ದತ್ತಾ ಸಮಂತಾ ಹತ್ಯೆ ಪ್ರಕರಣ: ಛೋಟಾ ರಾಜನ್ ಖುಲಾಸೆಗೊಳಿಸಿದ ಸಿಬಿಐ ಕೋರ್ಟ್
ಟ್ರೇಡ್ ಯೂನಿಯನ್ ನಾಯಕ ದತ್ತಾ ಸಮಂತ್ ಹತ್ಯೆ ಪ್ರಕರಣದಲ್ಲಿ ಗ್ಯಾಂಗ್ಸ್ಟರ್ ಛೋಟಾ ರಾಜನ್ನನ್ನು ಖುಲಾಸೆಗೊಳಿಸಿ ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.
Published: 28th July 2023 08:05 PM | Last Updated: 28th July 2023 08:05 PM | A+A A-

ಭೂಗತ ಪಾತಕಿ ಛೋಟಾ ರಾಜನ್
ಮುಂಬೈ: ಟ್ರೇಡ್ ಯೂನಿಯನ್ ನಾಯಕ ದತ್ತಾ ಸಮಂತ್ ಹತ್ಯೆ ಪ್ರಕರಣದಲ್ಲಿ ಗ್ಯಾಂಗ್ಸ್ಟರ್ ಛೋಟಾ ರಾಜನ್ನನ್ನು ಖುಲಾಸೆಗೊಳಿಸಿ ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ವಿಶೇಷ ಸಿಬಿಐ ನ್ಯಾಯಾಧೀಶ ಎ.ಎಂ.ಪಾಟೀಲ್ ಅವರು, ದತ್ತಾ ಕೊಲೆಗೆ ಸಂಬಂಧಿಸಿದಂತೆ ಛೋಟಾ ರಾಜನ್ ನನ್ನು ಆರೋಪ ಮುಕ್ತಗೊಳಿಸಿದೆ.
ಇದನ್ನು ಓದಿ: ಗ್ಯಾಂಗ್ ಸ್ಟರ್ ರವಿ ಪೂಜಾರಿ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್
1997ರ ಜನವರಿ 16ರಂದು ಜೀಪ್ನಲ್ಲಿ ಪೊವಾಯಿಯಿಂದ ಘಾಟ್ಕೋಪರ್ಗೆ ಹೋಗುತ್ತಿದ್ದಾಗ ಪದ್ಮಾವತಿ ರಸ್ತೆಯಲ್ಲಿ ದತ್ತಾ ಸಮಂತ್ ಅವರನ್ನು ನಾಲ್ವರು ಗುಂಡಿಕ್ಕಿ ಕೊಂದಿದ್ದರು.
ಪ್ರಾಸಿಕ್ಯೂಷನ್ ಪ್ರಕಾರ, ಮೋಟಾರು ಸೈಕಲ್ಗಳಲ್ಲಿ ಬಂದ ನಾಲ್ವರು ದಾಳಿಕೋರರು ಸಮಂತ್ ಅವರ ಜೀಪನ್ನು ಅಡ್ಡಗಟ್ಟಿ ಕನಿಷ್ಠ 17 ಸುತ್ತು ಗುಂಡು ಹಾರಿಸಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಸಮಂತ್ನನ್ನು ತಕ್ಷಣವೇ ಹತ್ತಿರದ ಅನಿಕೇತ್ ನರ್ಸಿಂಗ್ ಹೋಮ್ಗೆ ಕರೆದೊಯ್ಯಲಾಯಿತು. ಆದರೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಘಟನೆಯ ನಂತರ, ಡಾ.ಸಮಂತ್ ಅವರ ಚಾಲಕ ಭೀಮರಾವ್ ಸೋನಕಾಂಬಳೆ ಅವರು ನೀಡಿದ ದೂರಿನ ಆಧಾರದ ಮೇಲೆ ನಾಲ್ವರು ಅಪರಿಚಿತ ದಾಳಿಕೋರರ ವಿರುದ್ಧ ಸಾಕಿನಾಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಕ್ಟೋಬರ್ 2015 ರಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ರಾಜನ್ ನನ್ನು ಬಂಧಿಸಲಾಯಿತು. ನಂತರ, ಸಿಬಿಐ ರಾಜನ್ ವಿರುದ್ಧ ದಾಖಲಾಗಿದ್ದ ಎಲ್ಲಾ ಪ್ರಕರಣಗಳನ್ನು ವಹಿಸಿಕೊಂಡಿತು ಮತ್ತು ಸಮಂತ್ ಹತ್ಯೆ ಪ್ರಕರಣದಲ್ಲಿ ರಾಜನ್ ನನ್ನು ವಿಚಾರಣೆಗೆ ಒಳಪಡಿಸಿತ್ತು.