ಬಿಷ್ಣುಪುರ: ಮಣಿಪುರದಲ್ಲಿನ ಬಿಜೆಪಿ ಸರ್ಕಾರ ರಾಜ್ಯವನ್ನು ಭಯೋತ್ಪಾದನೆ, ಬಂದ್ ಗಳಿಂದ ಮುಕ್ತಗೊಳಿಸಿದ್ದು, ಅಭಿವೃದ್ಧಿಯ ಪಥದಲ್ಲಿ ಸಾಗಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಸಮರ್ಥಿಸಿಕೊಂಡಿದ್ದಾರೆ.
ಬಿಷ್ಣುಪುರ ಜಿಲ್ಲಯ ಮೊಯಿರಾಂಗ್ ನಲ್ಲಿ ಸುಮಾರು 1,007 ಕೋಟಿ ರೂ. ಮೊತ್ತದ ಒಂಬತ್ತು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು 12 ಯೋಜನೆಗಳನ್ನು ವರ್ಚುಯಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಅಮಿತ್ ಶಾ, ಬಿಜೆಪಿ ಸರ್ಕಾರ ರಾಜ್ಯದ ಆರು ಜಿಲ್ಲೆಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ 1958ನ್ನು ರದ್ದುಗೊಳಿಸಿ, ಬಂಡುಕೋರರನ್ನು ಮಣಿಸಲಾಯಿತು ಎಂದರು.
ಮಣಿಪುರದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದಾಗ ಭಯೋತ್ಪಾದನೆಯ ಪರಿಸ್ಥಿತಿಯಿತ್ತು. ಇದೀಗ ಇದು ಉತ್ತಮ ಆಡಳಿತವಿರುವ ಸಣ್ಣ ರಾಜ್ಯವಾಗಿದೆ. 8 ವರ್ಷಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ರೂ. 3.45 ಲಕ್ಷ ಕೋಟಿ ವೆಚ್ಚ ಮಾಡಿದ್ದು, ಈ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ 51 ಬಾರಿ ಭೇಟಿ ನೀಡಿರುವುದಾಗಿ ತಿಳಿಸಿದರು.
ಮಾದಕ ವಸ್ತು ಸಾಗಾಟ ಜಾಲದ ವಿರುದ್ಧ ಎನ್ ಬಿರೇನ್ ಸಿಂಗ್ ಸರ್ಕಾರ ಬೃಹತ್ ಕಾರ್ಯಾಚರಣೆ ಕೈಗೊಂಡಿರುವುದಾಗಿ ತಿಳಿಸಿದ ಅಮಿತ್ ಶಾ, ಮುಂದಿನ ಚುನಾವಣೆಯೊಳಗೆ ಮಣಿಪುರವನ್ನು ಮಾದಕ ವಸ್ತು ಮುಕ್ತಗೊಳಿಸಲಾಗುವುದು ಎಂದರು.
Advertisement