ಸ್ವದೇಶ್ ದರ್ಶನ್ 2.0 ಯೋಜನೆಯಡಿ ಹಂಪಿ ಸೇರಿ 36 ಸ್ಥಳಗಳ ಆಯ್ಕೆ ಮಾಡಿದ ಕೇಂದ್ರ ಸರ್ಕಾರ; ಪ್ರವಾಸೋದ್ಯಮಕ್ಕೆ ಉತ್ತೇಜನ

ಕೇಂದ್ರ ಸರಕಾರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯದ ವತಿಯಿಂದ ಪ್ರಾರಂಭಿಸಲಾದ ಸ್ವದೇಶ ದರ್ಶನ್‌ 2.0 ಯೋಜನೆ ಅಡಿಯಲ್ಲಿ ಮೊದಲ ಹಂತದಲ್ಲಿ 36 ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೇಂದ್ರ ಸರಕಾರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯದ ವತಿಯಿಂದ ಪ್ರಾರಂಭಿಸಲಾದ ಸ್ವದೇಶ್ ದರ್ಶನ್‌ 2.0 ಯೋಜನೆ ಅಡಿಯಲ್ಲಿ ಮೊದಲ ಹಂತದಲ್ಲಿ 36 ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಆಯ್ದ ಸ್ಥಳಗಳಿಗೆ ಮಾಸ್ಟರ್ ಪ್ಲಾನ್ ತಯಾರಿಸಲು ಸಲಹೆಗಾರರನ್ನು ನೇಮಿಸುವ ಪ್ರಕ್ರಿಯೆಯನ್ನು ಈಗಾಗಲೇ ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಪ್ರಾರಂಭಿಸಿದೆ ಎಂದು ವರದಿಗಳು ತಿಳಿಸಿವೆ.

ಈ ಯೋಜನೆಗೆ ಕೇಂದ್ರ ಸರ್ಕಾರ ಅನುದಾನವನ್ನು ಬಿಡುಗಡೆ ಮಾಡಲಿದ್ದು, ವಿವಿಧ ಸಂಸ್ಥೆಗಳ ಮೂಲಕ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ.

ನೇಮಕಗೊಂಡ ಪ್ರಾಜೆಕ್ಟ್ ಡೆವಲಪ್‌ಮೆಂಟ್ ಮತ್ತು ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್‌ಗಳು (ಪಿಡಿಎಂಸಿ) ಯೋಜನೆ, ಅಭಿವೃದ್ಧಿ ಮತ್ತು ಗಮ್ಯಸ್ಥಾನಗಳ ನಿರ್ವಹಣೆಯಲ್ಲಿ ಅಂತ್ಯದಿಂದ ಕೊನೆಯವರೆಗೆ ಬೆಂಬಲವನ್ನು ನೀಡುವ ಮೂಲಕ ಯೋಜನೆ ಅನುಷ್ಠಾನಗೊಳಿಸುವ ಸಂಸ್ಥೆಗಳಿಗೆ ಬೆಂಬಲ ನೀಡುತ್ತಾರೆ. ವಿನ್ಯಾಸದ ಜೊತೆಗೆ ಪ್ರವಾಸೋದ್ಯಮ ಸ್ಥಳಗಳಲ್ಲಿ ಅಭಿವೃದ್ಧಿಗೆ ಅಗತ್ಯವಾದ ಚಟುವಟಿಕೆಗಳ ಯಶಸ್ವಿ ಅನುಷ್ಠಾನ ಮತ್ತು ನಿರ್ವಹಣೆಯನ್ನು ಸಹ ಸಲಹೆಗಾರರು ಖಚಿತಪಡಿಸುತ್ತಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

19 ರಾಜ್ಯಗಳಿಂದ ಒಟ್ಟು 36 ಸ್ಥಳಗಳನ್ನು ಗುರುತಿಸಲಾಗಿದ್ದು, ಪಟ್ಟಿಯಲ್ಲಿ ಗಂಡಿಕೋಟಾ (ಆಂಧ್ರಪ್ರದೇಶ), ಕೊಕ್ರಜಾರ್ (ಅಸ್ಸಾಂ), ನಳಂದಾ (ಬಿಹಾರ), ಚಂಡೀಗಢ, ಧೋಲವೀರ (ಗೋವಾ), ಹಂಪಿ (ಕರ್ನಾಟಕ), ನಿಯುಲ್ಯಾಂಡ್ (ನಾಗಾಲ್ಯಾಂಡ್) ಮತ್ತು ಮಾಮಲ್ಲಪುರಂ (ತಮಿಳುನಾಡು) ಸ್ಥಳಗಳು ಇರುವುದು ಕಂಡು ಬಂದಿದೆ.

ಇತ್ತೀಚೆಗಷ್ಟೇ ಪ್ರವಾಸೋದ್ಯಮ ಸಚಿವಾಲಯವು ಸಂಬಂಧಪಟ್ಟ ಸಂಸ್ಥೆಗಳೊಂದಿಗೆ ಸಭೆಯೊಂದನ್ನು ನಡೆಸಿದ್ದು, ಪೂರ್ವ ಪ್ರಸ್ತಾವನೆಗಳ ಕುರಿತು ಮಾತುಕತೆ ನಡೆಸಿದೆ ಎಂದು ತಿಳಿದುಬಂದಿದೆ. ಸಭೆ ಬಳಿಕ ಯೋಜನೆ ಕುರಿತು ಸ್ಪಷ್ಟನೆಗಳು ಮತ್ತು ಅದಕ್ಕೆ ಅನುಗುಣವಾಗಿ ಷರತ್ತುಗಳನ್ನು ತಿದ್ದುಪಡಿ ಮಾಡದೆ ಎಂದು ವರದಿಗಳು ತಿಳಿಸಿವೆ.

ಸ್ವದೇಶ್ ದರ್ಶನ್ ಯೋಜನೆಯು ಕೇಂದ್ರೀಯ ವಲಯದ ಯೋಜನೆಯಾಗಿದ್ದು, 2014-15 ರಲ್ಲಿ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯ, ಭಾರತ ಸರ್ಕಾರವು ಥೀಮ್ ಆಧಾರಿತ ಪ್ರವಾಸಿ ಸರ್ಕ್ಯೂಟ್‌ಗಳ ಸಮಗ್ರ ಅಭಿವೃದ್ಧಿಗಾಗಿ ಯೋಜನೆ ಪ್ರಾರಂಭಿಸಿತು. ಈ ಯೋಜನೆಯು ಭಾರತದಲ್ಲಿ ಪ್ರವಾಸೋದ್ಯಮದ ಸಾಮರ್ಥ್ಯವನ್ನು ಉತ್ತೇಜಿಸಲು, ಅಭಿವೃದ್ಧಿಪಡಿಸಲು ಮತ್ತು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ.

ಸ್ವದೇಶ್ ದರ್ಶನ್ ಯೋಜನೆಯಡಿಯಲ್ಲಿ, ಪ್ರವಾಸೋದ್ಯಮ ಸಚಿವಾಲಯವು ಕೇಂದ್ರ ಹಣಕಾಸು ನೆರವನ್ನು ರಾಜ್ಯ ಸರ್ಕಾರಗಳಿಗೆ, ಕೇಂದ್ರಾಡಳಿತ ಪ್ರದೇಶದ ಆಡಳಿತಗಳಿಗೆ ಸರ್ಕ್ಯೂಟ್‌ಗಳ ಮೂಲಸೌಕರ್ಯ ಅಭಿವೃದ್ಧಿಗೆ ಒದಗಿಸುತ್ತದೆ.

ಇದರಿಂದಾಗಿ ಆಯಾ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆಗೆ ಪ್ರೇರಕ ಶಕ್ತಿ, ವಿವಿಧ ಕ್ಷೇತ್ರಗಳೊಂದಿಗೆ ಸಿನರ್ಜಿ ನಿರ್ಮಿಸಲು ಪ್ರವಾಸೋದ್ಯಮ ಕ್ಷೇತ್ರವನ್ನು ಪ್ರಮುಖವಾಗಿರಿಸುವ ಕಲ್ಪನೆಯೊಂದಿಗೆ ಸ್ವಚ್ಛ ಭಾರತ ಅಭಿಯಾನ, ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮುಂತಾದ ಇತರ ಯೋಜನೆಗಳೊಂದಿಗೆ ಸಂಯೋಜಿಸಲು ಈ ಯೋಜನೆಯನ್ನು ರೂಪಿಸಲಾಗಿದೆ. ಆಯಾ ನಗರಗಳಲ್ಲಿ ಪ್ರವಾಸೋದ್ಯಮವನ್ನ ಉತ್ತೇಜಿಸಲು ಹಾಗೂ ಅಭಿವೃದ್ದಿಗೊಳಿಸಲು ಇದು ಬಹಳ ಅನುಕೂಲವಾಗಲಿದೆ.

ಸ್ವದೇಶ್ ದರ್ಶನ್ ಯೋಜನೆಯು ದೇಶದ ಪ್ರವಾಸೋದ್ಯಮ ಅಭಿವೃದ್ಧಿ ಪಥದಲ್ಲಿ ಹೊಸ ಮೈಲಿಗಲ್ಲಾಗಿದೆ. ಭಾರತದಲ್ಲಿ ಪ್ರೇಕ್ಷಣೀಯ ಸ್ಥಳಗಳ ಸಂಖ್ಯೆಗೆ ಕೊರತೆಯಿಲ್ಲ. ಹೀಗಾಗಿ ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಸ್ವದೇಶ್ ದರ್ಶನ್ ಯೋಜನೆ ಮಹತ್ವದ ಯೋಜನೆಗಳಲ್ಲಿ ಒಂದೆನಿಸಿದೆ. ವಿಭಿನ್ನ ವಿಷಯದ ಪ್ರವಾಸಿ ಸರ್ಕ್ಯೂಟ್‌ಗಳನ್ನು ಸಂಯೋಜಿಸುವ ಮೂಲಕ ಒಟ್ಟಾರೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಯೋಜನೆಯನ್ನು ಪ್ರಾರಂಭಿಸಲಾಗಿದೆ.

ಕನಿಷ್ಠ ಮೂರು ಪ್ರಮುಖ ಪ್ರವಾಸಿ ಸ್ಥಳಗಳನ್ನು ಹೊಂದಿರುವ ಮಾರ್ಗಕ್ಕೆ ಪ್ರವಾಸಿ ಸರ್ಕ್ಯೂಟ್ ಎಂದು ಕರೆಯಲಾಗುತ್ತದೆ. ಪ್ರವಾಸಿಗರು ಆರಾಮದಾಯಕ ಪ್ರಯಾಣ ಮತ್ತು ಪ್ರವಾಸಿ ಸ್ಥಳದ ಆಕರ್ಷಣೆಯನ್ನು ಆನಂದಿಸಬಹುದು. ಸರ್ಕ್ಯೂಟ್ ಒಂದು ರಾಜ್ಯಕ್ಕೆ ಸೀಮಿತವಾಗಿರಬಹುದು ಅಥವಾ ಹಲವಾರು ರಾಜ್ಯಗಳಿಗೆ ವಿಸ್ತರಿಸಬಹುದು. ಇದೀಗ ಹಂಪಿ ಮತ್ತು ಮೈಸೂರು ಇಂತಹ ಸರ್ಕ್ಯೂಟ್‌ಗೆ ಸೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com