ಬಿಬಿಸಿ ಸಾಕ್ಷ್ಯಚಿತ್ರ ಕುರಿತ ಅನಿಲ್ ಆ್ಯಂಟೊನಿ ದೃಷ್ಟಿ ಅಪಕ್ವ: ತರೂರ್
ಗುಜರಾತ್ ಗಲಭೆಗಳ ಕುರಿತು ಬಿಬಿಸಿ ಹೊರತಂದಿರುವ ಸಾಕ್ಷ್ಯ ಚಿತ್ರದ ಕುರಿತ ಅನಿಲ್ ಆ್ಯಂಟೊನಿ ದೃಷ್ಟಿ ಅಪಕ್ವವಾದದ್ದು ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಶಶಿತರೂರ್ ಹೇಳಿದ್ದಾರೆ.
Published: 25th January 2023 03:37 PM | Last Updated: 25th January 2023 05:32 PM | A+A A-

ಶಶಿತರೂರ್
ನವದೆಹಲಿ: ಗುಜರಾತ್ ಗಲಭೆಗಳ ಕುರಿತು ಬಿಬಿಸಿ ಹೊರತಂದಿರುವ ಸಾಕ್ಷ್ಯ ಚಿತ್ರದ ಕುರಿತ ಅನಿಲ್ ಆ್ಯಂಟೊನಿ ದೃಷ್ಟಿ ಅಪಕ್ವವಾದದ್ದು ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಶಶಿತರೂರ್ ಹೇಳಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಎಕೆ ಆ್ಯಂಟೊನಿ ಅವರ ಪುತ್ರ ಅನಿಲ್ ಕೆ ಆ್ಯಂಟೊನಿ ಪ್ರಧಾನಿ ಮೋದಿಯವರು ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರ ನಿರ್ಬಂಧವನ್ನು ಸಮರ್ಥಿಸಿಕೊಂಡಿದ್ದು, ಭಾರತದ ವಿರುದ್ಧ ಪೂರ್ವಾಗ್ರಹಗಳ ಸುದೀರ್ಘ ಇತಿಹಾಸ" ಹೊಂದಿರುವ ಬಿಬಿಸಿ ಚಾನಲ್ ನ ಈ ಸಾಕ್ಷ್ಯ ಚಿತ್ರ ಭಾರತದ ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ ಎಂದು ಹೇಳಿದ್ದರು.
ಸಾಕ್ಷ್ಯ ಚಿತ್ರ ಕುರಿತ ತಮ್ಮ ಅಭಿಪ್ರಾಯವನ್ನು ಹಾಗೂ ಟ್ವೀಟ್ ನ್ನು ವಾಪಸ್ ಪಡೆಯಬೇಕು ಎಂಬ ಒತ್ತಡ ಹೆಚ್ಚಾಗಿ ಅಸಹಿಷ್ಣುತೆ, ನಿಂದನೆಯ ಫೋನ್ ಕರೆಗಳಿಂದ ಅಸಮಾಧಾನಗೊಂಡ ಆ್ಯಂಟೊನಿ ಕಾಂಗ್ರೆಸ್ ತೊರೆಯುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಕುರಿತ ಬಿಬಿಸಿ ಡಾಕ್ಯುಮೆಂಟರಿ ನಿರ್ಬಂಧ ಸಮರ್ಥಿಸಿಕೊಂಡ ಅನಿಲ್ ಆ್ಯಂಟೊನಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ!
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಿರುವನಂತಪುರಂ ಸಂಸದ ಹಾಗೂ ಕಾಂಗ್ರೆಸ್ ನಾಯಕ ಶಶಿ ತರೂರ್, ಬಿಬಿಸಿಯ ಡಾಕ್ಯುಮೆಂಟರಿಯನ್ನು ನೋಡಬೇಕೋ ನೋಡಬಾರದೋ ಎಂಬ ಆಯ್ಕೆಯ ಸ್ವಾತಂತ್ರ್ಯ ದೇಶದ ಜನಕ್ಕೆ ಇದೆ. ಯಾವುದೇ ವಿಷಯದ ಬಗ್ಗೆ ಡಾಕ್ಯುಮೆಂಟರಿ ಮಾಡುವ ಹಕ್ಕು ಬ್ರಿಟೀಶ್ ಪ್ರಸಾರ ಸಂಸ್ಥೆಗೆ ಇಲ್ಲ ಎಂದು ಯಾರು ಹೇಳಲು ಸಾಧ್ಯ? ಡಾಕ್ಯುಮೆಂಟರಿ ವೀಕ್ಷಿಸುವುದಕ್ಕೆ ದೇಶದ ಸಂವಿಧಾನ ಎಲ್ಲಾ ರೀತಿಯ ಹಕ್ಕನ್ನು ನೀಡಿದೆ ಎಂದು ಶಶಿ ತರೂರ್ ಹೇಳಿದ್ದಾರೆ.
ಬಿಬಿಸಿ ಸಾಕ್ಷ್ಯಚಿತ್ರ ದೇಶದ ಸಂಸ್ಥೆಗಳ ಬಗ್ಗೆ ಅತ್ಯಂತ ಅಪಾಯಕಾರಿ ಅಭಿಪ್ರಾಯ ಮೂಡಿಸುತ್ತದೆ ಹಾಗೂ ಸಾರ್ವಭೌಮತೆಗೆ ಧಕ್ಕೆಯಾಗುತ್ತದೆ ಎಂಬ ಅನಿಲ್ ಅವರ ನಿರ್ಧಾರದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಶಶಿ ತರೂತ್, ಅನಿಲ್ ದೃಷ್ಟಿಕೋನವನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದ್ದು, ಇದು ಅಪಕ್ವವಾದ ನಿಲುವು ಎಂದು ಹೇಳಿದ್ದಾರೆ.