ಜಬಲ್ಪುರ: ಮಧ್ಯ ಪ್ರದೇಶದ ಜಬಲ್ಪುರ ಸೇನಾ ತರಬೇತಿ ಕೇಂದ್ರದಲ್ಲಿ 43 ವರ್ಷದ ಭಾರತೀಯ ಸೇನೆಯ ಕರ್ನಲ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
1-ತಾಂತ್ರಿಕ ತರಬೇತಿ ರೆಜಿಮೆಂಟ್(ಟಿಟಿಆರ್)ನಲ್ಲಿ ಕಮಾಂಡಿಂಗ್ ಆಫೀಸರ್ ಆಗಿ ನೇಮಕಗೊಂಡಿದ್ದ ಕರ್ನಲ್ ನಿಶಿತ್ ಖನ್ನಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾನುವಾರ ರಾತ್ರಿ 10.30 ರ ಸುಮಾರಿಗೆ ಒನ್ ಸಿಗ್ನಲ್ ತರಬೇತಿ ಕೇಂದ್ರದ ಅಧಿಕಾರಿಗಳ ಮೆಸ್ನ ಕೋಣೆಯಲ್ಲಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ(CSP) ಪ್ರಿಯಾಂಕಾ ಶುಕ್ಲಾ ಅವರು ಹೇಳಿದ್ದಾರೆ.
ಮೃತ ಸೇನಾ ಅಧಿಕಾರಿಯು "ಕ್ಷಮಿಸಿ" ಎಂದು ಬರೆದಿರುವ ಸೂಸೈಡ್ ನೋಟ್ ಪೊಲೀಸರಿಗೆ ಸಿಕ್ಕಿದೆ.
ಪ್ರಾಥಮಿಕ ತನಿಖೆಯಲ್ಲಿ ಕರ್ನಲ್ ಖನ್ನಾ ಅವರ ಆತ್ಮಹತ್ಯೆಗೆ ಕೌಟುಂಬಿಕ ಕಲಹವೇ ಕಾರಣ ಎಂದು ತಿಳಿದುಬಂದಿರುವುದಾಗಿ ಪ್ರಿಯಾಂಕಾ ಶುಕ್ಲಾ ತಿಳಿಸಿದ್ದಾರೆ.
ಮೃತ ಸೇನಾ ಅಧಿಕಾರಿಯು ಅಕ್ಟೋಬರ್ 25, 2022 ರಿಂದ ಅವರ ಪತ್ನಿ, ಮಗ ಮತ್ತು ಮಗಳನ್ನು ಒಳಗೊಂಡ ಕುಟುಂಬದಿಂದ ದೂರವಿದ್ದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
Advertisement