"ಬಿಜೆಪಿಗೆ ಸೇರಿ, ಇಲ್ಲವೇ ಬುಲ್ಡೋಜರ್...": ಕಾಂಗ್ರೆಸ್ ಕಾರ್ಯಕರ್ತರಿಗೆ ಮಧ್ಯ ಪ್ರದೇಶ ಸಚಿವರ ಬೆದರಿಕೆ
ಮಧ್ಯ ಪ್ರದೇಶದ ಸಚಿವರೊಬ್ಬರು ರಾಜ್ಯದಲ್ಲಿನ ಕಾಂಗ್ರೆಸ್ ಕಾರ್ಯಕರ್ತರಿಗೆ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ಸೇರುವಂತೆ ಬೆದರಿಕೆ ಹಾಕುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.
Published: 20th January 2023 12:22 AM | Last Updated: 27th January 2023 04:31 PM | A+A A-

ಮಹೇಂದ್ರ ಸಿಂಗ್ ಸಿಸೋಡಿಯಾ
ಗುನಾ, ಮಧ್ಯ ಪ್ರದೇಶ: ಮಧ್ಯ ಪ್ರದೇಶದ ಸಚಿವರೊಬ್ಬರು ರಾಜ್ಯದಲ್ಲಿನ ಕಾಂಗ್ರೆಸ್ ಕಾರ್ಯಕರ್ತರಿಗೆ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ಸೇರುವಂತೆ ಬೆದರಿಕೆ ಹಾಕುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.
ಇಲ್ಲಿನ ರುಥಿಯೈ ಪಟ್ಟಣದಲ್ಲಿ ಬುಧವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪಂಚಾಯತ್ ಸಚಿವ ಮಹೇಂದ್ರ ಸಿಂಗ್ ಸಿಸೋಡಿಯಾ ಅವರು, ಬಿಜೆಪಿಗೆ ಸೇರಿ, ಇಲ್ಲವೇ ಬುಲ್ಡೋಜರ್ ಕ್ರಮ ಎದುರಿಸಿ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇತರ ಕೆಲವು ಬಿಜೆಪಿ ಆಡಳಿತದ ರಾಜ್ಯಗಳಂತೆ, ಮಧ್ಯ ಪ್ರದೇಶದಲ್ಲೂ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪಿಗಳ ಮನೆಗಳನ್ನು ಬುಲ್ಡೋಜ್ ಮಾಡಲಾಗುತ್ತಿದೆ.
ಇದನ್ನು ಓದಿ: ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
"ಬಿಜೆಪಿಗೆ ಸೇರಿಕೊಳ್ಳಿ. ನಿಧಾನವಾಗಿ ಈ ಕಡೆ(ಆಡಳಿತ ಪಕ್ಷ) ಬನ್ನಿ. 2023 ರಲ್ಲಿ (ರಾಜ್ಯದಲ್ಲಿ ವಿಧಾನಸಭೆ ಚುನಾವಣೆ) ಮಧ್ಯ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚಿಸುತ್ತದೆ. ಇಲ್ಲದಿದ್ದರೆ ಬುಲ್ಡೋಜರ್ ಸಿದ್ಧವಾಗಿದೆ" ಎಂದು ಸಭೆಯಲ್ಲಿ ಸಿಸೋಡಿಯಾ ಹೇಳಿದ್ದಾರೆ ಎಂದು ವರದಿಯಾಗಿದೆ.
ಇದಕ್ಕೆ ತಿರುಗೇಟು ನೀಡಿರುವ ಗುಣ ಜಿಲ್ಲಾ ಕಾಂಗ್ರೆಸ್ ಮುಖ್ಯಸ್ಥ ಹರಿಶಂಕರ್ ವಿಜಯವರ್ಗಿಯ ಅವರು, ಸಚಿವರ ಹೇಳಿಕೆ ಬಿಜೆಪಿಯ ಪ್ರತಿಷ್ಠೆಗೆ ಧಕ್ಕೆ ತಂದಿದೆ ಎಂದಿದ್ದಾರೆ.