ ಏನು ಹೇಳಲು ಬಯಸುತ್ತಿದ್ದಾರೆಂದು ನಾವು ಪ್ರತಿಯೊಬ್ಬರನ್ನು ಕೇಳಿದೆವು. ಅದನ್ನು ಕಾರ್ಯಕ್ರಮದಲ್ಲಿ ಅವರ ಪರಿಚಯಕ್ಕೆ ಸೇರಿಸುವುದಕ್ಕಾಗಿ ಮಾತ್ರ ಕೇಳಲಾಗಿದೆ. ನಾವು ಅಥವಾ ಝೀ ಅವರಿಗೆ ರಾಜಕೀಯಕ್ಕೆ ಸಂಬಂಧಿಸಿದಂತೆ ಏನನ್ನೂ ಓದಬೇಡಿ ಎಂದು ಹೇಳಿಲ್ಲ. ಅದು ನಿಜವಾಗಿದ್ದರೆ, ನಾವು ಎಲ್ಲರಿಗೂ ಅದನ್ನೇ ಹೇಳುತ್ತಿದ್ದೇವು ಎಂದು ರೇಖ್ತಾ ಫೌಂಡೇಶನ್‌ನ ಸಂವಹನ ಮುಖ್ಯಸ್ಥ ಸತೀಶ್ ಗುಪ್ತಾ ಪಿಟಿಐಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com