ಇಂದು ಪ್ರತಿಯೊಬ್ಬ ಭಾರತೀಯನ ಆತ್ಮವಿಶ್ವಾಸ ಹೆಚ್ಚಾಗಿದೆ, ಭಾರತದೆಡೆಗೆ ವಿಶ್ವದ ದೃಷ್ಟಿಕೋನ ಬದಲಾಗಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು
ಇಂದು ಪ್ರತಿಯೊಬ್ಬ ಭಾರತೀಯನ ಆತ್ಮವಿಶ್ವಾಸವು ಹೆಚ್ಚಾಗಿರುವುದು ದೇಶದಲ್ಲಿ ಆಗಿರುವ ಬಹಳ ದೊಡ್ಡ ಬದಲಾವಣೆ, ಭಾರತದ ಕಡೆಗೆ ಪ್ರಪಂಚದ ದೃಷ್ಟಿಕೋನವು ಬದಲಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
Published: 31st January 2023 12:02 PM | Last Updated: 31st January 2023 07:09 PM | A+A A-

ಸಂಸತ್ತಿನ ಉಭಯ ಸದನಗಳನ್ನುದ್ದೇಶಿಸಿ ಚೊಚ್ಚಲ ಭಾಷಣ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ನವದೆಹಲಿ: ಇಂದು ಪ್ರತಿಯೊಬ್ಬ ಭಾರತೀಯನ ಆತ್ಮವಿಶ್ವಾಸವು ಹೆಚ್ಚಾಗಿರುವುದು ದೇಶದಲ್ಲಿ ಆಗಿರುವ ಬಹಳ ದೊಡ್ಡ ಬದಲಾವಣೆ, ಭಾರತದ ಕಡೆಗೆ ಪ್ರಪಂಚದ ದೃಷ್ಟಿಕೋನವು ಬದಲಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
ಇಂದು ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಿದ್ದು, ಮೊದಲಿಗೆ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮ್ಮ ಚೊಚ್ಚಲ ಭಾಷಣ ಮಾಡಿದರು. ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಭಾರತವನ್ನು ಅದರ ಗತ ವೈಭವಕ್ಕೆ ಹೋಲಿಕೆ ಮಾಡಿ ನೋಡುವಂತೆ ಮತ್ತು ಆಧುನಿಕತೆಯ ಪ್ರತಿ ಸುವರ್ಣ ಅಧ್ಯಾಯವನ್ನು ಒಳಗೊಂಡಿರುವ ಅಭಿವೃದ್ಧಿಯನ್ನು ನೋಡಲು ಜನರು ತಮ್ಮ ಪರಿಶ್ರಮ ಹಾಕಬೇಕೆಂದು ಹೇಳಿದರು.
ಭಾರತ ಸ್ವಾತಂತ್ರ್ಯದ ಶತಮಾನೋತ್ಸವ ಇನ್ನು 25 ವರ್ಷಗಳಲ್ಲಿ ಬರಲಿದ್ದು, ಈ 25 ವರ್ಷಗಳು 'ಅಮೃತ ಕಾಲ' 'ಆತ್ಮನಿರ್ಭರ್' (ಸ್ವಾವಲಂಬಿ) ಮತ್ತು ಅದರ ಮಾನವೀಯ ಜವಾಬ್ದಾರಿಗಳನ್ನು ಪೂರೈಸುವ ಭಾರತವನ್ನು ನಿರ್ಮಿಸುವ ಸಮಯವಾಗಿದೆ ಎಂದು ಹೇಳಿದರು. ಬಡತನವಿಲ್ಲದ ಮತ್ತು ಶ್ರೀಮಂತ ಮಧ್ಯಮ ವರ್ಗದ ಭಾರತವಾಗಿರುತ್ತದೆ. ಇಲ್ಲಿನ ಯುವಕರು ಮತ್ತು ಮಹಿಳೆಯರು ರಾಷ್ಟ್ರವನ್ನು ಮಾರ್ಗದರ್ಶಿಸುವ ಮುಂಚೂಣಿಯಲ್ಲಿದ್ದಾರ ಎಂದು ರಾಷ್ಟ್ರಪತಿಗಳು ಇಂದು ಕೊಂಡಾಡಿದರು.
ಸುಮಾರು ಒಂಬತ್ತು ವರ್ಷಗಳ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅಡಿಯಲ್ಲಿ, ದೇಶವು ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ಕಂಡಿದೆ, ದೊಡ್ಡ ಬದಲಾವಣೆ ಎಂದರೆ ಪ್ರತಿಯೊಬ್ಬ ಭಾರತೀಯನ ಆತ್ಮ ವಿಶ್ವಾಸವು ಉತ್ತುಂಗದಲ್ಲಿದೆ,ಇಂದು ಜಗತ್ತು ಬದಲಾಗಿದೆ ಮತ್ತು ಜಗತ್ತು ಭಾರತವನ್ನು ನೋಡುವ ರೀತಿ ಕೂಡ ಬದಲಾಗಿದೆ ಎಂದರು.
ಭಾರತವು ಹಿಂದೆ ತನ್ನ ಸಮಸ್ಯೆಗಳನ್ನು ಪರಿಹರಿಸಲು ಇತರರನ್ನು ಅವಲಂಬಿಸಿದ್ದರೆ, ಇಂದು ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಕೆಲಸ ಮಾಡುತ್ತಿದೆ. ದಶಕಗಳಿಂದ ಕಾಣೆಯಾಗಿದ್ದ ಮೂಲ ಸೌಕರ್ಯಗಳನ್ನು ಜನರಿಗೆ ನೀಡಲಾಗಿದೆ ಮತ್ತು ಸಮಾಜದ ಬಹುಕಾಲದ ಆಶಯವಾದ ಆಧುನಿಕ ಮೂಲಸೌಕರ್ಯಗಳನ್ನು ದೇಶದಾದ್ಯಂತ ನಿರ್ಮಿಸಲಾಗುತ್ತಿದೆ ಎಂದರು.
ಮೋದಿ ಸರ್ಕಾರದ ಅವಧಿಯಲ್ಲಿ ಡಿಜಿಟಲ್ ನೆಟ್ವರ್ಕ್ ವಿಸ್ತರಣೆ ಮತ್ತು ಭ್ರಷ್ಟಾಚಾರದ ವಿರುದ್ಧದ ಶಿಸ್ತುಕ್ರಮವನ್ನು ಅವರು ಇಂದು ಭಾಷಣದಲ್ಲಿ ವಿಶೇಷವಾಗಿ ಉಲ್ಲೇಖಿಸಿದರು. "ಭಾರತವು ಈಗ ಸ್ಥಿರ, ನಿರ್ಭೀತ ಮತ್ತು ನಿರ್ಣಾಯಕ ಮತ್ತು ದೊಡ್ಡ ಕನಸುಗಳನ್ನು ನನಸಾಗಿಸಲು ಕೆಲಸ ಮಾಡುವ ಸರ್ಕಾರವನ್ನು ಹೊಂದಿದೆ. ಇದು ಪ್ರಾಮಾಣಿಕತೆಯನ್ನು ಗೌರವಿಸುವ ಮತ್ತು ಬಡವರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅವರನ್ನು ಶಾಶ್ವತವಾಗಿ ಸಬಲೀಕರಣಗೊಳಿಸಲು ಕೆಲಸ ಮಾಡುವ ಸರ್ಕಾರವನ್ನು ಹೊಂದಿದೆ" ಎಂದು ಶ್ಲಾಘಿಸಿದರು.
LIVE: President Droupadi Murmu addresses both Houses of the Parliament https://t.co/nY2zeEnqAW
— President of India (@rashtrapatibhvn) January 31, 2023
ಸಂಸತ್ತಿನ ಬಜೆಟ್ ಅಧಿವೇಶನವು ಏಪ್ರಿಲ್ 6 ರವರೆಗೆ 27 ಅಧಿವೇಶನಗಳಲ್ಲಿ ನಡೆಯಲಿದ್ದು, ಬಜೆಟ್ ಪೇಪರ್ಗಳನ್ನು ಪರಿಶೀಲಿಸಲು ಒಂದು ತಿಂಗಳ ವಿರಾಮವಿದೆ. ಅಧಿವೇಶನದ ಮೊದಲ ಭಾಗವು ಫೆಬ್ರವರಿ 13 ರಂದು ಮುಕ್ತಾಯಗೊಳ್ಳಲಿದೆ. ಬಜೆಟ್ ಅಧಿವೇಶನದ ಎರಡನೇ ಹಂತ ಮಾರ್ಚ್ 12 ರಂದು ಮತ್ತೆ ಸೇರಲಿದ್ದು, ಏಪ್ರಿಲ್ 6 ರಂದು ಮುಕ್ತಾಯಗೊಳ್ಳಲಿದೆ.